ಮುಂಡಿಗೆಗಳು
1) ಇಂದು ನೀ ಕರೆದು ತಾರೆ
ಇಂದು ನೀ ಕರೆದು ತಾರೆ
ಇಂದು ನೀ ಕರೆದು ತಾರೆ | ಬಾರದೆ ಶ್ರೀ ಗೋ -
ವಿಂದ ತಾ ಮುನಿದಿಹರೆ | ವಿರಹ ಬೇಗೆಯಲಿ
ಬೆಂದು ಸೈರಿಸಲಾರೆ || ಸಖಿಯೆ ನೀನು
ತಂದು ತೋರೆ |||| ಪ ||
ನೊಂದರೂ ಮನದಂದ ಕೊಡುವನು
ನಂದನಂದನನೆಂದು ಸೈರಿಸಿ
ಎಂದಿಗಗಲಿರಲಾರೆ ಕರೆತಂ
ದೊಂದುಗೂಡಿಸೆ ಮಂದಗಮನೆ || ಅ.ಪ ||
ಕಾಲಿಲ್ಲದೆಲೆ ಆಡುತ್ತ | ವೇದ ತಂದಿತ್ತ
ಕಾಲಿಲ್ಲದವನ ಪೊತ್ತ | ಅಮೃತ ತಂದಿತ್ತ
ಕಾಲತೂಗಿ ನೋಡುತ್ತ | ಗಜ ಉನ್ಮತ್ತ ||
ಕಾಲಿನಿಂದಲಿ ಕೊಲುವ ರೂಪದಿ
ಕಾಲಿನಲಿ ರಿಪುವನ್ನು ಸೀಳಿದ
ಕಾಲಿನಲಿ ತಾನಳೆದ ಮೇದಿನಿ
ಕಾಲಿನಲಿ ತಾ ನಡೆದ ಭಾರ್ಗವ
ಕಾಲಿನಲಿ ವನವಾಸ ಪೋದನ
ಕಾಲಿನಲಿ ಕಾಳಿಯನ ತುಳಿದನ
ಕಾಲಿನಲಿ ತ್ರಿಪುರರನು ಗೆಲಿದನ
ಕಾಲಿಗೆರಗುವೆ ತೇಜಿ ರೂಢನ || || 1 ||
ಎವೆಯಿಕ್ಕದೆ ನೋಡಿದ | ತಲೆಯ ತಗ್ಗಿಸಿ
ಕವಲುದಾಡೆಯೊಳಾಡಿದ | ಕಂಬದಿ ಮೂಡಿ
ತವಕದಿಂದಲಿ ಬೇಡಿದ | ಭೂಭುಜರ ಕಾಡಿದ ||
ಶಿವನ ಬಿಲ್ಲನು ಮುರಿದ ದೇವಕಿ
ಕುವರ ನಗ್ನದಿ ಹಯವನೇರಿದ
ವಿವಿಧ ವಾಧರ್ಿಯೊಳಾಡಿ ಗಿರಿಧರ
ಸವಿದು ಬೇರನು ಬಾಲಗೊಲಿದನು
ಅವನಿ ಬೇಡುತ ಕೊಡಲಿ ಪಿಡಿದನ
ಸವರಿ ದಶಶಿರ ಬೆಣ್ಣೆ ಕದ್ದನ
ಯುವತಿಯರ ವ್ರತಗೆಡಿಸಿ ಕುದುರೆಯ
ಹವಣುಗತಿಯಲಿ ಏರಿದಾತನ || || 2 ||
ವರ ಮತ್ಸ್ಯ ನಗಧರನ | ಸೂಕರ ಸಿಂಹನ
ತಿರುಕ ತಾಯ್ತರಿದವನ | ವರವಿತ್ತು ಶಬರಿಗೆ
ತುರುಗಾಯ್ದ ನಿವರ್ಾಣನ | ಅಶ್ವಾರೂಢನ ||
ಚರಿಸಿ ಹೊರೆಯನು ಹೊತ್ತ ಕ್ರೂರನ
ಉರವ ಸೀಳಿದ ವಿಪ್ರ ನೃಪರರಿ
ಧರಣಿಜೆಯ ವರಕೃಷ್ಣ ಗಗನದಿ
ಪುರವ ದಹಿಸಿದ ತೇಜಿರೂಢನ
ಮೆರೆವ ಜಲಜ ಕೂರ್ಮ ವರಹ
ನರಹರಿ ದ್ವಿಜ ಕೊರಳ ಕೊಯ್ದನ
ಧರಣಿಸುತೆ ವರಶೌರಿ ಬುದ್ಧನ
ತುರಗವೇರಿದ ಆದಿಕೇಶವ || || 3 ||
2)ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು
ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು
ನೀನೆ ವಿಚಾರಿಸಿ ಇಬ್ಬರ ನ್ಯಾಯವ || ಪ ||
ಮಗಳಿಗೆ ಮಗನಾದ ಮಗಳಿಗಳಿಯನಾದ
ಮಗಳ ಗಂಡಗೆ ಭಾವ ಮಾವನಾದುದ ಕೇಳಿ
ನಾನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ|| 1 ||
ವೈರಿಗೆ ವೈರಿಯಾದ ವೈರಿಗೆ ಸುತನಾದ
ವೈರಿಗಂಡಗೆ ತನ್ನ ಮಗಳ ಕೊಟ್ಟುದ ಕೇಳಿ
ನಾನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ || 2 ||
ಆನೆ ಬಿದ್ದರ ತನ್ನ ಗ್ಯಾನದಿಂದೇಳುವುದು
ಏನುಮಾಡಿದರು ಅದರ ಭಾವ ಹಿಂಗದು
ಜ್ಞಾನವಂತ ಕಾಗಿನೆಲೆಯಾದಿ ಕೇಶವನೆ || 3 ||
3)ಎಂದೆಂದು ಇಂಥ ಚೋದ್ಯವ ಕಂಡಿದ್ದಿಲ್ಲವೋ
ಎಂದೆಂದು ಇಂಥ ಚೋದ್ಯವ ಕಂಡಿದ್ದಿಲ್ಲವೋ|| ಪ ||
ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತು
ಲಂಘಿಸಿದ ಹುಲಿಯ ಕಂಡ ನರಿಯು ನುಂಗಿತು|| 1 ||
ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತು
ಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮ|| 2 ||
ಯೋಗಮಾಗರ್ಿ ಕಾಗಿನೆಲೆಯಾದಿಕೇಶವರಾಯ
ಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮ|| 3 ||
4)ಏನೆ ಮನವಿತ್ತೆ ಲಲಿತಾಂಗಿ
ಏನೆ ಮನವಿತ್ತೆ ಲಲಿತಾಂಗಿ | ಅಸ
ಮಾನ ಗೋವಳ ಕುಲವಿಲ್ಲದವನೊಳು || ಪ ||
ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ|| 1 ||
ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ || 2 ||
ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚಿನ್ನ ಆದಿಕೇಶವನೊಳು || || 3 ||
5)ಓಹೋ ಎನ ಜೀವ ಮೈಯೆಲ್ಲ ನವಗಾಯ
ಓಹೋ ಎನ ಜೀವ ಮೈಯೆಲ್ಲ ನವಗಾಯ
ಗಾಯ ಕಟ್ಟುವರಿಲ್ಲ ಗಾಳಿಹಾಕುವರಿಲ್ಲ || ಪ ||
ಮಾಡಿಲ್ಲ ಮಳಿಯಿಲ್ಲ ಮರದ ಮ್ಯಾಲೆ ನೀರ ಕಂಡೆ
ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ|| 1 ||
ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ
ಹೊತ್ತುಕೊಂಡು ತಿರುಗಿದೆ ರೊಕ್ಕದ ಪ್ರಾಣಿಯನ್ನು || 2 ||
ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ
ಒಡನೆ ಕರೆದಾರ ಕರಿತೈತಿ ರಂಜಣಿಕಿ ಹಾಲಣ್ಣ|| 3 ||
ಮೂರು ಮೊಳದಾ ಬಳ್ಳಿಗೆ ಆರು ಮೊಳದಾ ಕಾಯಣ್ಣ
ಆರು ಹತ್ತರ ಮೊಳದ ಕಾಯಿ ಕೊಯ್ವ ಕುಡುಗೋಲಣ್ಣ|| 4 ||
ಊರಮುಂದೆ ಹಿರಣ್ಯಕನ ಕೊರಳ ಕೊಯ್ವದ ಕಂಡೆ
ಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ|| 5 ||
ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯ
ಮಿಗೆ ಒಳಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ || 6 ||
6)ಕಾವನಯ್ಯನ ಕಳುಹು ರಮಣಿ
ಕಾವನಯ್ಯನ ಕಳುಹು ರಮಣಿ|| ಅ ||
ಕೋವಿದರು ಪಡೆದ ಬಡದಾದಿ ಕೇಶವನ || ಅ.ಪ. ||
ಚಂದ್ರವಂಶದ ರಾಯನನುಜಸಖನಾದವನ
ಚಂದ್ರವೈರಿಯ ಮೇಲೆ ಪವಡಿಸಿದನ
ಚಂದ್ರಮನ ಸೋದರಿಯ ಕೈಯ ಪಿಡಿದಂಥವನ
ಚಂದ್ರದಾಮನ ಮನೆಗೆ ಕಳುಹೆ ಕಮಲಾಕ್ಷಿ|| 1 ||
ಕಮಲನಾಭನ ಕಮಲಸಖಕೋಟಿತೇಜನ
ಕಮಲಕೋರಕದಿ ಜನಿಸಿದನಯ್ಯನ
ಕಮಲವನು ಕರದಲ್ಲಿ ಪಿಡಿದಿಹನ ಬೇಗದಲಿ
ಕಮಲವದದನನ ಮನೆಗೆ ಕಳುಹೆ ಕಮಲಾಕ್ಷಿ|| 2 ||
ಬಾಲತನದಲಿ ಬಹಳ ಅಸುರರನು ಸೀಳಿದನ
ಲೀಲೆಯಿಂದಲಿ ಭಕ್ತರನು ಸಲಹುತಿಹನ
ನೀಲಮೇಘಶ್ಯಾಮ ಭಾಗ್ಯಪುರದಲಿ ನಿಂದ
ಶ್ರೀಲತಾಂಗಿಯ ರಮಣ ಆದಿಕೇಶವನ|| 3 ||
7) ಕೇಶವ ಎನ್ನಿರೋ ಕ್ಲೇಶನಾಶನನ
ಕೇಶವ ಎನ್ನಿರೋ ಕ್ಲೇಶನಾಶನನ | ನನ್ನ
ಆಸೆಪಟ್ಟವರಿಗೆ ಅಧಿಕ ಫಲವೀವನ|| ಪ ||
ಸತಿಯ ತಮ್ಮನ ಸುತ ಸೋದರನಾದನ
ಮತಿವಂತ ಮಾವನ ಮಗಳ ತಂದಾತನ
ಮತ ಪಿಡಿದ ಮಾತೆಯ ಮೊಮ್ಮಗನ ಕೊಂದನ
ಕ್ಷಿತಿಯುತನಾಗಿ ಕರಿಯ ಕಾಯ್ದಾತನ|| 1 ||
ದಶಮುಖನಸಿಯ ಪೆಸರ ಭಕ್ತಗೊಲಿದನ
ಅಸದಳರೆನಿಪ ರನ್ನೆರೊಡಗೂಡಿದಾತನ
ಕುಸುಮಕೋದಂಡ ಗಂಡರ ಗಂಡನಾದನ
ಎಸೆವ ಬಾಣಕೆ ತನ್ನ ಎದೆಯಾಂತು ನಿಂತನ|| 2 ||
ದಾಸರ ಹೃದಯದೊಳಗೆ ನೆಲೆಸಿಪ್ಪನ
ದೇಶವರಿಕೆಯಲ್ಲಿ ನಯನವುಂಟಾದನ
ಮೋಸದಿಂ ಮುಂದಲೆ ತುಳಿದು ಭಂಗಿಸಿದನ
ದೇಶಾಧಿಪತಿ ಕಾಗಿನೆಲೆಯಾದಿ ಕೇಶವನ || 3 ||
8)ಕೆಂಪುಮೂಗಿನ ಪಕ್ಷಿ
ಕೆಂಪುಮೂಗಿನ ಪಕ್ಷಿ ತಂಪಿನೊಳಿರುವುದು
ನೆಂಪು ಬಲ್ಲವರು ಪೇಳಿ|| 1 ||
ಹಂಪೆಯ ವಿರೂಪಾಕ್ಷಲಿಂಗನಲ್ಲಿ
ಝಂಪಿಯನಾಡುತಿದೆ || || ಅ.ಪ. ||
ಆರುತಲೆಯು ಹದಿನಾರು ಕಣ್ಗಳುಂಟು
ಮೂರು ಮೂರು ನಾಲಗೆ
ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು
ಸೇರಿತು ತೆಂಕಲಾಗೆ|| 1 ||
ಬಲೆಯ ಬೀಸಿದರು ಸಿಕ್ಕದು ಆ ಮೃಗ
ಜಲದೊಳು ತಾ ನಿಲ್ಲದು
ನೆಲನ ಮೇಲಿರುವುದು ನಿಂತರೆ ಸಾವುದು
ಕುಲದೊಳಗಾಡುತಿದೆ|| 2 ||
ಸಕಲ ಕಲೆಯ ಬಲ್ಲ ಸೀತಳ ಮಲ್ಲಿಗೆ
ಬೇರೆಬೇರೆನಬಹುದು
ಚೆನ್ನಕೇಶವನಲ್ಲಿ ಕೃಪೆಯುಂಟಾದರೆ
ಅಲ್ಲುಂಟು ಇಲ್ಲಿಲ್ಲವೆ|| || 3 ||
9)ನಾಮ ಮುಂದೋ ಸ್ವಾಮಿ
ನಾಮ ಮುಂದೋ ಸ್ವಾಮಿ ವಿಭೂತಿ ಮುಂದೋ || ಅ ||
ಭೂಮಿ ಆಕಾಶ ಪೊತ್ತೋ ಆಕಾಶ ಭೂಮಿಯ ಪೊತ್ತೋ
ಭೂಮಿಯ ಮುಂದೋ ಆಕಾಶ ಮುಂದೋ ಸ್ವಾಮಿ|| 1 ||
ತತ್ತಿ ಹಕ್ಕಿಯ ಪೊತ್ತೋ ಹಕ್ಕಿ ತತ್ತಿಯ ಪೊತ್ತೋ
ತತ್ತಿಯು ಮುಂದೋ ಹಕ್ಕಿಯು ಮುಂದೋ ಸ್ವಾಮಿ || 2 ||
ಬೀಜ ವೃಕ್ಷವ ಪೊತ್ತೋ ವೃಕ್ಷ ಬೀಜವ ಪೊತ್ತೋ
ಬೀಜವು ಮುಂದೋ ವೃಕ್ಷವು ಮುಂದೋ ಸ್ವಾಮಿ || 3 ||
ಗಂಡ ಹೆಂಡಿರ ಪೊತ್ತೋ ಹೆಂಡಿರು ಗಂಡನ ಪೊತ್ತೋ
ಗಂಡನು ಮುಂದೋ ಹೆಂಡಿರು ಮುಂದೋ ಸ್ವಾಮಿ|| 4 ||
ಕನಕನು ಹೇಳಿದ ಬೆಡಗಿದು ಕಂಡವರೆಲ್ಲರು
ಮನದಲಿ ಚಿಂತಿಸಿ ಮಥಿಸಿ ನವನೀತ ಕಾಣಿರೋ || 5 ||
10) ನಾರಾಯಣ ಎನ್ನಿ ನಾರದವರದನ
ನಾರಾಯಣ ಎನ್ನಿ ನಾರದವರದನ
ನಾರಾಯಣ ಎನ್ನಿರೋ || ವೇದ
ಪಾರಾಯಣನಾಗಿ ಕರಿದು ಕಾಯ್ವಾತನ
ನಾರಾಯಣ ಎನ್ನಿರೋ || ಪ ||
ಶಿವನೊಳು ಕೂಡಿಯೆ ಶಿವವರ್ಣನಾದನ
ಶಿವನ ತುರುಬಿನೊಳು ಶಿವನ ಕಟ್ಟಿಸಿದನ ||
ಶಿವನ ಹರಿಯನು ಮಾಡಿ ಸೊಸೆಯನು ತಂದನ
ಶಿವದರುಶನವಾಗಿ ಶಿವನುತಾನಾದನ|| 1 ||
ಗರುಡವಾಹನನಾಗಿ ಗಜವನು ಪೊರೆದನ
ಗರುಡನ ಗಿರಿಯೊಳು ಕಡಲ ತಂದಾತನ ||
ಗರುಡನ ಮಾತೆಯಣ್ಣನ ಮುಖಪಡೆದನ
ಗರುಡ ಗಂಧರ್ವಪುರದಿ ಮೆರೆದಾತನ || 2 ||
ಸ್ವರ್ಣವಾಹನನಾಗಿ ಕರ್ಣಕುಂಡಲಧರನ
ಸ್ವರ್ಣಪಂಕದೊಳು ಶಿವನಪ್ಪಿಕೊಂಡನ ||
ಸ್ವರ್ಣಖಚಿತವಾದ ರಥದೊಳು ಪೊಕ್ಕನ
ನಿರ್ಣಯವಿದು ಕಾಗಿನೆಲೆಯಾದಿಕೇಶವನ|| 3 ||
11 ) ಪರಮಪುರುಷ ನೀನೆಲ್ಲಿಕಾಯಿ
ಪರಮಪುರುಷ ನೀನೆಲ್ಲಿಕಾಯಿ|| ಪ ||
ಸರಸಿಯೊಳಗೆ ಕೂಗಿರೆ ಕಾಯಿ |||| ಅ.ಪ.||
ಹಿರಿದು ಮಾಡಿದ ಪಾಪ ನುಗ್ಗೇಕಾಯಿ
ಹರಿ ನಿನ್ನ ಧ್ಯಾನ ಬಾಳೇಕಾಯಿ
ಸರುವ ಜೀವರಿಗುಣಿಸಿಯುಂಬದನೆಕಾಯಿ
ಅರಿಷಡ್ವರ್ಗಗಳೊದಗಿಲಿಕಾಯಿ|| 1 ||
ಕ್ರೂರವ್ಯಾಧಿಗಳೆಲ್ಲ ಹೀರೇಕಾಯಿ
ಘೋರದುಷ್ಕೃತಗಳು ಸೋರೇಕಾಯಿ ||
ಭಾರತದ ಕಥೆ ಕರ್ಣ ತುಪ್ಪಿರೆಕಾಯಿ
ವಾರಿಜಾಕ್ಷನೆ ಗತಿಯೆಂದಿಪ್ಪಿರೆಕಾಯಿ|| 2 ||
ಮುರಹರ ನಿನ್ನವರು ಅವರೆಕಾಯಿ
ಗುರುಕರುಣಾಮೃತ ಉಣಿಸೆಕಾಯಿ
ವರಭಕ್ತವತ್ಸಲನೆಂಬ ಹೆಸರುಕಾಯಿ
ಸಿರಿಯಾದಿಕೇಶವನಾಮಮೆಣಿಸೆಕಾಯಿ || 3 ||
12) ಬಯಲಬಾವಿನೀರಿಗ್ಹೊಂಟಾಳೊಬ್ಬ
ಬಯಲಬಾವಿನೀರಿಗ್ಹೊಂಟಾಳೊಬ್ಬ ಬಾಲಿ
ಹರಿಯೋ ಹೊಳಿನೀರಿಗ್ಹೊಂಟಾಳೊಬ್ಬ ಬಾಲಿ || ಅ ||
ಕಾಲಿಟ್ಟು ಮೊಗಿಬ್ಯಾಡ ಕೈಯಿಟ್ಟು ಹೊರಬ್ಯಾಡ
ನೀರಿಲ್ಲದೆ ಮನಿಗಿ ಬರಬ್ಯಾಡ || 1 ||
ಸತ್ತದ್ದು ತರಬ್ಯಾಡ ಜೀವದ್ದು ಕೊಲಬ್ಯಾಡ
ಬಾಡಿಲ್ಲದೆ ಮನಿಗಿ ಬರಬ್ಯಾಡ|| 2 ||
ಕಾಗಿನೆಲಿ ಕನಕದಾಸ ಹಾಕಿದ ಮುಂಡಿಗಿ
ಬಲ್ಲಂಥ ಒಡೆಯರು ಒಡೆದು ಹೇಳಿರಣ್ಣ || 3 ||
13) ಬಲ್ಲವರು ಪೇಳಿರೈ
ಬಲ್ಲವರು ಪೇಳಿರೈ ಭಾವದುಭಯಾರ್ಥ|| ಪ ||
ಎಲ್ಲಜನರಿಗೆ ಸುಸಮ್ಮತವಾದುದೀ ನಾಮ || ಅ.ಪ. ||
ಚಿತ್ತನಕ್ಷತ್ರದಲಿ ಪುಟ್ಟಿದಾತನ ಸೊಸೆ
ಮೃತ್ಯುವೆಂದೆಣಿಸಿ ಹೊರಡಿಸಿದಾತನ
ಉತ್ತರಾಯಣದೇವನ ಮಗಳಿಗಳುಪಿದನ
ಹೊತ್ತು ಹೋಗದು ಎನಗೆ ತೋರೆ ನಳಿನಾಕ್ಷಿ || 1 ||
ಅತ್ತ ಅಣ್ಣನ ಅಗ್ರಜನ ಕೈಯ್ಯಿಂದ
ಬತ್ತಲೆಗನ ಕರೆಸಿ ಒಲಿಸಿಕೊಂಡನ ||
ಉತ್ತ ಹೊಲದಿ ವೈದರ್ಭನಹನ ತಂಗೆಯ ಕೊಂಡು
ಮುತ್ತೈದೆ ಮಾಡಿ ಮೊಮ್ಮಗನ ಪಡೆದವನ|| 2 ||
ಉರಿಯ ಆಸರ ಕಳೆಯೆ ನೆರವನಿತ್ತಾತನ
ಧರೆಯೊಳಗೆ ಮೂವರನು ಗೆಲಿದು ||
ಭೂರಿವಾತರ್ೆಯ ಪಡೆದ ಆ ಮಹಾಮಹಿಮನ
ತೋರೆನಗೆ ಕಾಗಿನೆಲೆಯಾದಿಕೇಶವನ || 3 ||
14) ಬಲ್ಲವರು ಪೇಳಿರೈ ಲೋಕದೀ ಹದನು
ಬಲ್ಲವರು ಪೇಳಿರೈ ಲೋಕದೀ ಹದನು |
ಪುಲ್ಲಶರನನು ರಂಗ ಪೆತ್ತ ಮಹಿಮೆಯನು || ಪ ||
ಗರಿಯುಂಟು ನೋಡಿದರೆ ಪಕ್ಷಿಕುಲ ತಾನಲ್ಲ
ಧರೆಯ ಬೆನ್ನಲಿ ಪೊತ್ತು ಮಡಗಿಕೊಂಡಿಹುದು
ಬರಿಗಾಲ ಭಾರದಲಿ ನಡೆಯಲೊಲ್ಲದು ಮುಂದೆ
ಎರಡು ಮೆಯ್ಯೊಂದಾಗಿ ಕೂಡಿಸಿಕೊಂಡಿಹುದು || 1 ||
ಇಳೆಯಲ್ಲಿ ಒಂದುಪದ ಗಗನದಲಿ ಒಂದುಪದ
ಕುಲವೈರಿಗಳ ಕೊಂದು ನಲಿದಾಡುತಿಹುದು ||
ಹೊಲದೊಳಗೆ ಜೋಡಗಲಿ ತಿರುಗಾಡುತಿಹುದು ಅದು
ಕಳದೋಳೇಕಂಬುಗಳ ಹರಡಿಕೊಂಡಿಹುದು|| 2 ||
ಜನಿಸಿದಾ ಬಳಿಯಲ್ಲಿ ತಾ ಲಜ್ಜೆ ತೊರೆದಿಹುದು
ಕುಣಿದಾಡುತಿದೆ ಹರಿಯ ತಲೆ ತುರಗವೇರಿ ||
ಕನಕನೊಡೆಯನು ಕಾಗಿನೆಲೆಯಾದಿಕೇಶವನ
ಜನಕೆ ನಿತ್ಯವನು ಪ್ರಸಾದವನು ಕೊಡುತಿಹುದು || 3 ||
16) ಬಲ್ಲವರು ಪೇಳಿರೈ ಬಹುವಿಧದ ಚತುರತೆಯ
ಬಲ್ಲವರು ಪೇಳಿರೈ ಬಹುವಿಧದ ಚತುರತೆಯ
ಎಲ್ಲರಿಗು ಸಮ್ಮತವು ಏಕಾಂತವಲ್ಲ || ಪ ||
ಕಂಕಣಕೆ ಮೊದಲೇನು ಕಾಮರ್ುಗಿಲ ಕಡೆಯೇನು
ಶಂಕರನ ಹೆಮ್ಮಗನ ಮುಖದ ಸಿರಿಯೇನು ||
ಪಂಕಜಕೆ ಕುರುಹೇನು ಪಾಥರ್ಿವರ ತಪವೇನು
ಅಂಕಿತಕೆ ಗುರುತೇನು ಅಜನ ಗುಣವೇನು || 1 ||
ಕಲಿಗಳಿಗೆ ಕಣ್ಣೇನು ಕಾವನಿರುಹುಗಳೇನು
ಲಲನೆಯೆ ಒಲಿಸುವ ಲೀಲೆ ಮತ್ತೇನು ||
ನೆಲೆಕ ಸಾಕ್ಷಿಗಳೇನು ನ್ಯಾಯದಾ ಪರಿಯೇನು
ಬಲವ ನಿಲಿಸುವುದೇನು ಭಾಗ್ಯವಿದು ಏನು || 2 ||
ಸತ್ಯಕ್ಕೆ ಕುರುಹೇನು ಪೃಥ್ವಿಗೆ ಕಡೆಯೇನು
ಚಿತ್ತವನು ಸೆಳೆದೊಯ್ವ ಕಪಟತನವೇನು ||
ಮತ್ರ್ಯದೊಳು ಕಾಗಿನೆಲೆಯಾದಿಕೇಶವನಂಘ್ರಿ
ಅತರ್ಿಯಿಂದಲಿ ಕೂಡಿದುದಕೆ ಫಲವೇನು || 3 ||
17) ಬಾ ರಂಗ ಎನ್ನ ಮನಕೆ
ಬಾ ರಂಗ ಎನ್ನ ಮನಕೆ | ಭಾವಜನಯ್ಯ
ಬಾ ರಂಗ ಎನ್ನ ಮನಕೆ|| ಪ ||
ಭಾವಮೈದುನ ಬಾರೊ ಮಾವಬೀಗನ ಅನುಜ
ಮಾವನ ಮಡದಿಯ ಮಗಳ ತಂಗಿಯ ಗಂಡ || 1 ||
ಅತ್ತೆ ಮೈದುನ ಬಾರೊ ಅತ್ತೆಯ ಮಗಳ ಗಂಡ
ಅತ್ತಿಗೆ ಮೇಲ್ ಅತ್ತಿಗೆ ಮಗಳ ಗಂಡ|| 2 ||
ಅಂಬುಧಿಶಯನನೆ ಬಾರೊ ಆದಿಮೂರುತಿ ರಂಗ
ಕಂಬವೊಡೆದು ಬಂದ ಆದಿಕೇಶವರಾಯ || 3 ||
18) ಬಿತ್ತಾಕ ಹೋದಲ್ಲಿ
ಬಿತ್ತಾಕ ಹೋದಲ್ಲಿ ಬಿಡದೆ ಮಳೆಹೊಡೆದು || ಅ ||
ಜತ್ತಿಗಿ ತೊಯ್ದು ಮಿಣಿತೊಯ್ದು
ಜತ್ತಿಗಿ ತೊಯ್ದು ಮಿಣಿತೊಯ್ದು ಉಡಿಯಾಗ
ಬಿತ್ತಬೀಜ ತೊಯ್ದು ಮೊಳಕೆವೊಡೆದೊ || 1 ||
ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳದುದ್ದ ತೆನೆಹಾಯ್ದೊ
ಮೆತ್ತಗೆ ಬಂದ ಮೇಯಾಕ
ಮೆತ್ತಗೆ ಬಂದ ಮೇಯಾಕ ಗಿಣಿರಾಮ
ಹತ್ತಿರ ನಿಂತ ಬೆರಗಾಗಿ || 2 ||
ಕಾಗಿನೆಲೆ ಕನಕಪ್ಪ ಹಾಕಿದ ಮುಂಡಿಗೆ
ತೂಗುತ್ತ ಒಡಚದಿದ್ದರೆ ಓ ಗೆಣೆಯ
ಆದಿಕೇಶವನ ಪದದಾಣೆ || 3 ||
19) ಬೀಜ ಮೂರನು ಬಿತ್ತಿ
ಬೀಜ ಮೂರನು ಬಿತ್ತಿ ಸಾಜಬೀಜವ ತೋರಿ
ರಾಜನಿಗೆ ಪಾಲೊಂದು ರಾಜ್ಯಕ್ಕೆ ಎರಡು || ಪ ||
ಬೀಜ ಕದರಿಕೆ ಕಾಲು ಬೀಜ ಬಿಳಿದಕೆ ಮೋರೆ
ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು
ರಂಜಕದ ಭೇರಿಗೆ ರಾಗ ಮೂವತ್ತೆರಡು
ಕುಂಜರದ ಗಮನೆ ಕೋವಿದನ ಅರಸಿ || 1 ||
ಐದುಮಾತಿನ ಮೇಲೆ ವೈದಿಕರೆಂಬವರು
ಐದುದೀವಿಗೆ ಗಾಳಿ ಬೀಸಲೆಂದು
ಬೂದಿಹಾರಿದ ಮಣ್ಣಮೇಲೆ ಮುದ್ದೆಯ ಕಲಸಿ
ಆದ ಲೋಲರು ಪೇಳಿ ಈ ಸೊಬಗುಬೆಡಗ|| 2 ||
ಎರಡು ನಂದಿಯ ಹೊಡಿ ಗರುಡಹೊಲವನು ಉತ್ತು
ಹರಗಿ ಮುಚ್ಚಿದ ಕೋಲನರಿದನೆಂದು
ಹರಿಯ ದಾಸರ ಕನಕ ಹಾಕಿದೀ ಮುಂಡಿಗೆಯ
ಸಿರಿಯಾದಿ ಕೇಶವನ ಪದದಾಣೆ ಪೇಳಿ|| 3 ||
20) ಮರ ನುಂಗುವ ಪಕ್ಷಿ
ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ | ಇದರ
ಕುರುಹ ಪೇಳಿ ಕುಳಿತಿದ್ದ ಜನರು || ಪ ||
ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗಿಲ್ಲವು
ಕುಂಟಮನುಜರಂತೆ ಕುಳಿತಿಹುದು ಮನೆಯೊಳಗೆ
ಎಂಟುಹತ್ತರ ಅನ್ನವನು ಭಕ್ಷಿಸುವುದು|| 1 ||
ನುಡಿಯುತ್ತಲುಂಬುದು ನಡುನೆತ್ತಿಯಲಿ ಬಾಯಿ
ಕಡುನಾದದ ಗಾನ ಮಾಡುತ್ತಲಿಹುದು
ಅಡವಿಯೊಳು ಹುಟ್ಟುವುದು ಅಗಲಿ ಎರಡಾಗುವುದು
ಬಡತನವು ಬಂದಾಗ ಬಹಳ ರಕ್ಷಿಪುದು || 3 ||
ಕಂಜಲೋಚನೆಯರ ಕರದಿ ನಲಿದಾಡುವುದು
ಎಂಜಲ ತಿನಿಸುವುದು ಮೂರು ಜಗಕೆ
ರಂಜಿಸುವ ಮಣಿಯ ಸಿಂಹಾಸನದ ಮೇಲಿಪ್ಪ
ಕುಂಜರವರದಾದಿಕೇಶವನೆ ಬಲ್ಲ || 4 ||
21 ) ಮರೆಯದೆ ನೆನೆ ಚಿನ್ಮಯನ
ಹರಿನಾರಾಯಣ ಅಚ್ಯುತನ || ಪ ||
ಮಗಳ ತಾನೆ ಮದುವೆಯಾದನ
ಮಗಳ ಮಗನ ಮೊಮ್ಮಗನ
ಮಗಳ ಗಂಡನ ಮೇಲೆ ಮಲಗಿದ ಜಾಣನ
ಮಗಳ ಮಾವನಿಗೆ ಮೈದುನನ|| 1 ||
ತಂದೆಗೆ ತಾನೆ ತಂದೆಯಾದವನ
ತಂದೆಗೆ ತಾಯಿಯ ತಂದವನ
ತಂದೆಗೆ ಪೂರ್ವದಿ ತಾ ಪುಟ್ಟಿರುವನ
ತಂದೆಗೆ ತಂದೆಗೆ ತಂದೆಯಹನ || 2 ||
ರಾಮನ ಸಮರೋದ್ದಾಮನ ಸುಗುಣಾಭಿ
ರಾಮನ ಸಿತಾನಾಯಕನ
ಕಾಮನ ಪೆತ್ತನ ಕಮಲದಳಾಕ್ಷನ
ಪ್ರೇಮದಿ ನೆಲೆಯಾದಿಕೇಶವನ || 3 ||
22) ಮುತ್ತುಗಳಾ ಹಣ್ಣು ಕಾಯಾದ
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು
ಮತ್ತೊಂದು ಚೋದ್ಯ ಕೇಳಿ
ಚಿತ್ರದ ಹೂವಿನ ಹವಳ ಕಾಯಾಗುವ
ಅರ್ಥವ ತಿಳಿದು ಪೇಳಿ || 1 ||
ಸುಟ್ಟ ಬೀಜವ ಬಿತ್ತಿ ಬೆಳೆಯಬಾರದ ಕಾಯಿ
ಬೆಟ್ಟದಿ ಸಾರವನು
ತೊಟ್ಟು ಇಲ್ಲದ ಹಣ್ಣು ಮುಟ್ಟಿ ಕೊಯ್ವನು ಒಬ್ಬ
ಹುಟ್ಟುಬಂಜೆಯ ಮಗನು || 2 ||
ಒಣಗಿದ್ದ ಮರನೇರಿ ಹಣ್ಣುಕಾಯನು ಮಗನು
ದಣಿಯದೆ ಮೆದ್ದಿಳಿದ
ರಣದಲ್ಲಿ ತಲೆಹೊಯ್ದು ರುಂಡವು ಬೀಳಲು
ಹೆಣನೆದ್ದು ಕುಣಿದಾಡಿತು|| 3 ||
ಕಣ್ಣಿಲ್ಲದಾತನು ಕಮಡು ಪಿಡಿದ ಮೃಗ
ಕೈಯಿಲ್ಲದಾತನೆಚ್ಚ
ಮಣ್ಣಲಿ ಹೊರಳುವ ಕಾಲಿಲ್ಲದಾತನು
ಗಣ್ಯವಿಲ್ಲದೆ ಪಿಡಿದ|| 4 ||
ಎಲ್ಲರೂ ಕೇಳಿರಿ ಕನಕ ಪೇಳಿದ ಮಾತ
ಸೊಲ್ಲನು ಗ್ರಹಿಸಿಕೊಳ್ಳಿ
ಬೆಳ್ಳಿಕಣ್ಣಿನವರು ತಿಳಿಯಲಾರದ ಮಾತ
ಬಲ್ಲಾದಿಕೇಶವನು || 5 ||
23) ಮೂವವರೇರಿದ ಬಂಡಿ
ಮೂವವರೇರಿದ ಬಂಡಿ ಹೊರೆನೆನ್ನದು
ದೇವಕೀನಂದನನು ತಾನೊಬ್ಬ ಬಲ್ಲ || ಪ ||
ಆಡಿ ಪೊತ್ತವನೊಬ್ಬ ನೊಡಿ ತಿರುಗಿದನೊಬ್ಬ
ಓಡಾಡಿದವನೊಬ್ಬ ಈ ಮೂವರು
ಆಡಿದಗೆ ಕಿವಿಯಿಲ್ಲ ನೋಡಿದನ ಮಗ ಪಾಪಿ
ಓಡಾಡಿದವನೊಬ್ಬ ಓಡನಯ್ಯ|| 1 ||
ಮಾಯಕಾರನು ಒಬ್ಬ ಕಾಯ ಬಡಲಿಗನೊಬ್ಬ
ಕಾಯಗಿರಿ ಪೊತ್ತೊಬ್ಬ ಈ ಮೂವರು
ಮಾಯಕಾರಗೆ ರೂಪ ಕಾಯಬಡಲಿಗ ಚೆಲ್ವ
ಕಾಯಗಿರಿ ಪೊತ್ತವನು ಕಡುಧಮರ್ಿಯು|| 2 ||
ಹರಿಯು ಮಾವನ ಕೊಂದ ಹರಿಗಳಿಯ ತಾನೆಂದ
ಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪ
ಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದ
ಸಿರಿಧರನು ಕಾಗಿನೆಲೆಯಾದಿಕೇಶವರಾಯ || 3 ||
24) ಮಂಗಳಾರತಿಯ ಪಾಡಿರೆ
ಮಂಗಳಾರತಿಯ ಪಾಡಿರೆ | ಮಾನಿನಿಯರು
ಮಂಗಳಾರತಿಯ ಪಾಡಿರೆ|| ಪ ||
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ |
ಚಂದದಿ ಪಡೆದನ ನಂದನೆಯಳ ನಲ-
ವಿಂದ ಧರಿಸಿದ ಮುಕುಂದಗೆ || 1 ||
ರಥವನಡರಿ ಸುರಪಥವನು ಸುರುಪತವನು ತಿರುಗುವನ
ಸುತನಿಗೆ ಶಾಪವನಿತ್ತವನ |
ಖತಿಯನು ತಡೆದನ ಸತಿಯ ಜನನಿಸುತನ
ಸತಿಯರನಾಳಿದ ಚತುರನಿಗೆ || 2 ||
ಹರಿಯ ಮಗನ ಶಿರತರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭುಜಿಸಿದನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿಕೇಶವಗೆ || 3 ||
25) ಮಂದರಧರಪಾವನ
ಮಂದರಧರಪಾವನ ಇಂದಿರಾರಮಣನ
ಗೋವಿಂದ ಎನ್ನಿರೋ || ಪ ||
ನಂದನಕಂದ ಮುಕುಂದಾಬ್ಧಿಶಯನ
ಗೋವಿಂದ ಎನ್ನಿರೋ || ಅ.ಪ. ||
ಗರಳಕಂಧರಸಖನನುಜನ ಕೊಂದನ | ಗೋವಿಂದ ಎನ್ನಿರೋ ||
ಸುರಮುನಿಯನುಜನ ಪಾದವ ಪಿಡಿದನ | ಗೋವಿಂದ ಎನ್ನಿರೋ ||
ಪರಮವೈಷ್ಣವರ ಕೈಲಿ ದಾನಪಿಡಿದನ | ಗೋವಿಂದ ಎನ್ನಿರೋ ||
ಉರಗನ ಮಗಳ ಗಂಡಗೆ ಪ್ರಾಣವಿತ್ತನ | ಗೋವಿಂದ ಎನ್ನಿರೋ|| 1 ||
ಸತಿರುಕ್ಮಿಣಿಯ ರಾಧೆಯ ಚುಂಬಿಸಿದಾತನ | ಗೋವಿಂದ ಎನ್ನಿರೋ ||
ಅತಿಶಯದಿಂದಲಿ ಸತಿರೂಪತಾಳ್ದನ | ಗೋವಿಂದ ಎನ್ನಿರೋ ||
ಪಿತನ ಮಾತನು ಶಿರದೊಳಗಾಂತು ನಡೆದನ | ಗೋವಿಂದ ಎನ್ನಿರೋ ||
ಮತಿವಂತನಾಗಿ ಮಾತೆಯ ಶಿರತರಿದನ | ಗೋವಿಂದ ಎನ್ನಿರೋ || 2 ||
ಕರೆತರಿಸಿದ ಮಾವನನು ಕೊಂದಾತನ | ಗೋವಿಂದ ಎನ್ನಿರೋ ||
ಧರೆಯನೊಯ್ದಸುರನ ಕಾಯವ ಕಳೆದನ | ಗೋವಿಂದ ಎನ್ನಿರೋ ||
ಈರೇಳುಭುವನವ ಉದರದೊಳಿಟ್ಟನ | ಗೋವಿಂದ ಎನ್ನಿರೋ ||
ಮಾರಜನಕ ಕಾಗಿನೆಲೆಯಾದಿಕೇಶವನ | ಗೋವಿಂದ ಎನ್ನಿರೋ |||| 3 ||
26) ಲಟಪಟ ನಾ ಸಟೆಯಾಡುವನಲ್ಲ
ಲಟಪಟ ನಾ ಸಟೆಯಾಡುವನಲ್ಲ
ವಿಠಲನ ನಾಮ ಮರೆತುಪೋದೆನಲ್ಲ || ಪ ||
ಶೇಷಗಿರಿಯ ಮೇಲೆ ಸವುತೆಯ ಬಿತ್ತ
ದೇವಗಿರಿಯ ಮೇಲೆ ಅವತಾರವಿತ್ತ
ಹಾಳೂರಿನೊಳಗೊಬ್ಬ ಕುಂಬಾರ ಸತ್ತ
ಗೋಕರ್ಣದೊಳಗೊಬ್ಬ ಪರದೇಶಿ ಅತ್ತ|| 1 ||
ಆ ಸಮಯದಿ ಮೂರು ರಾಯರ ಕಂಡೆ
ಕುಪ್ಪಸತೊಟ್ಟ ಕೋಳಿಯ ಕಂಡೆ
ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ
ನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ || 2 ||
ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ
ಆಡೊಂದು ಮದ್ದಳೆ ಬಡಿವುದ ಕಂಡೆ
ಕಪ್ಪೆ ತತ್ತೈ ಎಂದು ಕುಣಿವುದ ಕಂಡೆ
ಬಡದಾದಿಕೇಶವನ ಕಣ್ಣಾರೆ ಕಂಡೆ || 3 ||
27) ವನಜಾಕ್ಷಿಯರ ಮನದಿಷ್ಟಾರ್ಥವೀವನ
ವನಜಾಕ್ಷಿಯರ ಮನದಿಷ್ಟಾರ್ಥವೀವನ ಶ್ರೀ ಕೃಷ್ಣ ಎನ್ನಿರೋ
ಮನುಮುನಿಜನರನು ಅನುದಿನ ಪೊರೆವನ ಶ್ರೀ ಕೃಷ್ಣ ಎನ್ನಿರೋ|| ಪ ||
ಪಣ್ಣಕೊಯ್ದನನುಜಗೆ ಸಹಾಯನಾದನ
ಸಣ್ಣಸೀರೆಯ ನಲ್ವೆಣ್ಣುರೂಪಾದನ
ಅಣ್ಣನ ವೈರಿಯ ಮಗನ ಕೊಂದಾತನ
ಬಣ್ಣಿಸಲರಿಯೆ ನಾನಿವನ ಮಹಿಮೆಯ || 1 ||
ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ
ಹೆತ್ತವಳಿರೆ ತಾಯ ಬೇರೆ ಪಡೆದಾತನ
ಮತ್ತೇಭಗಾಮಿನಿಗಾಗಿ ವನವಾಸಪೋದನ
ಮತ್ತೆ ಹಿರಣ್ಯಗೆ ಕಂಬದಲಿ ತೋರ್ದನ|| 2 ||
ಉಗುರುಕೊನೆಗಳಿಂದ ನಗವನೆತ್ತಿದನ
ಬೊಗಸೆಕಂಗಳ ಬಾಲೆಯರನು ತಂದಾತನ
ಮಗಳ ಗಂಡನ ಶಿರವನ್ನೆ ಛೇದಿಸಿದನ
ಸುಗುಣರನ್ನ ಕಾಗಿನೆಲೆಯಾದಿಕೇಶವನ || 3 ||
28) ಶ್ರೀರಾಮ ಎನ್ನಿರೋ
ಶ್ರೀರಾಮ ಎನ್ನಿರೋ
ಮೂಜಗದವರೆಲ್ಲ
ಈರೇಳು ಭುವನ ತನ್ನುದರದೊಳಿಟ್ಟನ || ಪ ||
ಮನಸಿಜಾರಿಯ ಮಾವನನುಜನ ಪೊತ್ತನ
ಅನಿಮಿಷರಂದದಿ ವನವಾಸಪೋದನ
ಘನಕೋಡಕೊನೆಯಿಂದ ಧರಣಿಯ ತಾಳ್ದನ
ದಿನಕರಳಲಿವಿಲಿ ಪಗೆಯ ಗೆದ್ದಾತನ|| 1 ||
ತಗಜವನೇರಿದನ ತಂದೆಯ ತಾಯನಳೆದನ
ಭುಜಬಲದಿಂದ ಭೂಪಾಲರ ಗೆಲಿದನ
ಭುಜಗಧರನ ಕೈಯ ಆಯುಧ ಮುರಿದನ
ನಿಜಮುನಿತನಯನ ವನಧಿಯಿಂ ತಂದನ || 2 ||
ಪೆಣನ ಭೋಜನ ಮಾಡಿದರ ಮನೆಪೊಕ್ಕನ
ತೃಣಕೆ ಬಾಯಿತ್ತನ ಮೇಲೇರಿ ಬಪ್ಪನ
ಅಣುರೇಣು ತೃಣದೊಳು ಪರಿಪೂರ್ಣನಾದನ
ಪ್ರಣವಗೋಚರ ಕಾಗಿನೆಲೆಯಾದಿಕೆಶವನ || 3 ||
29) ಸದರವಲ್ಲವೋ ನಿಜಯೋಗ
ಸದರವಲ್ಲವೋ ನಿಜಯೋಗ
ಸದರವಲ್ಲವೋ ನಿಜಯೋಗ | ಸಚ್ಚಿದಾನಂದ
ಸದಮಲಗುರು ದಿಗಂಬರನ ಸಂಯೋಗ || ಪ ||
ಅಡಿಯನಂಬರ ಮಾಡುವನಕ | ಅಗ್ನಿ
ಕಿಡಿಯೆದ್ದು ಮೇಲಣ ಕೊಡನುಕ್ಕದನಕ ||
ಒಡನೆರಡೊಂದಾಗದನಕ | ಅಲ್ಲಿ
ಒಡಗೂಡಿ ಅಂಗನೆ ನುಡಿಗೇಳದನಕ || 1 ||
ನಾಡಿಹಲವು ಕಟ್ಟದನಕ | ಬ್ರಹ್ಮ
ನಾಡಿಯೊಳ್ ಪೊಕ್ಕು ಮುಳುಗಾಡದನಕ ||
ಕಾಡುವ ಕಪಿ ಸಾಯದನಕ | ಸತ್ತ
ಓಡಿನೊಳಗೆ ರಸ ತೊಟ್ಟಿಕ್ಕದನಕ || 2 ||
ಆದಿಕುಂಭವ ಕಾಣದನಕ | ಅಲ್ಲಿ
ಸಾಧಿಸಿ ಬೇಧಿಸಿ ಸವಿಯುಣ್ಣದನಕ ||
ಭೇದವು ಲಯವಾಗದನಕ | ಬಾಡ
ದಾದಿಕೇಶವ ನಿಮ್ಮ ನೆಲೆಗಾಣದನಕ || 3 ||
30) ಸಹಜವಿದು ಈ ನುಡಿಯು
ಸಹಜವಿದು ಈ ನುಡಿಯು ಸಟೆಯ ಮಾತಲ್ಲ
ಮಹಿಯೊಳಗೆ ಪೇಳುವೆನು ವಿಹಿತ ವಾಕ್ಯಗಳ || ಪ ||
ಶ್ರುತಿಶಾಸ್ತ್ರ ಪೌರಾಣಗಳನೋದುವನೆ ಶೂದ್ರ
ಅತಿಥಿಗಾದರಿಸುವನೆ ಅತಿಲುಬ್ಧನು
ಪ್ರತಿನಿತ್ಯ ಸಂಧ್ಯಾನ ಮಾಡುವವನೇ ಪಾಪಿ
ಪತಿಯಾಜ್ಞೆಯಿಂದಿಹಳೆ ಪರಮಪಾತಕಿಯು || 1 ||
ದಾನಧರ್ಮಂಗಳನು ಬಿಡುವನೇ ಧಮರ್ಾತ್ಮ
ಮಾನಾಭಿಮಾನವನು ಹಿಡಿದವನೆ ಯೋಗಿ
ಪ್ರಾಣಿಗಳ ಹಿಂಸೆಯನೆ ಮಾಡುವನೆ ಸುಜ್ಞಾನಿ
ಜ್ಞಾನಿ ಸಜ್ಜನರನ್ನು ಕಾಡುವನೆ ಸತ್ಪುರುಷ|| 2 ||
ಕೆರೆಕಟ್ಟಿ ಪೂದೋಟ ರಚಿಸುವವನೆ ದ್ರೋಹಿ
ಗುರುದೈವ ಹಿರಿಯರನು ಬಯ್ಯುವವ ನಿಷ್ಠ
ಸಿರಿಕಾಗಿನೆಲೆಯಾದಿಕೇಶವನ ಚರಣವನು
ನಿರುತದಿಂ ಸ್ಮರಿಸುವನೆ ಅವಿಚಾರಿಪುರುಷ || 3 ||
31) ಸೀತಾಪತಿ ರಘುನಾಥನೆಂಬಾತನು
ಸೀತಾಪತಿ ರಘುನಾಥನೆಂಬಾತನು
ಈತನೇನೆ ಸಖ ಈತನೇನೆ|| ಪ ||
ವ್ಯಾಸನ ಜನನಿಯ ವ್ಯಾಸರೂಪತಾಳ್ದನು
ದೇಶದೊಳಗೆ ಬಲು ಹೊಗರುಳ್ಳವನು
ನಾಸಿಕದೊಳೋರ್ವಳ ಪೊತ್ತು ಮೆರೆದ ಮು-
ನೀಶರ ಶಾಪವ ಪಡೆದನ ಕೊಂದನು || 1 ||
ಆನೆವಾಹನಪಿತನ ತಾಯನಳೆದವನು
ಭಾನುಸುತಗೆ ಶಾಪವಿತ್ತು ಜರೆದವನು
ಕಾನನವಾಸದಿ ನಿಂದಳಿಗೊಡೆಯ ನಿ-
ಧಾನಶರಧಿಯಲಿ ವಾಸಮಾಡಿದವನು|| 2 ||
ಮೂಗ್ರಾಮ ಮುರಿದು ವಾಜಿಯನೇರಿ ಮೆರೆದನು
ಸಾಗರಸುತೆಯಳ ಮೇಲೆ ಮೋಹಿಸಿದವನು
ಉಗ್ರನಹೋಬಲಪತಿರಾಜ ಕನಕಗೆ
ಭಾಗ್ಯವನೀವ ಕಾಗಿನೆಲೆಯಾದಿಕೇಶವನು || 3 ||
32) ಹಲವು ಜೀವನವ ಒಂದೆಲೆ ನುಂಗಿತು
ಹಲವು ಜೀವನವ ಒಂದೆಲೆ ನುಂಗಿತು || ಕಾಗಿ
ನೆಲೆಯಾದಿಕೇಶವನು ಬಲ್ಲನೀ ಬೆಡಗ|| ಪ ||
ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು
ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣಶಿವನ ಒಂದೆಲೆ ನುಂಗಿತೋ ದೇವ
ಹರಿಯ ಬಳಗವ ಒಂದೆಲೆ ನುಂಗಿತು|| 1 ||
ಎಂಟುಗಜವನು ನುಂಗಿ ಕಂಟಕರೈವರ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು|| 2 ||
ಗಿಡವ ನುಂಗಿತು ಗಿಡದೊಡತೊಟ್ಟ ನುಂಗಿತು
ಗಿಡದ ತಾಯಿ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ
ನೊಡೆಯಾದಿಕೇಶವನ ಬಲ್ಲನೀ ಬೆಡಗ|| 3 ||
33) ಹೆಣ್ಣುಗಳೊಳು ಹೆಣ್ಣುಗಾರಿಕೆ ಸತ್ಯ
ಹೆಣ್ಣುಗಳೊಳು ಹೆಣ್ಣುಗಾರಿಕೆ ಸತ್ಯ
ಕಣ್ಣುಕಟ್ಟಲ್ಲ ಕವಿಗಳ ಕವಡಿಲ್ಲ|| ಪ ||
ರತಿಗೆ ಶೃಂಗರವೇನು ಶೃಂಗರದಿ ರತಿಗೇನು
ರತಿಯಲ್ಲಿ ಮೊದಲೇನು ಮೊದಲಿಗೆ ತುದಿಯೇನು
ಜತೆಗೆ ಮತ್ಸರವೇನು ಮತ್ಸರದ ಕತೆಯೇನು
ಕತೆಯಲ್ಲಿ ಕಾಂಬುದೇನು ಕಂಡರೆ ಫಲವೇನು || 1 ||
ಮನಕೆ ಮುಮ್ಮರೆಯೇನು ಮುಮ್ಮರೆಗೆ ನೆನಹೇನು
ನೆನೆದರೆ ನಂಬಿಗೆಯೇನು ನಂಬಿದರೆ ಅನುವೇನು
ಅನುವಿಗೆ ಕಳವಳವೇನು ಕಳವಳದಿ ಕನಸೇನು
ಕನಸಿನಲಿ ಕಾಂಬುದೇನು ಕಂಡರೆ ಭಯವೇನು || 2 ||
ಮುಲುಕಿಗೆ ಮೊದಲೇನು ಮೊದಲಿಗೆ ನಿಲುಗಡೆಯೇನು
ನಿಲುಗಡೆಗೆ ಸವಿಯೇನು ಸವಿಯಲ್ಲಿ ಸುಖವೇನು
ಅಲರಂಬ ನಲಿವೇನು ನಲಿವಿಗೆ ಗೌಪ್ಯವೇನು
ನೆಲೆಯಾದಿಕೇಶವ ನಿನಗೆ ಸೋಲೆಂದರೇನು || 3 ||
34) ಹರಿಮುಖಿ ಹರಿವಾಣಿ
ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ
ಹರಿಯ ನಂದನಸುಖನೆನಿಪ ಅಹೋಬಲದ
ಹರಿಯ ನೀ ತಂದು ತೋರೆ || ಪ ||
ಎರವಿನ ತಲೆಯವನಣ್ಣನ ಅಯ್ಯನ
ಪರಮಸಖಿಯ ಸುತನ |
ಹಿರಿಯಣ್ಣನಯ್ಯನ ಮೊಮ್ಮನ ಮಾವನ
ಸರಿಗಟ್ಟಿಹನ ಹಗೆಯ |
ಗುರುವಿನ ಸತಿಯ ಸೇರ್ದನ ಮುಂದೆ ಬಾಹನ
ಕಿರಿಯ ಮಗನ ರಾಣಿಯ |
ದುರುಳತನದಿ ಸೆಳೆಕೊಂಡನ ಕೊಂದನ
ತರಳೆ ನೀ ತಂದು ತೋರೆ|| 1 ||
ಸೋಮನ ಜನಕನ ಸತಿಯ ಧರಿಸಿದನ
ರೋಮಕೋಟಿಯೊಳಿಟ್ಟನ |
[ಪ್ರೇಮದ ಜನಕನ ಸತಿಯ ಗರ್ಭದಿ ತನ್ನ
ಭಿಮತೇಜವನಿಟ್ಟನ |
ರಾಮಣೀಯಕ ಪುರದೊಳಗಿಪ್ಪ ಮಿತ್ರನ
ನೇಮನಿಷ್ಠೆಯ ಪಿತನ ] |
ಕಾಮಿನಿ ಸತಿಯ ಕಂದನ ತಮ್ಮಗೊಲಿದನ
ಭಾಮೆ ನೀ ತಂದು ತೋರೆ|| 2 ||
ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯ
ಅಡವಿಯ ಪಥದೊಳು ತಿರುಗಿದನ |
ಅತಿಶಯ ನರಹರಿ ವಾಮನ ರೂಪಿನ
ಪಿತನ ಮೋಹದ ರಾಣಿಯ |
ಹತಮಾಡಿ ಸತ್ಯಕ್ಕೆ ನಿಂತು ನಗವ ಪೊತ್ತು
ಪತಿವ್ರತೆಯರ ಭಂಗಿಸಿ |
ಕ್ಷಿತಿಯೋಳ್ ರಾಹುತ ಬಾಡದಾದಿಕೇಶವನನ್ನು
ಸತಿಯೆ ನೀ ತಂದು ತೋರೆ|| 3 ||
35) ಶೆಷಶಯನ ನಿನ್ನ
ಶೆಷಶಯನ ನಿನ್ನ ಭಾಗವತರ ಸಹ
ವಾಸದೊಳಿರಿಸು ಕಂಡೆಯ ಎನ್ನನು
ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿಹ
ದಾಸರೊಳಿರಿಸು ಕಂಡೆಯ ಎನ್ನನು || ಅ.ಪ.||
ತಂದೆಯನೊಡಲನು ಸೀಳಿಸಿದವರೊಳು ದೇ-
ವೇಂದ್ರನ ತಲೆಗೆ ತಂದವರೊಳು ದು-
ರ್ಗಂಧಹೆಣ್ಣಿಗೆೆ ಚಂದನದ ಕಂಪನಿತ್ತಂಥ
ಬಾಂಧವರೊಳಗಿರಿಸು ಕಂಡೆಯ ಎನ್ನನು|| 1 ||
ತೋಯಜವೆಂಬ ಪುಷ್ಪದ ಪೆಸರವರೊಳು
ತಾಯ ಸೊಸೆಗೆ ಮಕ್ಕಳಿತ್ತವರೊಳು
ಆಯದಿ ದ್ವಾದಶಿ ವ್ರತವ ಸಾಧಿಸಿದಂಥ
ರಾಯರೊಳಗಿರಿಸು ಕಂಡೆಯ ಎನ್ನನು || 2 ||
ಗಿಳಿನಾಯಿಯ ಪೆಸರಿನವರೊಳು ಮುಗಿಲ
ಹೊಳೆಯ ಹೊಟ್ಟೆಯಲಿ ಪುಟ್ಟಿದವರೊಳು
ಕೆಳದಿಯ ಜರೆದು ಶ್ರೀ ಹರಿದಿನ ಗೆದ್ದಂಥ
ಹಳಬರೊಳಿರಿಸು ಕಂಡೆಯ ಎನ್ನನು || 3 ||
ಅಂಕಕೆ ರಥವ ನಡೆಸಿದವರೊಳು ನಿಃ-
ಶಂಕಧರ್ಮವ ಗೆದ್ದ ಹಿರಿಯರೊಳು
ಲಂಕೆಯ ಅನುದಿನ ಸ್ಥಿರರಾಜ್ಯವಾಳಿದ
ಕಿಂಕರರೊಳಿರಿಸು ಕಂಡೆಯ ಎನ್ನನು || 4 ||
ಕಾಟಿಗೆ ಕಾಸು ಕಾಣದವರು ರಾಯರ ಪಂಕ್ತಿ
ಯೂಟ ಬಡಿಸಿದಂತೆ ನಾ ಬೇಡಿದೆ
ನಾಟಕಧರ ಕಾಗಿನೆಲೆಯಾದಿಕೇಶವ ನಿ-
ನ್ನಾಟದೊಳಿರಿಸು ಕಂಡೆಯ ಎನ್ನನು || 5 ||
36) ವಾರಿಜಮುಖಿ ವಾರಿಜಾಕ್ಷಿ
ವಾರಿಜಮುಖಿ ವಾರಿಜಾಕ್ಷಿ ವಾರಿಜಗಂಧಿ
ವಾರಿಧಿಯಳಿಯನನು |
ಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾ-
ಧಾರ ಕೇಶವಮೂತರ್ಿಯ|| ಪ ||
ನಗವೈರಿಯಣುಗನಣ್ಣನಯ್ಯನಾಪ್ತಗೆ
ಮಿಗೆ ಹುಟ್ಟಿದನ ತಮ್ಮನ |
ನಗೆಗೆ ಶಾಪವನಿತ್ತವನ ವಾಹವೈರಿಯ
ಪಗೆಯ ಪೆಗಲೇರ್ದನ |
ಜಗದೊಳೊಗೆದ ತಾಯ ಮಗುಳೆ ಪೆತ್ತವನನೆ-
ನಗೆ ತೋರಿದರೆ ನಿನಗೆ |
ಅಗಣಿತಾಭರಣವೀವೆನು ಅಂಗಜಾಗ್ನಿಯ
ತಗಹ ಬಿಡಿಸೆ ಕರುಣಿ|| 1 ||
ಮಿಹಿರನಂದನನ ತಂದೆಯ ಪಗೆಯನ ತಮ್ಮ
ನಹಿತನ ಮನೆವೆಸರ |
ಮಹಿಮನ ಕೃತಿಗೊಡೆಯನ ಬಂಟನನುಜನ |
ಸಹಿಸಿ ತಮ್ಮನ ಮಿತ್ರನ |
ಕುಹಕದಿ ಶಾಪವಡೆದಳು ಪ್ರಸ್ತರವಾಗಿ
ಗಹನಮಧ್ಯದೊಳಿರಲು |
ದಹಿಸಿ ಶಾಪವ ದನುಜರ ಕೊಂದು ಕ್ಷಿತಿಯೊಳು
ವಿಹರಿಸುವನ ಕರೆತಾರೆ || 2 ||
ಸುರಭೇದಪ್ರಥಮದಾಸಿಯ ಪೆಸರಿನ ವಾಜಿ
ಯರಸನ ನಖವೈರಿಯ |
ಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ
ಧರಿಸಿದಾತನ ಮಿತ್ರನ |
ಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದ
ನರಸಿಯಣ್ಣನೀಕ್ಷಣ |
ಕರೆತಂದೆನಗೆ ಸಖಿ ಕೂಡಿಸು ಸಿರಿಕಾಗಿ
ನೆಲೆಯಾದಿಕೆಶವನ || 3 ||
37) ರಾಜವದನೆ ಸುರರಾಜನ ಪುರದೊಳು
ರಾಜವದನೆ ಸುರರಾಜನ ಪುರದೊಳು
ರಾಜಿಸುತಿಹ ಕುಜವ
ರಾಜೀವಮುಖಿಯೆನಿಸುವ ಸಖಿಗೊಲಿದಿತ್ತ
ರಾಜನ ತೋರೆನಗೆ || ಪ ||
ನೆತ್ತಿಯಿಂದಿಳಿದಳ ಹೆತ್ತಮಗನ ಮೊಮ್ಮ
ನೆತ್ತಿದಾತನ ಪಿತನ |
ತುತ್ತು ಮಾಡುವನ ವೈರಿಯನೇರಿ ಜಗವನು
ಸುತ್ತು ಬರುತಲಿಪ್ಪನ |
ಕತ್ತಲೆಯೊಳು ಕಾದಿ ಅಳಿದಯ್ಯನ ಶಿರವ
ಕತ್ತರಿಸಿದ ಧೀರನ |
ಸತ್ತಮಗನ ತಂದಿತ್ತವನನು ಎ-
ನ್ನೊತ್ತಿಗೆ ಕರೆದು ತಾರೆ || 1 ||
ವರುಷವೈದರ ಪೆಸರವನ ತಾಯನುಜನ
ಧರಿಸಿದಾತನ ಸಖನ |
ಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂ-
ವರೆಗೆ ತಾನೊಲಿದವನ |
ಸುರಗಿರಿಯನು ಸುತ್ತಿ ಬಹನ ಸುತನ ಕೈಲಿ
ದಾನವ ಕೊಂಡನ |
ಧರಣಿಜಾತನ ಶಿರವರಿದು ನಾರಿಯರನು
ಪುರಕೆ ತಂದವನ ತೋರೆ || 2 ||
ಹನ್ನೆರಡನೆಯ ತಾರೆಯ ಪೆಸರಾಕೆಯ
ಕನ್ನೆಯಯ್ಯನ ಮನೆಯ |
ತನ್ನ ತಾ ಮರೆಮಾಡಿಕೊಂಡಿಪ್ಪನರಸಿಯ
ಬಣ್ಣವ ಕಾಯ್ದಿಹನ |
ಪನ್ನಗಶಯನ ಬೇಲಾಪುರದರಸನು
ತನ್ನ ನೆನೆವ ಭಕ್ತನ |
ಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-
ಸನ್ನನ ತೋರೆನಗೆ|| 3 ||
38) ರಮಣಿ ಕೇಳೆಲೆ
ರಮಣಿ ಕೇಳೆಲೆ ಮೋಹನ ಶುಭಕಾಯನ
ಅಮರವಂದಿತ ರವಿಶತಕೋಟಿತೇಜನ
ವಿಮಲಚರಿತ್ರದಿ ಮೆರೆವ ಶ್ರೀಕೃಷ್ಣನ
ಕಮಲವದನೆ ನೀ ತೋರೆ|| ಪ ||
ಬಾಯೊಳಗಿಹಳ ಗಂಡನ ನಿಜ ತಮ್ಮನ
ತಾಯ ಪಿತನ ಮಡದಿಯ ಧರಿಸಿದನ
ಸ್ತ್ರೀಯಳ ಸುತನ ಕೈಯಲಿ ಶಾಪಪಡೆದನ
ದಾಯಾದಿಯ ಮಗನ |
ಸಾಯಕವದು ತೀವ್ರದಿ ಬರುತಿರೆ ಕಂಡು
ಮಾಯಾಪತಿ ಭೂಮಿಯನೆತ್ತಿ ತನ್ನಯ
ಬೀಯಗನ ತಲೆ ಕಾಯ್ದಂಥ
ರಾಯನ ಕರೆದು ತೋರೆ|| 1 ||
ನಾಲಗೆ ಎರಡರವನ ಭುಂಜಿಸುವನ
ಮೇಲೇರಿ ಬಹನ ತಂದೆಯಿಹ ಗಿರಿಯನು
ಲೀಲೆಯಿಂದಲಿ ಕಿತ್ತೆತ್ತಿದ ಧೀರನ
ಕಾಳೆಗದಲಿ ಕೊಂದನ |
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲುಶಕ್ತಿಗೆ ಉರವಾಂತು ತನ್ನವರನು
ಪಾಲಿಸಿದಂಥ ದಾತಾರದೇವನ
ಲೋಲೆ ನೀ ಕರೆದು ತೋರೆ|| 2 ||
ಉರಿಯೊಳು ಜನಿಸಿದವನ ನಿಜತಂಗಿಯ
ಸೆರಗ ಪಿಡಿದ ಖಳನಣ್ಣನ ತಂಗಿಯ
ವರನ ತಲೆಯನು ಕತ್ತರಿಸಿದ ಧೀರನ
ಗುರುವಿನೊಳುದಿಸಿದನ |
ಶರವ ತಪ್ಪಿಸಿ ತನ್ನ ದಾಸಗರ್ೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಗಿರಿಯ ವೆಂಕಟಾದಿಕೇಶವನ
ಗರತಿ ನೀ ಕರೆದು ತಾರೆ|| 3 ||
39) ಮುಳ್ಳುಮೊನಿಯ ಮ್ಯಾಲ
ಮುಳ್ಳುಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ
ಎರಡು ಹೂಳು ಒಂದು ತುಂಬಲೆ ಇಲ್ಲ || 1 ||
ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿ
ಎರಡು ಗೊಡ್ಡು ಒಂದಕೆ ಕರುವೇ ಇಲ್ಲ|| 2 ||
ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳು
ಇಬ್ಬರು ಬಂಜೆಯರು ಒಬ್ಬಾಕಿ ಹಡೆದೇ ಇಲ್ಲ || 3 ||
ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರು
ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ || 4 ||
ಕೈಯಿಲ್ಲದ ಕುಂಬಾರ ಮಾಡಿದ ಮೂರು ಮಡಿಕಿ
ಎರಡು ದದ್ದು ಒಂದಕೆ ತಳವೇ ಇಲ್ಲ || 5 ||
ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕ
ಎರಡು ನಕಲು ಒಂದು ಸವಕಲಾಗಿತ್ತ || 6 ||
ಸವಕಲು ರೊಕ್ಕದಿಂದ ಮಾಡಿದರ ಮೂರು ಕಡುಬ
ಎರಡು ಕುದಿಯಲಿಲ್ಲ ಒಂದು ಬೇಯಲೇ ಇಲ್ಲ|| 7 ||
ಬೇಯದ ಕಡುಬಿಗಿ ಬಂದಾರ ಮೂವರು ಬೀಗರು
ಇಬ್ಬರು ಬೊಚ್ಚರು ಒಬ್ಬಗೆ ಹಲ್ಲೇ ಇಲ್ಲ || 8 ||
ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಅಡಕಿ
ಎರಡು ಗೋಟು ಒಂದು ಸಿಡಿದು ಕಾಣೆಯಾಯ್ತು|| 9 ||
ಕಾಣೆಯಾದ ಅಡಕಿಯ ಹುಡುಕಲು ಹೋಗ್ಯಾರ ಮೂರು ಮಂದಿ
ಇಬ್ಬರು ಒಂಚೊರಿ ಒಬ್ಬಗೆ ಕಣ್ಣೇ ಇಲ್ಲ || 10 ||
ಕಣ್ಣಿಲ್ಲದವನ ಕರೆಯಬೇಕಂತ ಹೋಗ್ಯಾರ ಮೂರು ಮಂದಿ
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ || 11 ||
ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ
ಇಬ್ಬರು ಲಂಡರು ಒಬ್ಬ ಮೊಂಡನಯ್ಯ || 12 ||
ಕಾಗಿನೆಲೆ ಕನಕದಾಸ ಹಾಕಿದ ಮುಂಡಿಗಿ
ಇದ ತಿಳಿದವ ಜಾಣ ಒಡೆದು ಹೇಳದವ ಕೋಣ|| 13 ||
40) ಭವಭಯವಿನಾಶ ಭೋ
ಭವಭಯವಿನಾಶ ಭೋ ಭಕ್ತವಿಲಾಸ ಭೋ
ಪಾ - ಪವಿನಾಶ ಭೋ ಬಾಡದ ರಂಗ ಭೋ|| ಪ ||
ಹರಿಯ ಸುತನಿಗೆ ಅಭಯವಿತ್ತೆ | ಹರಿಯ ಮಗನ ಕೊಂದೆ ||
ಹರಿಯೆನಲು ಹರಿರೂಪ ತಾಳಿದೆ | ಹರಿಯೊಳಡಗಿದೆ ಮತ್ತೆ ||
[ಹರಿಯ ನುಂಗಲು ಗಗನವೇರಿದ | ಹರಿಗೆ ವರಗಳನಿತ್ತೆ ] ||
ಹರಿಯನಗ್ರಜಕೋಟಿ ತೇಜನ | ಹರಿಯವದನನೆಂಬ || 1 ||
ಶಿವನ ಮಗಳೊಡಗೂಡಿ ಮತ್ತೆ | ಶಿವಮಗಳ ಮಾವಗಿತ್ತೆ ||
ಶಿವನುಪಟಳಕಳುಕಿ ಗೋಕುಲ | ಶಿವನ ಕರದಲಿ ಪೊತ್ತೆ ||
ಶಿವನ ಧನುವನು ಮುರಿದು ಮತ್ತೆ | ಶಿವನ ತಲೆಯಲಿ ನಿಂದೆ ||
ಶಿವನ ಭೋಜನವಾಹ ಪಿತನಿಗೆ | ಶಿವನ ಪ್ರತಿಫಲನವೆಂಬ || 2 ||
ಕಮಲವನು ಈರಡಿಯ ಮಾಡಿದೆ | ಕಮಲ ಮೊರೆಯಿಡಲಂದು ||
ಕಮಲದಲಿ ಬ್ರಹ್ಮಾಂಡ ತೋರಿದೆ | ಕಮಲಧರ ನೀನೆಂದು ||
ಕಮಲ ಕದ್ದೊಯ್ದವನ ಸದೆದು | ಕಮಲ ತಂದವನೆಂದು ||
ಕಮಲಮುಖಿಯಳ ಕಾಯ್ದ ಕಾಗಿನೆಲೆ | ವಿಮಲಾದಿಕೇಶವನೆಂಬ || 3 ||
41 ) ಪುಲ್ಲವದನೆ ನಿಲ್ಲಲಾರೆನೆ
ಪುಲ್ಲವದನೆ ನಿಲ್ಲಲಾರೆನೆ | ಕಾಮನ ಶರ ತಾಗಿ
ತಲ್ಲಣಗೊಳುತಿಹೆನೆ || ಪ ||
ಬಲ್ಲಿದ ಮಲ್ಲರನೆಲ್ಲರ ಮಡುಹಿದ
ನಲ್ಲನ ತೋರೆನಗೆ || ಅ.ಪ. ||
ಮೃಗಧರಾರಿಯ ವೈರಿ | ಪೆಗಲೇರಿ ಬರುವಂಥ
ಜಗದಧಿಪತಿಯಾದನ ||
ಅಗಜೆಯರಸನ | ನಗವ ನೆಗಪಿದನ
ಬಗೆಯಿಂದಪ್ಪಳಿಸಿದನ ||
ಹಗಲೆ ಮೋಹಿಸಿದನ | ಮಗನನುಜರೊಳು
ಪಗೆಯಗೊಂಡಿರುವಾತನ ||
ಮಗುವು ತಾನಾಗಿ ಮಾ | ವನ ಮಸ್ತಕವನ್ನು
ಬಗೆದನ ತೋರೆನಗೆ || 1 ||
ಅಂಧನೃಪಾಲನ | ಕಂದರನೆಲ್ಲರ
ಕೊಂದೈವರ ಭಾವನ ||
ತಂದೆಗೆ ಹಿರಿಯ | ನೆಂದೆನಿಸಿಕೊಂಡಾತನ
ವಂದಿಸಿದವರಣ್ಣನ ||
ಅಂದು ಸಭೆಯಲಿ | ಬೈದವನ ತವಕದಿ
ಕಂಧರ ಕಡಿದಾತನ ||
ಸಿಂಧುಮಥನದೊಳು | ಜನಿಸಿದ ಗಂಡ ಮು-
ಕುಂದನ ತೋರೆನಗೆ || 2 ||
ಮಂಗಳ ಜನನಿಯ | ಹಿಂಗದೆ ಕದ್ದು ಜ-
ಲಂಗಳೊಳಡಗಿಪ್ಪನ ||
ಬೆಂಗೊಂಡು ಪೋಗಿ ಅವ | ನಂಗವ ಸೀಳಿ ವೇ-
ದಂಗಳ ತಂದವನ ||
ಮಂಗಳ ಮಹಿಮನ ಭು | ಜಂಗಶಯನ ನಾರಿ
ಭಂಗವ ಕಾಯ್ದವನ ||
ಹಿಂಗದೆ ಕಾಗಿನೆಲೆ | ಯಾದಿಕೇಶವ ನರ
ಸಿಂಗನ ತೋರೆನಗೆ || 3 ||
42) ಪಕ್ಕಿಯ ಕುರುಹ ಬಲ್ಲರು ಪೇಳಿರಿ
ಪಕ್ಕಿಯ ಕುರುಹ ಬಲ್ಲರು ಪೇಳಿರಿ || ತನ್ನ
ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ || ಪ ||
ಬಣ್ಣಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು
ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ ||
ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು
ತಣ್ಣನೆ ಹೊತ್ತಲಿ ತವಕಗೊಂಬೋದು || 1 ||
ಕೆಂಬಲ್ಲಿನ ಪಕ್ಷಿ ಕೊಂಬುದು ರಸಗಳ
ಹಂಬಲ ಮಾಳ್ಪುದು ಹರುಷದಿಂದ
ತುಂಬಿವರ್ಣನ ತೆತ್ತವೆ ನಾಲ್ಕು ರವೆಯುಂಟು
ಜಾಂಬವರು ಮೆಚ್ಚುವರು ಜಾಣರಿಗಳವಲ್ಲ || 2 ||
ಉಂಡರೂ ದಣಿಯದು ಊರಸೇರದ ಪಕ್ಷಿ
ಮಂಡೆಯ ಮೇಲೆರಡು ಕೋಡದಕೆ ||
ಗುಂಡಿಗೆಯೊಳಗೆ ಮೂಲಗಳುಂಟು ಧರೆಯೊಳು
ಗಂಡನ ನುಂಗುವುದು ಜಗಮುಖದ ಪಕ್ಷಿ|| 3 ||
ಗಿಡ್ಡಮೀಸೆಗಳುಂಟು ಗರುಡ ಎನ್ನಬೇಡಿ
ಒಡ್ಡನಪ್ಪಿ ಬಾಹೋದು ವರುಷಕ್ಕೊಮ್ಮೆ ||
ಗುಡ್ಡದೊಳಿರುವುದು ದೊರೆಗಳಿಗಂಜದು
ಹೆಡ್ಡರಿಗಳವಲ್ಲ ಹೇಮವರ್ಣದ ಪಕ್ಷಿ|| 4 ||
ಹಕ್ಕರಿಕೆ ಗರಿಯಂತೆ ಹರವು ರೆಕ್ಕೆಗಳುಂಟು
ಒಕ್ಕಲು ಮೇಲದು ಒಲಿದವಗೆ ||
ದಿಕ್ಕಿನಲ್ಲಿ ಕಾಗಿನೆಲೆಯಾದಿಕೇಶವನ
ಮುಕ್ಕಣ್ಣನವತಾರ ಹನುಮಂತ ಬಲ್ಲ || 5 ||
43) ನಿಜವರಿತು ಲಿಂಗವನು
ನಿಜವರಿತು ಲಿಂಗವನು ಪೂಜೆಮಾಡುವರಾರು
ನಿಜ ನೇಮನಿಷ್ಠೆಯೊಳು ನಿಂದವರ ತೋರು || ಪ ||
ಆತ್ಮವೆಂಬುದರೊಳಗೆ ಅಮೃತಚಿಲುಮೆಯ ತೆಗೆದು
ನೀತಿಮಾರ್ಗವೆನ್ನುವ ಕೊಡನ ಪಿಡಿದು ||
ಮೂತೆರದ ಭೇದಗಳ ಕಡಿದು ಕಣ್ಣಿಯ ಮಾಡಿ
ಚಿತ್ಲಿಂಗಕಗ್ಗವಣಿ ತಂದವರ ತೋರು || 1 ||
ಪಂಚಪ್ರಾಣಗಳ ಗೊತ್ತುಗುರಿ ಜಾಡನು ತಿಳಿದು
ಪಂಚಾಕ್ಷರಿ ಎಂಬ ಅರಮನೆಯೊಳಗೆ ||
ಪಂಚಭೂತಗಳೆಂಬ ಬಯಲ ಜಗಲಿಯನೇರಿ ಪ್ರ
ಪಂಚಧರ ಚಿನ್ಹೆಯನು ಕಾಣುವರ ತೋರು || 2 ||
ಮೂಲವಾಸನೆಯಳಿದು ಕಾಯವಾಸನೆ ಕಳೆದು
ಮೇಲೆ ಕಾರುಣ್ಯನೆಲೆ ಎಂಬುದನು ಕಂಡು ||
ನಾಲಗೆಯಿಂದ ಗಂಟೆ ನಾದದಲೆಯನು ಕೇಳಿ
ಸಲೆ ಸೂರ್ಯಚಂದ್ರರೆಡೆ ಸುಳಿದವರ ತೋರು || 3 ||
ಅಂತರಂಗದೊಳಗೆ ಅಷ್ಟಜ್ಯೋತಿಯನಿಟ್ಟು
ದಂತಿ ಎಂಟನು ಪಿಡಿದು ತರಿದು ಬಿಸುಟು ||
ಆಂತರ್ಯದ ಸಂತತ ಭೇರಿಶಬ್ದವ ಕೇಳಿ
ಅಂತರಾತ್ಮಲಿಂಗವ ಪೂಜಿಪರ ತೋರು || 4 ||
ಪರಬ್ರಹ್ಮ ತನ್ನೊಳಗೆ ಪರಿಪೂರ್ಣವಾಗಿರಲು
ಪರಂಜ್ಯೋತಿಲಿಂಗವ ಬಯಸಿ ನೋಡು ||
ವರ ಬಾಡ ಬಂಕಾಪುರದ ಆದಿಕೇಶವನ
ಕುರಿತು ತಿಳಿಯೋ ಹಳೆಗನ್ನಡದ ಸೊಬಗ || 5 ||
44) ತೋರೆ ಬೇಗನೆ ಸಖಿ
ತೋರೆ ಬೇಗನೆ ಸಖಿ | ತೋಯಜಮುಖಿ |
ತೋರಮುತ್ತಿನ ಹಾರ ಭಾರವಾಗಿದೆ ನನಗೆ || ಪ ||
ಈರೇಳು ಲೋಕವ ಪೊರೆವ ದಯಾನಿಧಿ
ಬಾರನೇತಕೆ ಮನೆಗೆ | ಹೇ ಸಖಿಯೆ || || ಅ.ಪ. ||
ತರಣಿತನಯಸುತನ | ಬಾಯೊಳನೃತವ
ಭರದಿಂದ ನುಡಿಸಿದನ ||
ತರಣಿಸುತನ ಬಾಣ | ವೆರಗಂದದಿ ರಥವ
ಧರೆಗೆ ಒತ್ತಿ ದೇವನ ||
ತರಣಿಯ ಮರೆಮಾಡಿ | ಶಿರವ ತರಿಯುವಂತೆ
ನರಗೆ ಸೂಚಿಸಿದಾತನ ||
ತರಣಿಯೊಡನೆ ಪಂಥ | ವಾಡಿ ತಿರುಗಿದನ
ತರಳನಾಳಿದನ ತೋರಿಸೆ | ಹೇ ಸಖಿಯೆ |||| 1 ||
ಗೋತ್ರಭೇದಿ ಸುತನ | ಸುತನ ಸತಿಯ
ಮಾತುಳನಾದವನ ||
ಕತ್ತಲೆಯಲಿ ಪೋಗೆ | ಕುತ್ತಿಟ್ಟವನ ಮೆಯ್ಯ
ಸುತ್ತಿ ಬಾಧಿಸುತಿಹನ ||
ತತ್ತ್ವವರಿತು ಸು | ತತ್ತ್ವ ಬೋಧಿಸಿ ಮತ್ತೆ
ಉತ್ತರವಿತ್ತವನ ||
ಮುತ್ತಯ್ಯನ ತಾಯ | ಪೆತ್ತ ದೇವನ ಎನ್ನ
ಹತ್ತಿರ ಕರೆದು ತಾರೆ | ಹೇ ಸಖಿಯೆ || || 2 ||
ವರಮುನಿಗಳು ನೆರೆದು | ಸವರ್ೋತ್ತಮನಾರೊ
ಪರಿಶೋಧಿಸಲುಬೇಕೆಂದು ||
ಭರದಿಂದ ಭೃಗುಮುನಿ | ಬಂದು ಕೋಪಿಸೆ ಬೇಗ
ಚರಣವನೊತ್ತಿದನ ||
ಪರಿಪರಿಯಲಿ ದೇವ | ಪರಮಭಕ್ತರಕಾವ
ಸುರರಿಗಭಯವಿತ್ತನ ||
ವರ ವೇಲಾಪುರದಾದಿ | ಕೇಶವರಾಯನ
ಮರೆಯಲಾರೆನೆ ಮನದಿ | ಹೇ ಸಖಿಯೆ || || 3 ||
45) ಕೋ ಕೋ ಕೋ ಎನ್ನಿರೋ
ಕೋ ಕೋ ಕೋ ಎನ್ನಿರೋ | ಕುಂಭಿನಿಯವರೆಲ್ಲ |
ಕೋ ಕೋ ಕೋ ಎನ್ನಿರೋ || ಪ ||
ಹೊದ್ದಿ ಮೊಲೆಯನುಂಡವಳಸುವನೆ ಕೊಂಡ
ಮುದ್ದುಕಾರ ಕಳ್ಳ ಕೋ ಕೋ ಕೋ ಎನ್ನಿರೋ ||
ಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲ
ಲೊದ್ದೊರೆಸಿದ ಕಳ್ಳ ಕೋ ಕೋ ಕೋ ಎನ್ನಿರೋ ||
ಹದ್ದುಹಗೆಯ ಹಾಸಿಗೆಯ ಮೇಲೊರಗಿದ
ಮುದ್ದುಗಾರ ಕಳ್ಳ ಕೋ ಕೋ ಕೋ ಎನ್ನಿರೋ ||
ಅರ್ಧದೇಹನ ಕೈಯ ತಲೆಯ ಕಪಟದಿಂದ
ಕದ್ದು ಬಿಸುಟ ಕಳ್ಳ ಕೋ ಕೋ ಕೋ ಎನ್ನಿರೋ|| 1 ||
ಕೆಂಜಾಜಿಯ ಮಣಿಮಲ್ಲಿಗೆ ದಂಡೆಯರ್
ಅಂಜೆ ಕದ್ದ ಕಳ್ಳ ಕೋ ಕೋ ಕೋ ಎನ್ನಿರೋ ||
ಗುಂಜಿಯ ದಂಡೆಯ ಕಲ್ಲಿಯ ಚೀಲದ
ಮಂಜುಮೆಯ್ಯವ ಕಳ್ಳ ಕೋ ಕೋ ಕೋ ಎನ್ನಿರೋ ||
ಅಂಜದೆ ಗೊಲ್ಲರ ಪಳ್ಳಿಯೊಳಗೆ ಹಾಲ
ನೆಂಜಲಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ||
ಸಂಜೆ ಬೈಗಿನಲ್ಲಿ ಕರೆಯುವ ಸತಿಯರ
ಅಂಜಿಸಿದ ಕಳ್ಳ ಕೋ ಕೋ ಕೋ ಎನ್ನಿರೋ|| 2 ||
ಕೇಶಿ ಎಂಬಂಥ ರಕ್ಕಸರನೆಲ್ಲರ ಕೊಂದ
ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ ||
ಮೋಸದಿ ಬಲಿಯ ದಾನವ ಬೇಡಿ ಅನುದಿನ
ಬೇಸರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ||
ಮೀಸಲು ಅನ್ನದ ಕೂಸಾಗಿ ಸವಿದುಂಡ
ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ ||
ಸಾಸಿರನಾಮಕೆ ಹೆಸರಾದ ಛಪ್ಪನ್ನ
ದೇಶ ದಾರಿಗಳ್ಳ ಕೋ ಕೋ ಕೋ ಎನ್ನಿರೋ || 3 ||
ಆಕಳೊಳಾಡಿ ಪರಲೋಕಕೆ ನಡೆದಂಥ
ಆಕೆವಾಳ ಕಳ್ಳ ಕೋ ಕೋ ಕೋ ಎನ್ನಿರೋ ||
ಭೂಕಾಂತೆಯ ಸೊಸೆಯನೆತ್ತಿ ಬಲುಹಿಂದೆ
ನೂಕಿ ತಂದ ಕಳ್ಳ ಕೋ ಕೋ ಕೋ ಎನ್ನಿರೋ ||
ಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರು ಕೈಯ
ಸಾಕಿಸಿಕೊಂಡ ಕಳ್ಳ ಕೋ ಕೋ ಕೋ ಎನ್ನಿರೋ ||
ಸಾಕಾರನಾಗಿ ಈ ಲೋಕವನೆಲ್ಲವ
ಆಕ್ರಮಿಸಿದ ಕಳ್ಳ ಕೋ ಕೋ ಕೋ ಎನ್ನಿರೋ|| 4 ||
ಕ್ಷೀರವಾರಿಧಿಯನು ವೈಕುಂಠಗಿರಿಯನು
ಸೇರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ||
ದ್ವಾರಾವತಿಯನು ನೀರೊಳು ಬಚ್ಚಿಟ್ಟ
ಊರುಗಳ್ಳ ಬಂದ ಕೋ ಕೋ ಕೋ ಎನ್ನಿರೋ ||
ಕಾರಣಾತ್ಮಕ ಕಾಗಿನೆಲೆಯಾದಿಕೇಶವ
ಕ್ಷೀರಬೆಣ್ಣೆಯ ಕಳ್ಳ ಕೋ ಕೋ ಕೋ ಎನ್ನಿರೋ || 5 ||
46) ಕರೆತಾರೆ ಕಾಮಿನಿ ಕಮಲಜಪಿತನ
ಕರೆತಾರೆ ಕಾಮಿನಿ ಕಮಲಜಪಿತನ |
ಸಿರಿ ತೋರೆ ಸಾಸಿರನಾಮವುಳ್ಳವನ || ಪ ||
ಮರೆದಿರಲಾರೆನೆನ್ನ ಪ್ರಾಣವಲ್ಲಭನ | ದಿನ
ಕರ ಕೋಟಿಕಿರಣ ಪ್ರಕಾಶವುಳ್ಳವನ |||| ಅ.ಪ.||
ಬ್ರಹ್ಮಕಪಾಲವ ಧರೆಗಿಳುಹಿದನ
ತಮ್ಮ ಅಣ್ಣಂದಿರ ಕಡಿದಾಡಿಸಿದನ ||
[ತಿಮ್ಮನಾಮದಿ ಗಿರಿಯೇರಿ ನಿಂದವನ
ಕಮ್ಮಗೋಲನ ತಾಯ ಕೈಪಿಡಿದವನ]|| 1 ||
ನಗರಾಜವೈರಿಯ ಮಗನ ಬೀಗನ
ನಗವ ಬೆನ್ನಲಿ ಪೊತ್ತು ಜಗವನಾಳುವನ
ನಗವ ಕಿತ್ತವನ ಶಿರವ ಹರಿದವನ
ನಗಸುತಾಪತಿ ಕಾಯದೊಳು ಮೂಡಿಹನ || 2 ||
ಪಾತಾಳಕಿಳಿದು ಭೂಮಿಯನೊಯ್ದವನ ಕಿ-
ರಾತನಟ್ಟಿ ಸತಿಯ ಗೆದ್ದವನ
ಮಾತು ಕದ್ದವನ ಕುಕ್ಷಿಯ ಸೀಳಿದವನ
ಮಾತೆಗೆ ಮಾತುಕೊಟ್ಟವನ ಮಾತುಳನ || 3 ||
ಕಣ್ಣಿಂದ ಕೇಳ್ವನ ಹಗೆಯನಾಳುವನ
ಕಣ್ಣಿಂದ ತಿಳಿದು ಕಲ್ಪಿಸದವನ
ಕಣ್ಣನಿರಿದು ದಾನವ ಬೇಡಿದವನ
ಅಣ್ಣಗಳ ಕಂಗಳ ಕಾಲಲೊತ್ತಿದನ|| 4 ||
ಸುಂದರ ಗಿರಿಯನುಗುರಲೆತ್ತಿದವನ
ಬೆಂದು ಹೋದಾವೆಂದು ಗೋವಕಾಯ್ದವನ
ಮಂದೆಗಾಯ್ದವನ ಮನ್ಮಥನ ಪೆತ್ತವನ
ತಂದೆ ಶ್ರೀ ಬಾಡದಾದಿ ಕೇಶವನ || 5 ||
47) ಒಂಬತ್ತು ಹೂವಿಗೆ ಒಂದೇ ನಾಳವು
ಒಂಬತ್ತು ಹೂವಿಗೆ ಒಂದೇ ನಾಳವು | ಚಂದಮಾಮ ||
ತುಂಬಿ ನಾಳತುದಿ ತುಂಬಿ ಭಾನುಪ್ರಭೆ ||ಚಂದಮಾಮ |||| 1 ||
ಕದರುಗಾತ್ರ ಕಂಬ ತೆಕ್ಕೆಗಾತರ ಹೂವು | ಚಂದಮಾಮ ||
ಆನೆಗಾತ್ರ ಕಾಯಿ ಒಂಟೆಗಾತರ ಹಣ್ಣು || ಚಂದಮಾಮ |||| 2 ||
ಕಾಲಿಲ್ಲದಾತನು ಹತ್ತಿದ ಮರವನು | ಚಂದಮಾಮ ||
ಕೈಯಿಲ್ಲದಾತನು ಕೊಯ್ದನಾ ಹಣ್ಣ || ಚಂದಮಾಮ |||| 3 ||
ನೆತ್ತಿಲ್ಲದಾತನು ಹೊತ್ತನು ಆ ಹಣ್ಣ | ಚಂದಮಾಮ ||
ತಳವಿಲ್ಲದಾ ಗೊಡೆಯಲಿಳಿಸಿದರಾ ಹಣ್ಣ || ಚಂದಮಾಮ |||| 4 ||
ಮಾರ್ಗ ತಪ್ಪಿ ಹಿಡಿದು ನಡೆದರು | ಚಂದಮಾಮ ||
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ || ಚಂದಮಾಮ || || 5 ||
ರೊಕ್ಕವಿಲ್ಲದಾತ ಕೊಂಡನಾ ಹಣ್ಣ | ಚಂದಮಾಮ ||
ಮೂಗಿಲ್ಲದಾತ ಮೂಸಿದನಾ ಹಣ್ಣ || ಚಂದಮಾಮ |||| 6 ||
ಕಣ್ಣಿಲ್ಲದಾತನು ಕೆಂಪನೆ ಹಣ್ಣೆಂದ | ಚಂದಮಾಮ ||
ಅಂಗುಳಿಲ್ಲದಾತ ನುಂಗಿದನಾ ಹಣ್ಣ || ಚಂದಮಾಮ |||| 7 ||
ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ | ಚಂದಮಾಮ ||
ಸುಲಭ ಪದವಿದು ನಳಿನಜಾಂಡದೊಳು || ಚಂದಮಾಮ |||| 8 ||
ಗುರುವಿನ ಮಹಿಮೆ ಗುರುವೆ ತಾ ಬಲ್ಲನು | ಚಂದಮಾಮ ||
ಮೂಢನಾದವನೇನು ಬಲ್ಲನು ಈ ಮಾತ || ಚಂದಮಾಮ |||| 9 ||
ಕನಕನಾಡಿದಾ ಗುಟ್ಟು ಆದಿಕೇಶವ ಬಲ್ಲ | ಚಂದಮಾಮ ||
ತಿಳಿದವರು ಪೇಳಿರೀ ಹಳೆಗನ್ನಡವನ್ನು || ಚಂದಮಾಮ ||
48) ಒಡವೆ ಹೋಯಿತು ಮನ ಧೃಡವಾಯಿತು
ಒಡವೆ ಹೋಯಿತು ಮನ ಧೃಡವಾಯಿತು || || ಪ ||
ಹಿಡಿದರೋಡುವ ಕಳ್ಳ ಬಿಡದೆ ಕದ್ದೊಯ್ದ || || ಅ.ಪ.||
ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತು
ಚಾರುತರದ ಇಪ್ಪತ್ನಾಲ್ಕೆಳೆಯ ಸರವು ಒಂದಿತ್ತು ||
ಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತು
ದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ || || 1 ||
ಎಪ್ಪತ್ತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತು
ಕಪ್ಪು ಬಿಳುಪು ಕೆಂಪುವರ್ಣದ ಪದಕವೊಂದಿತ್ತು ||
ಒಪ್ಪವಿತ್ತ ಹಸ್ತಕಡಗ ಆಶಪಾಶ ಎರಡಿತ್ತು
ಒಪ್ಪವನ್ನು ಸಾಧಿಸುತ್ತ ನೇತ್ರವೆಂಬ ಕಳ್ಳ ಕದ್ದ || || 2 ||
ಹುಟ್ಟು ಸಾವು ಎರಡು ಎಂಬ ಘಟ್ಟಿತೂಕದ ನಗವಿತ್ತು
ಕಷ್ಟಸುಖ ಕರ್ಮಗಳೆಂಬ ಸಂಚಿಗಳಿತ್ತು ||
ಅಷ್ಟು ಇಷ್ಟು ಚಿಲ್ಲರೆ ಪೆಟ್ಟಿಗೆಯಲಿ ತುಂಬಿತ್ತು
ದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಕದ್ದ || || 3 ||
ಎಲ್ಲ ಒಡವೆ ಹೋಯಿತಾದರು ಫುಲ್ಲಳಾಗಿ ಮೆರೆಯುತ್ತಾಳೆ
ಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆ ||
ಬಲ್ಲಿದಳು ಈಕೆಯೆಂದು ಇವಳ ಬಗೆಗೆ ತಿಳಿಯಿತೆಂದು
ಕೊಲ್ಲಬಾರದೆನುತ ಹೇಳಿ ಮನೆಯ ಬಿಟ್ಟು ಹೊರಗಟ್ಟಿದ || || 4 ||
ಇಂಥ ಒಡವೆ ಹೋಯಿತೆಂದು ಚೋದ್ಯಪಟ್ಟು ನೋಡುತಿರಲು
ತಂತ್ರಮಾಡಿ ಆದಿಕೇಶವ ಶ್ರೀಹರಿಯುತಾನೆ ಬಂದು ||
ತಂತ್ರವನ್ನು ಹೇಳಿ ಜ್ಞಾನಮಾರ್ಗವನ್ನು ಬಿಟ್ಟುಕೊಟ್ಟು
ಸಂತಸದಿಂದ ಇರು ಎಂದು ಚಿಂತೆಬಿಡಿಸಿ ಸಲೆ ಸಲಹಿದ || || 5 ||
49) ಏಣನಯನೆ ಏಣಭೋಜಮಧ್ಯಳೆ
ಏಣನಯನೆ ಏಣಭೋಜಮಧ್ಯಳೆ ತೋರೆ
ಏಣಾಕಂಬಿಂಬಮುಖಿ |
ಏಣಾರಿರಿಪುಶಿರಕುಚಯುಗೆ ಕರೆತಾರೆ
ಏಣಾಂಕಧರಸಖನ |||| ಪ ||
ಚಳಿಯ ಮಗಳ ತಾಯಳಿಯನ ತನಯನ | ಇಳುಹದೆ ಪೊತ್ತಿಹನ ||
ಬಳಿದುಣ್ಣನೀಸದೆ ಸೆಳೆದುಂಡಣ್ಣನ | ಸಲಹಿದಾತನ ಸುತನ ||
ಕಳದೊಳು ತಲೆಯ ಚೆಂಡಾಡಿದ ಧೀರನ | ಬಳಿ ವಾಘೆಯನು ಪಿಡಿದನ ||
ಇಳೆಯ ಮೊರೆಯ ಕೇಳಿ ಖಳರುತ್ತಮಾಂಗವ | ನಿಳುಹಿದಾತನ ತೋರೆಲೆ || 1 ||
ಇಪ್ಪತ್ತನಾಲ್ಕು ನಾಮಗಳೊಳಗೇಳನು | ತಪ್ಪದೆಣಿಸಿ ಕಳೆದು ||
ಬಪ್ಪುವ ಎಂಟನೆಯ ನಾಮದ ಪೆಸರಿನೊ | ಳಿಪ್ಪ ಕಡೆಯ ಬೀಡಲಿ ||
ಅಪ್ಪ ಜಯದರಸನ ಕೂಡೆ ಜನಿಸಿದವಳ | ಕಪ್ಪುವರ್ಣದ ಮೆಯ್ಯಳ ||
ಅಪ್ಪನ ಮಿತ್ರನ ಮಗನೆಂಬ ಬೊಮ್ಮನ | ಬೊಪ್ಪನ ತೋರೆನಗೆ || 2 ||
ಬಿಡುಗಣ್ಣಬಾಲೆ ತನ್ನೊಡೆಯನ ನುಡಿಕೇಳಿ | ಧೃಡದಿಂದ ನಡೆದು ಬಂದು ||
ಜಡಿವ ಕೋಪಕೆ ಶಾಪವಡೆದು ಕೊಂಡಾಕ್ಷಣ | ನುಡಿದ ದಿನವು ದಾಟಲು ||
ಪಡೆಯನೆಲ್ಲವ ನಡುರಣದಲಿ ಸೋಲಿಸಿ | ಜಡಿದು ಗೋವುಗಳನೆಲ್ಲ ||
ಒಡನೆ ತನ್ನೂರಿಗೆ ಹೊಡೆತಂದ ಧೀರನ | ಒಡೆಯನ ತೋರೆನಗೆ || 3 ||
ಸುರರ ವಾದ್ಯದ ಪೆಸರಲಿ ಬಸುರಲಿ ಬಂದ | ಉರಗನತ್ತೆಯ ಮಗನ ||
ಹಿರಿಯ ತಮ್ಮನ ಸುತ್ತಿ ನುಂಗದೆ ತಂದೆಯ | ಮರಳಿ ನುಂಗಿದ ಧೀರನ ||
ಧುರದೊಳು ಧ್ವಜವ ಕೀಲಿಸಿದಾತನ ಕು | ವರರೆಲ್ಲರನು ಕೊಂದನ
ವರ ಮಾತೆಯ ಕೂಡ ಜನಿಸಿದ | ಧೀರನ ಗರುವೆ ನೀ ತೋರೆನಗೆ || 4 ||
ಮೂರು ಬಟ್ಟೆಯೊಳಿಪ್ಪ ನಾರಿಯ ಗಂಡನ | ವೈರಿಯ ಹಿರಿಯಣ್ಣನ ||
ಮೂರೊಂದು ಮಾತಿನ ಸಾರವನೆ ಕದ್ದು | ವಾರಿಧಿಯನೆ ಪೊಕ್ಕನ ||
ಬೇರೊಂದು ರೂಪದಿ ಜನಿಸಿ ಖಳನ ಕೊಂದು | ಧಾರಿಣಿಸುರಗರ್ಿತ್ತನ ||
ವೀರ ಕಾಗಿನೆಲೆಯಾದಿ ಕೇಶವ ರಘು | ವೀರನ ಕರೆದು ತೋರೆ || 5 ||
50) ಈತನೀಗ ವಾಸುದೇವನು
ಈತನೀಗ ವಾಸುದೇವನು | ಲೋಕದೊಡೆಯ
ಈತನೀಗ ವಾಸುದೇವನು || ಪ ||
ಈತನೀಗ ವಾಸುದೇವ | ನೀ ಸಮಸ್ತ ಲೋಕದೊಡೆಯ |
ದೂತಗೊಲಿದು ತೇರನೇರಿ | ತೇಜಿಪಿಡಿದು ನಡೆಸಿದಾತ || ಅ.ಪ. ||
ದನುಜೆಯಾಳ್ದನಣ್ಣನಯ್ಯನ | ಪಿತನ ಮುಂದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತ ||
ಅನುಜೆಯಾಳಿದವನ ಬೆಂಕಿ | ಮುಟ್ಟದಂತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂತರ್ಿಯನ್ನೆ ನೋಡಿರೋ || 1 ||
ನರನ ಸುತನರಣ್ಯದಲ್ಲಿ | ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ತಾನು ಯೋಚಿಸಿ ||
ಭರದಲವನ ಕರೆದು ಕೇಳೆ | ಕುರುಹು ತೋರಿ ಪತ್ರವನ್ನು
ಹರಿಸಿದವನ ಶಿರವ ತರಿದ ದೇವ ಕಾಣಿರೊ|| 2 ||
ಸೃಷ್ಟಿಕರ್ತಗೆ ಮಗನಾದವನಿ | ಗಿಷ್ಟಭೂಷಣ ಅಶನವಾದವ
ನಿಷ್ಟಪುತ್ರಗೆ ವೈರಿ ತೊಡೆಯ ಛೇದಿಸೆನ್ನುತ ||
ಕಷ್ಟವನ್ನು ಕಳೆದು ಭಕ್ತ | ರಿಷ್ಟವನ್ನು ಕಾದಂಥ ಉ-
ತ್ಕೃಷ್ಟ ಮಹಿಮನಾದ ದೇವನೀತ ಕಾಣಿರೊ|| 3 ||
ಕ್ರೂರನಾದ ಫಣಿಪಬಾಣ | ತರಣಿಜಾತನೆಚ್ಚುವಾಗ
ವೀರ ನರನ ಕಡೆಗೆ ಬಪ್ಪುದನ್ನು ಈಕ್ಷಿಸಿ ||
ಧಾರಿಣಿಯ ಪದದೊಳೌಕಿ | ಚರಂಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೊ|| 4 ||
ವ್ಯೋಮಕೇಶನಿಪ್ಪ ದೆಸೆಯ | ಸರ್ವಜಗಕೆ ತೋರಿಸುತ್ತ
ಸಾಮಜವನೇರಿ ಬಹನ ಶಕ್ತಿಯೀಕ್ಷಿಸಿ ||
ಪ್ರೇಮದಿಂದ ಉರವನೊಡ್ಡಿ | ಡಿಂಗರಿಗನ ಕಾಯ್ದ ಸಾರ್ವ
ಭೌಮ ಬಾಡದಾದಿಕೇಶವನ್ನ ನೋಡಿರೊ|| 5 ||