ಉಗಾಭೋಗ (ನ)
ನಂಬು ನಂಬು ಎನ್ನ ಎಂದು ಆಡುವ
ನಂಬು ನಂಬು ಎನ್ನ ಎಂದು ಆಡುವ ಸ್ವಾಮಿ | ಬಿಂಬದವನಲ್ಲವೆ ಎನಗೆ ಅಂದು
ನೋಡೆ | ಸಂಭ್ರಮ ಪೂರ್ತಿಸದು ಕಾಂಬೋಣಾದರೂ ಮನದ | ಹಂಬಲವು ಬಿಡದೋ
ವಿಷಯದಲ್ಲಿ | ನಂಬಿದರೆ ಅವನ ನಂಬಿದವನೇ ಅಲ್ಲ | ಅಂಬಿಕಾಹೃದಯಸ್ಥನೆನ್ನು ಭೇದವ
ತಿಳಿದು | ಸಂಭ್ರಮದ ಜಾಗೃತಿ ಹುಟ್ಟಲಿ ಅವನಲ್ಲಿ | ಬೊಂಬೆಯಾಗಿ ಎದುರುನಿಂತು ತೋರಿ
ಆಡೆ | ನಂಬಿಗೆಯು ಸಾಲದೋ ಅಂಬುಜಾಕ್ಷ | ನಂಬಿ ಇಪ್ಪೆನುಕಂಡ್ಯ ಈಪರಿ ಚನ್ನಾಟ |
ಸಂಭ್ರಮದಲೆನ್ನ ಮೋಹಿಸಬ್ಯಾಡ | ನಂಬಿಗಿ ಬಲು ಉಂಟು ಆಗಿರಲಿ ನಿನ್ನಲಿ | ನಂಬುವರೋ
ಜನ ಅನ್ಯಹಂಬಲಿಸದೆ | ನಂಬಿ ನಿನ್ನನರಿಯೆ ಹಿಂದೆ ಇಂದು ಮುಂದೆ ಘನ | ನಂಬಿಗೆ
ಇತ್ತರೆ ನಿನ್ನ ನಂಬುವೆನಯ್ಯಾ | ಬಿಂಬಮೂರುತಿಯೇ ಗೋಪಾಲವಿಠಲ
ನಕ್ಷತ್ರ ಕಾಣದ ಪ್ರಾತಃ ಸಂಧ್ಯಾ ಅಧಮ
ನಕ್ಷತ್ರ ಕಾಣದ ಪ್ರಾತಃ ಸಂಧ್ಯಾ ಅಧಮ | ನಕ್ಷತ್ರಪತಿಯನುಜ ಕೃಷ್ಣ ಚಕ್ರವ ಪಿಡಿದ |
ನಕ್ಷತ್ರ ಕಂಡರೆ ನಿಶದಿ ಅಧಮ | ಈಕ್ಷಿಸಿ ಮಧ್ಯಾಹ್ನದಿ ಸಂಧ್ಯಾವಂದನೆ ಗೈಯ್ಯೆ | ಅಕ್ಷಯಾನಂತ
ಶ್ರೀ ನಾರಾಯಣವಿಠಲ | ಮೋಕ್ಷವ ಕೊಡುವನು ಈಪರಿ ಚರಿಸಲು
ನಕ್ಷತ್ರಸೂಸಿ ಕಂಡ ನರಗೆ
ನಕ್ಷತ್ರಸೂಸಿ ಕಂಡ ನರಗೆ ಉತ್ತಮ ಸಂಧ್ಯಾ | ನಕ್ಷತ್ರ ಒಂದರೆ ಕಂಡನರಗೆ ಮಧ್ಯಮ
ಸಂಧ್ಯಾ | ನಕ್ಷತ್ರ ದೂರಕಾಣದ ನರಗೆ ಅಧಮ ಸಂಧ್ಯಾ | ನಕ್ಷತ್ರಬಿಟ್ಟರೆ ನಾರಾಯಣ
ಪುರಂದರವಿಠಲ ಬಿಡುವ
ನರವೃಂದವೆಂಬೊ ಕಾನನದಲ್ಲಿ
ನರವೃಂದವೆಂಬೊ ಕಾನನದಲ್ಲಿ ಶ್ರೀ-| ಹರಿ ನಾಮವೆಂಬಂಥಾ ಕಲ್ಪವೃಕ್ಷ ಹುಟ್ಟಿತಯ್ಯ |
ನೆರಳು ಸೇರಲುಂಟು ಫಲವು ಮೆಲ್ಲಲುಂಟು | ಒರೆವ ನಾಲಗೆಯಲಿ
ನಾಮತ್ರಯಂಗಳುಂಟು | ಇದೇ ಮುನಿಜನರ ಮನೆಯ ಕೊನೆಯ ಠಾವೊ | ಇದೇ
ಬ್ರಹ್ಮಾದಿಗಳ ಸದಮಲ ಹೃದಯ ಪೀಠ | ಇದೇ ದ್ವಾರಾವತಿ | ಇದೇ ಕ್ಷೀರಾಂಬುಧಿ | ಇದೇ
ಪುರಂದರವಿಠಲನ ವೈಕುಂಠ ಮಂದಿರ
ನವರತ್ನಗಳು ಕಂಡ ಕಂಡ ಠಾವಿನಲ್ಲಿ
ನವರತ್ನಗಳು ಕಂಡ ಕಂಡ ಠಾವಿನಲ್ಲಿ ಉಂಟೆ? | ನವವಿಧಭಕುತಿ ಕಂಡ
ಕಂಡವರಿಗುಂಟೆ? | ದೇವ ನಿನ್ನಭಕುತಿ ಸುಖಾನುಭವ ಸೂರೆ | ಕಂಡರೆ ಬಾರದು ಕಲಿತರೆ
ಬಾರದು | ಪುರಂದರವಿಠಲ ನಿನ್ನ ದಯವಿಲ್ಲದನಕ
ನಲ್ಲನಿಲ್ಲದ ಸತಿ ಚಲುವಿದ್ದು
ನಲ್ಲನಿಲ್ಲದ ಸತಿ ಚಲುವಿದ್ದು ಫಲವೇನು | ಸಲ್ಲದ ಹಣ್ಣಿಗೆ ಸವಿಯಿದ್ದು ಫಲವೇನು |
ಬಲ್ಲವರಿಲ್ಲದ ಸಭೆಯಿದ್ದು ಫಲವೇನು | ನಮ್ಮ-| ನೊಲ್ಲದ ಹಯವದನ ಎಲ್ಲಿದ್ದರೇನು
ನ ತೇ ವಿಷ್ಣೋ ಎಂದೆಂಬೋ
“ನ ತೇ ವಿಷ್ಣೋ” ಎಂದೆಂಬೋ ನಿಗಮಾರ್ಥ-| ಹಿತದಿಂದಲಿ ತಿಳಿದು ಹಿರಿದಾಗಿ
ಅರಿದು | ಕ್ಷಿತಿಸುರರಗರ್ಭದಲಿ ಬಂದು | ಮಾರುತಿಮತದಲಿ ಬಲುಜ್ಞಾನಿಯಾಗು |
ಇತರಮತವ ನಂಬಿ ಓದದಿರು ವೇದ | ಗತಿಯಿಲ್ಲದೆ ಹಾಯ ಹಾಯನಾಗುವದೇನು |
ಯತಿಗಳಿಗೆ ಸಿಕ್ಕ ವಿಜಯವಿಠ್ಠಲಂಗೆ | ಪ್ರತಿಕಕ್ಷಿಯಿಲ್ಲ ದೇವತೆಗಳೊಳು ಕೇಳು | ಮತಿಗೆಡದಿರು
ನೀನು ಮತಿಗೆಡದಿರು ನೀನು
ನಂದನಂದನ ಪಾಹಿ ಗುಣವೃಂದ
ನಂದನಂದನ ಪಾಹಿ ಗುಣವೃಂದ ಸುಂದರ ರೂಪ ಗೋವಿಂದ ಮುಕುಂದ ||ಪ||
ದಿನಕರಭವಪಾಲ ಕನಕಾಂಕತ ಚೇಲ | ಜನಕಜಾಲೋಲ ಜನಕಾನುಕೂಲ ||೧|| ಪವನಜ
ಪರಿವಾರ ಯವನವಿದಾರ | ನವರತ್ನಹಾರ ನವನೀತಚೋರ ||೨|| ತುಂಗ ವಿಹಂಗತುರಂಗ
ದಯಾಪಾಂಗ | ರಂಗವಿಠಲ ಭವಭಂಗ ಶುಭಾಂಗ ||೩||
ನಿಷ್ಠರಿನ್ನೊಲ್ಲರು
ನಿಷ್ಠರಿನ್ನೊಲ್ಲರು ನಾಕವಾಸದ ಸುಖ । ಕೊಟ್ಟರಿನ್ನೊಲ್ಲರು ಸಕಲ ಸಂಪದವನ್ನು । ಅಷ್ಟಾಂಗಯೋಗದ ಪಥಸಿದ್ಧಿಯೊಲ್ಲರು । ಕೃಷ್ಣನ್ನ ಪಾದಾಬ್ಜಮಕರಂದ ಭಕುತರು । ನಿಷ್ಠರು ಶ್ರೀ ಹರಿಯ ನಿಷ್ಠರು ಕೇಳಿರಿ । ತುಷ್ಟಿಯನೊಲ್ಲರು ಶ್ರಮಪದ ಅನುಭವ ಅ- । ನಿಷ್ಟಕೋಟಿಗಳನ್ನು ದೃಷ್ಟಿಗೆ ತಾರರು । ನಿಷ್ಠರು ಶ್ರೀ ಹರಿನಿಷ್ಠರು ಕೇಳಿರಿ । ಶಿಷ್ಟರಿಗಿಷ್ಟಮೂರುತಿ ಪ್ರಸನ್ವೇಂಕಟ । ಕೃಷ್ಣನ್ನ ಭಕುತಿಗೆ ಮೋಹಿತಮರುಳರು ।
ನಿತ್ಯ ಪತಿಭಾವ
ನಿತ್ಯ ಪತಿಭಾವ ಶ್ರೀ ಲಕುಮಿದೇವಿಗಯ್ಯ । ನಿತ್ಯ ಪುತ್ರಭಾವ ಬೊಮ್ಮಪ್ರಾಣರಿಗೆ । ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ । ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ । ಇಂತೆಂದ ಪುರಂದರವಿಠಲ
ನಿನಗೆ ನೀನೇ ಮೋಹ
ನಿನಗೆ ನೀನೇ ಮೋಹ । ನಿನಗೆ ನೀನೇ ಪ್ರೀತಿ । ನಿನಗೆ ನೀನೇ ಭಕ್ತ । ನಿನಗೆ ನೀನೇ ದ್ವೇಷಿ । ನಿನಗೆ ನೀನೇ ಜ್ಞಾನಿ । ನಿನಗೆ ನೀನೇ ಮಾಳ್ಪೆ ಪುರಂದರವಿಠಲ .
ನಿನ್ನ ಕಾಲ ಹೆಜ್ಜೆಯ ಪಿಡಿದು
ನಿನ್ನ ಕಾಲ ಹೆಜ್ಜೆಯ ಪಿಡಿದು ನಾನಿಲುವೆ । ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ । ನಿನ್ನ ಛತ್ರಚಾಮರ ಪಿಡಿದೇಳುವೆ । ನೀರ ನೀವಳಿಸಿಕೊಂಡು ಕೊಬ್ಬುವೆನು । ಬಿಡೆನು ಬಿಡೆನು ನಿನ್ನ ಚರಣಕಮಲವ । ಪುರಂದರವಿಠಲ ನಿನ್ನ ಪಾದವ ಬಿಡೆನು.
ನಿನ್ನ ದಾಸನು ಆಗಿ,
ನಿನ್ನ ದಾಸನು ಆಗಿ, ನಿನ್ನ ಎಂಜಲನುಂಡು । ಅನ್ಯ ದಾಸನಾದರೆ, ಲೋಕ ನಗರೆ ?। ನಿನ್ನ ಚರಣಯುಗ್ಮವ ಪಿಡಿಸಿ । ಎನ್ನ ಕಾಯೋ ಪುರಂದರವಿಠಲ.
ನಿನ್ನ ಧ್ಯಾನವ ಕೊಡು, ಎನ್ನ ಧನ್ಯನ ಮಾಡು । ಪನ್ನಂಗಶಯನ ಶ್ರೀ ಪುರಂದರವಿಠಲ.
ನಿನ್ನ ನಾಮಭಂಡಾರ
ನಿನ್ನ ನಾಮಭಂಡಾರ ಕದ್ದ ಕಳ್ಳ ನಾನು । ನಿನ್ನ ಭಕ್ತಿಯೆಂಬೊ ಸಂಕಲೆಯ ಹಾಕಿ । ನಿನ್ನ ದಾಸರ ಕೈಯ್ಯ ಎನ್ನ ಒಪ್ಪಿಸಿಕೊಟ್ಟು । ನಿನ್ನ ಮುದ್ರಿಕೆಯಿಂದ ಘಾಸಿಮಾಡಿಸೋ ಕೃಷ್ಣ । ನಿನ್ನ ವೈಕುಂಠದುರ್ಗದಲ್ಲಿ, ಎನ್ನ ಸೆರೆಯಿಟ್ಟು । ಚೆನ್ನಾಗಿ ಸಲಹೋ ಶ್ರೀ ಪುರಂದರವಿಠಲ.
ನಿನ್ನ ನುಡಿದೆ ನಾನು,
ನಿನ್ನ ನುಡಿದೆ ನಾನು, ನಿನ್ನ ಪಾಡಿದೆ ನಾನು,। ನಿನ್ನ ಕಾಡಿದೆ ನಾನು, ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು । ಅನಂತಬಗೆಯಿಂದ ಕೊಂಡಾಡುವೆನು ವಿಠಲ । ಎನ್ನ ಭಾರ ನಿನ್ನದು, ಅನಂತಕ್ಷಣಕೆ । ಮುನ್ನೆ ಪೇಳುವದೆಲ್ಲ ಉಪಚಾರವೊ ಸ್ವಾಮಿ । ಘನ್ನ ಪಂಡರಿರಾಯಾ, ರನ್ನ ಪ್ರಸನ್ನ, ಸಂಪನ್ನಮತಿಯಕೊಡು ಪುರಂದರವಿಠಲ.
ನಿನ್ನಾಳೆಂದೆಡೆ ಹರಿಯೆ ಇನ್ನೇನಿನ್ನೇನು
ನಿನ್ನಾಳೆಂದೆಡೆ ಹರಿಯೆ ಇನ್ನೇನಿನ್ನೇನು । ಎನ್ನೊಳಿದ್ದವ ನೀನಾದೆ । ನಿನ್ನ ದಾಸ ನಾನಾದೆ । ಇನ್ನು ಸಾಕದಿರಲು ನಗರೇ ನಿನ್ನ ದಾಸರು । ಘನ್ನಮಹಿಮ ವಿಠಲರಾಯ.
ನಿನ್ನನೆ ಪಾಡುವೆ ನಿನ್ನನೆ
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ । ನಿನ್ನನೆ ಬೇಡಿ ಬೇಸರಿಸುವೆನಯ್ಯ । ನಿನ್ನ ಕಾಲನು ಪಿಡಿವೆ ನಿನ್ನ ಹಾರಯಿಸುವೆ । ನಿನ್ನ ತೊಂಡರಿಗೆ ಕೈಗೊಡುವೆ । ನಿನ್ನಂತೆ ಸಾಕಬಲ್ಲವನು ಇನ್ನುಂಟೆ । ಘನ್ನ ಪುರಂದರವಿಠಲ ದೇವರ ದೇವ.
ನಿನ್ನ ಬೊಮ್ಮಮೂರುತಿಗೆ
ನಿನ್ನ ಬೊಮ್ಮಮೂರುತಿಗೆ ನಮೋ ನಮೋ । ನಿನ್ನ ರುದ್ರಮೂರುತಿಗೆ ನಮೋ ನಮೋ । ನಿನ್ನ ಇಂದ್ರಮೂರುತಿಗೆ ನಮೋ ನಮೋ । ನಿನ್ನ ಚಂದ್ರಮೂರುತಿಗೆ ನಮೋ ನಮೋ । ನಿನ್ನ ಸ್ಥಾವರಮೂರುತಿಗೆ ನಮೋ ನಮೋ । ನಿನ್ನ ಜಂಗಮಮೂರುತಿಗೆ ನಮೋ ನಮೋ । ನಿನ್ನ ಶ್ರೀಮೂರುತಿಗೆ ನಮೋ ಪುರಂದರವಿಠಲ.
ನಿನ್ನ ಭಕ್ತರೆಂದೆನಿಸಿದ
ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು । ದಿನಂಪ್ರತಿ ದೀನ ಅನ್ನ ಉದಕ ವಸ್ತುಗಳು ಕಾಣದೆ ಇರಬೇಕು । ಬೆನ್ಹತ್ತಿ ರೋಗಗಳು ಹತ್ತಿ ಇರಲುಬೇಕು । ತನ್ನವರ ಕೈಯಿಂದ ಛೀ ಎನಿಸಿಕೊಳಬೇಕು । ಪನ್ನಗಶಯನ ಶ್ರೀ ಪುರಂದರವಿಠಲ.
ನಿನ್ನ ಮೆಲ್ಲಡಿ ಈರಡಿ
ನಿನ್ನ ಮೆಲ್ಲಡಿ ಈರಡಿ ಮಾಡಿತು । ನಿನ್ನ ಉಂಗುಟವು, ಬ್ರಹ್ಮಾಂಡ ನುಂಗಿತು । ನಿನ್ನ ನಖ, ಸುರನದಿಯ ತಂದಿತು । ನಿನ್ನ ಕರ, ಮಧುಕೈಟಭನೊರಸಿತು । ನಿನ್ನ ಸರಿತೋಳು, ಶ್ರೀ ಲಕುಮಿಯನಪ್ಪಿತು । ನಿನ್ನ ಪಾದದ ನೆನಹೆ, ಸಕಲಸಂಪದ ಪುರಂದರವಿಠಲ.
ನಿನ್ನಂಥ ತಂದೆ,
ನಿನ್ನಂಥ ತಂದೆ, ನನಗುಂಟು ನಿನಗಿಲ್ಲ । ನಿನ್ನಂಥ ಸ್ವಾಮಿ, ಎನಗುಂಟು ನಿನಗಿಲ್ಲ। ನಿನ್ನಂಥ ದೊರೆ, ಎನಗುಂಟು ನಿನಗಿಲ್ಲ। ನೀನೇ ಪರದೇಶಿ, ನಾನೇ ಸ್ವದೇಶಿ। ನಿನ್ನ ಅರಸಿ ಲಕ್ಷ್ಮೀ, ಎನಗೆ ತಾಯಿಯುಂಟು। ಎನಗಿದ್ದ ತಾಯಿ ತಂದೆ ನಿನಗ್ಯಾರು- । ತೋರೋ ಪುರಂದರವಿಠಲ
ನಿರುಮಲೋದಕದೆರಿಯೆಲಘದಶ
ನಿರುಮಲೋದಕದೆರಿಯೆಲಘದಶ । ಹರವು ಕ್ಷೀರಕೆ ಶತ ದಧಿಗೆ ಸಾವಿರ ಮಧುವಿನಿಂಧತ್ತುಸಾವಿರ ಘೃತಕೆ ಲಕ್ಷಹರ । ನೆರೆ ಗುಡದೆ ದಶಲಕ್ಷ ಟೆಂಗಿನ । ವರಜಳದಿ ಶತಲಕ್ಷ ಗಂಧಜ- । ಲೆರಿಯೆ ಶ್ರೀಪ್ರಾಣೇಶವಿಠಲಗೆ, ಪಾಪನಾಶನವೋ
ನಿನ್ನ ಭಕ್ತರ ಮನೆಯ ನಾಯಿ
ನಿನ್ನ ಭಕ್ತರ ಮನೆಯ ನಾಯಿ ಎಂದು ಎನ್ನನು । ಮುನ್ನಿನವರು ಉಂಡೆಂಜಲಶೇಷ- । ದನ್ನವನ್ನು ಇಕ್ಕಿ ಸಲಹಬೇಕೊ ಮೂಢ ಚಿನ್ನನನ್ನು । ಘನ್ನಗುರು ಮಹಿಪತಿಸ್ವಾಮಿ ದಯಾಸಂಪನ್ನ.
ನಿನ್ನ ನಂಬಿದಮ್ಯಾಲೆ ಇಷ್ಟು
ನಿನ್ನ ನಂಬಿದಮ್ಯಾಲೆ ಇಷ್ಟು ಭವಣಿಗಳ್ಯಾಕೆ । ಘನ್ನಕರುಣಿ ಕೃಷ್ಣ ಕನಕಾದ್ರಿವಾಸ । ಇನ್ನಾರ ಕಾಣೆನೊ ಮನ್ನಿಸಿ ಸಾಕುವರ ।
ಅನ್ಯಕರ್ಮದಲ್ಲಿ ಅತ್ಯಾಸಕ್ತಿಕೊಟ್ಟು । ಕಣ್ಣಿಗೆ ತೋರಗೊಡದೆ ಬಹುಕಾಲದಿಂದ । ಎನ್ನ ದು:ಸ್ಥಿತಿಯಲ್ಲಿ ಸುಖದು:ಖವನು ಹಚ್ಚಿ । ಸನ್ಮಾನ್ಯನಾಗಿ ನೋಡತಿಹುದುಚಿತವೇ? । ಚಿನ್ಮಯಮೂರುತಿ ಮುದ್ದುಮೋಹನ್ನವಿಠಲ ಅ- । ಚ್ಛಿನ್ನ ಭಕ್ತಿ ಕೊಟ್ಟು ಪ್ರಸನ್ನನಾಗೋ ಬೇಗ
ನಿಗಮಗೋಚರ ನಿನ್ನ
ನಿಗಮಗೋಚರ ನಿನ್ನ ಅಗಲಿ ನಾನಿರಲಾರೆ । ಹಗಲಿರುಳರೆಘಳಿಗೆನ್ನ ಅಗಲದೆ ಸಲಹೋ । ಭುಗಿಲು ಗುಣವ ಬಿಡಿಸಿ ಸೊಗಯಿಪ ಧೈರ್ಯವನಿತ್ತು । ಮಗನ ಸಮಯಕ್ಕೊದಗು ಜಗದಾತ್ಮಶ್ರೀರಾಮ.
ನಿತ್ಯ ಗುಣಾರ್ಣವ
ನಿತ್ಯ ಗುಣಾರ್ಣವ ನಿಗಮಗೋಚರ । ನಿತ್ಯನಿರುಪಮಾತ್ಮ ನಿಜಗುಣ ನಿಖಿಲೇಶ। ನಿತ್ಯ ನಿರ್ಮಲ ನಿಜಗುಣ ಪರಿಪೂರ್ಣ । ನಿತ್ಯಮುಕ್ತಿ ಸುಖವನಿತ್ತು ಸಲಹು ಶ್ರೀರಾಮ.
ನಿನ್ನ ಕೃಪೆಯಿಂ ನಾನು
ನಿನ್ನ ಕೃಪೆಯಿಂ ನಾನು ಜನಿಸಿ ಮಾನವನಾಗಿ । ನಿನ್ನದೇ ಉಂಡುಟ್ಟು ಬದುಕಿಹೆನು ಜಗದಿ । ಇನ್ನಾರ ಹಂಗೆನಗೆ ಕಿಂಚಿತ್ತು ಇಲ್ಲಯ್ಯ । ಭಿನ್ನವಿಲ್ಲದೆ ಪೊರೆ ಶ್ರೀರಾಮ ಪ್ರಭು ತಂದೆ.
ನಿನ್ನನೇ ಕಾಡುವೆನು
ನಿನ್ನನೇ ಕಾಡುವೆನು ನಿನ್ನನೇ ಬೇಡುವೆನು । ನಿನ್ನ್ಹೊರತು ಅನ್ಯರನ್ನು ಇನ್ನ ನಾನರಿಯೆ । ಎನ್ನಾಗಿ ಪೂರೈಸು ಭಿನ್ನವಿಲ್ಲದಲೀಗ । ನಿನ್ನದಾಸನೆಂದೆನಿಸಿ ಎನ್ನಯ್ಯ ಶ್ರೀರಾಮ.
ನಿನ್ನ ಸೇವಕನೆಲೊ ನಾನು
ನಿನ್ನ ಸೇವಕನೆಲೊ ನಾನು । ನಿನ್ನ ಸೇವೆಯ ನೀಡಲೋ ನೀನು । ಭಿನ್ನವಿಲ್ಲದಡಿಗಡಿಗೆ । ನಿನ್ನ ಚರಣಂಗಳೆನ್ನ ಹೃದಯದಿ । ಮನ್ನಿಸಿ ಸ್ಥಿರಪಡಿಸಿ । ಉನ್ನತೋನ್ನತ ಮಹಿಮ । ಪನ್ನಂಗಹರಗಮನ । ಎನ್ನಯ್ಯ ಶ್ರೀರಾಮ
ನಿನ್ನಿಂದ ಬೆಳಗುವುದು
ನಿನ್ನಿಂದ ಬೆಳಗುವುದು ನಿನ್ನಿಂದ ಮುಳುಗುವುದು । ನಿನ್ನಿಂದಲಳಿಯುವುದು ನಿನ್ನಿಂದಲುಳಿಯುವುದು । ನಿನ್ನಿಂದ ಶಕ್ತರು ನಿನ್ನಿಂದ ಮುಕ್ತರು । ನಿನ್ನ್ಹೊರತುಧನ್ಯರಾರೆನ್ನೊಳಿರ್ದು ಪೊರೆ ಶ್ರೀರಾಮ.
ನಿನ್ನಧೀನದವಗೆ ನೇನೇನುಮಾಡಿದುದೋ
ನಿನ್ನಧೀನದವಗೆ ನೇನೇನುಮಾಡಿದುದೋ । ನಿನ್ನದೇ ಕೀರುತಿಯೊ ನೀರಜಾಕ್ಷ । ನಿನ್ನನಲ್ಲದೆ ಅನ್ಯ ಅರಿಯೆನೆಂತೆಂಬುವುದು । ನಿನ್ನ ಮನಬಂದರೆ ಸಾಕಲ್ಯವೋ । ಎನ್ನಂಥ ಪಾಮರನು ನಿನ್ನಲಿಪ್ಪನೇನೋ । ನಿನ್ನ ಉಪಕಾರಕ್ಕೆ ಮಿತಿಯು ಉಂಟೆ ?। ನಿನ್ನ ನಂಬಿದೆ ವರದಗೋಪಾಲವಿಠಲ । ಅನ್ನಂತಪರಿ ಪೊರೆವಿ ಅಖಿಳೇಶ್ವರ.
ನಿನ್ನ ಬಿಟ್ಟಿರಲಾರೆ
ನಿನ್ನ ಬಿಟ್ಟಿರಲಾರೆ ನೀರಜದಳನೇತ್ರ । ನಿನ್ನವರ ಬಿಟ್ಟರಘಳಿಗಿರಲಾರೆನೋ । ಎನ್ನಬಯಕೆ ಇದೇ ಸ್ವಾಮಿ ಎಲವೊ ಸೃಷ್ಟಿಗಧಿಕ । ನಿನ್ನವರ ಪಾದಗಳ ನಂಬಿದೆ । ಇನ್ನೇನು ಇನ್ನೇನು ಸೌಭಾಗ್ಯಕೆಣೆಯೇ । ಘನ್ನ ಕರುಣಿಯೇ ಕೇಳು ಪನ್ನಗಾದ್ರಿಯ ಕೃಷ್ಣ । ನಿನ್ನ ನಿನ್ನವರ ಬಿಡೆ ನಿಶ್ಚಯವಿದು । ಎನ್ನ ಸ್ವಾಮಿಯೇ ವರದಗೋಪಾಲವಿಠಲ್ಲ । ನಿನ್ನ ದಯೆ ಎನಗಿರಲಿ ಮರುಜನುಮದಲಿ.
ನಿನ್ನ ಸ್ಮೃತಿಗೊಡದೆಲೆ
ನಿನ್ನ ಸ್ಮೃತಿಗೊಡದೆಲೆ ದೂರನೋಡಿದರಿನ್ನು । ಮನ್ನಿಸುವರ್ಯಾರಯ್ಯಾ ಮಹರಾಯನೇ । ನಿನ್ನಂಥ ಪ್ರಭುವನಾಶ್ರಯಿಸಿದಬಳಿಕಿನ್ನು । ಇನ್ನೊಬ್ಬರನು ಬೇಡುವುದುಚಿತವೇ? ನಿನ್ನನೇ ಮೊರೆಹೊಕ್ಕು ಬದುಕುವನಲ್ಲವೇ ನಾನು । ಎನ್ನಮಾನವು ನಿನ್ನದಲ್ಲವೇನೋ । ಘನ್ನಕರುಣಿ ವರದಗೋಪಾಲವಿಠಲ್ಲ । ನಿನ್ನಲ್ಲಿ ಸಟೆ ಎನಗೆ ನೀರಜಾಕ್ಷ.
ನಿನ್ನಲ್ಲಿ ತಡವಿಲ್ಲದೆ
ನಿನ್ನಲ್ಲಿ ತಡವಿಲ್ಲದೆ ಭಕುತಿಕೊಟ್ಟು । ಅನ್ಯ ಶ್ರವಣವು ಕೇಳದಂತೆ ಕಿವಿ ಇಟ್ಟು । ನಿನ್ನಮೂರುತಿ ಮುನ್ನ ಮನದಲ್ಲಿ ನಟ್ಟು । ನಿನ್ನ ನಾಮವೇ ಎನ್ನ ನಾಲಿಗೆಯೊಳಿಟ್ಟು । ನಿನ್ನ ಬೇಡಿದುದೆಲ್ಲ ನಿಲ್ಲದಲೇ ಕೊಟ್ಟು । ಎನ್ನ ರಕ್ಷಿಸು ವರದಗೋಪಾಲವಿಠಲ । ನಿನ್ನ ನಾ ಬೇಡುವುದಕೇನು? ಮರಹೆ । ನಿನ್ನವರ, ದಾಸನಲಿ ದಯಮಾಡು ಪ್ರಭುವೇ.
ನಿರವಧಿಕಮಹಿಮ
ನಿರವಧಿಕಮಹಿಮ ನಿನ್ನನನುಸರಿಸಿ । ನಡೆವಂಥ ನರನು ನರನೇನಯ್ಯಾ ನಾರಾಯಣ? । ಚಿರಕಾಲ ನಿನ್ನವರ ಮೊರೆಹೊಕ್ಕೆ ದಾಸಂಗೆ । ಪರಮಮಂಗಳತರಂಗಗಳೇ ಅಲ್ಲಿ । ದುರಿತವೆತ್ತಣದವಗೆ? ಸಿರಿವರನೇ ನಿನ್ನ । ಚರಣದರುಶನದಿ ಸುಖವೀಹುದೀಗ । ಹರುಷವಾರಿಧಿಯೊಳು ಲೋಲ್ಯಾಡಿ ಸುಖಿಪಶ್ರೀ । ವರದಗೋಪಾಲವಿಠಲ ಪ್ರಭುವೇ । ಕರುಣೆಗಳರಸನೇ ಪರಮಮಂಗಳ ನಿನ್ನ- । ವರುಗಳೇ ಸಾಕ್ಷಿಯೋ ಸದಕಾಲದಿ.
ನಿನ್ನ ಧ್ಯಾನದ ಶಕ್ತಿಯ ಕೊಡು
ನಿನ್ನ ಧ್ಯಾನದ ಶಕ್ತಿಯ ಕೊಡು । ಅನ್ಯರಲಿ ವಿರಕ್ತಿಯ ಕೊಡು । ನಿನ್ನ ಪಾದಾರವಿಂದದ ಭಕ್ತಿಯ ಕೊಡು । ನಿನ್ನಲಿ ಭವಸಂಪತ್ತಿಯ ಕೊಡು । ನಿನ್ನ ನೋಡುವ ರೂಪವ ಕೊಡು । ಉನ್ಮತ್ತಜನರ ಅತ್ತತ್ತ ನೂಕುವ । ಚಿತ್ತತತ್ವದ ಕೃತ್ಯವ ಕೊಡು । ಕತ್ತಲೆ ಎನ್ನೊಳು ಭವ ಮುತ್ತಿದೆ ಹಯವದನ.
ನಿನ್ನ ನಂಬಿದೆ ಕೃಷ್ಣ,
ನಿನ್ನ ನಂಬಿದೆ ಕೃಷ್ಣ, ಅನ್ಯರೊಬ್ಬರ ಕಾಣೆ। ಪನ್ನಗರಕ್ಷಕನೇ ಬಾರೋ, ಇರಲು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆ। ಸರಿಯಾರೊ ಈರೇಳು ಜಗದೊಳು ಹಯವದನ.
ನಿನ್ನ ಭಕುತರೆಂಬುವರು।
ನಿನ್ನ ಭಕುತರೆಂಬುವರು। ಭಂಗಪಡುತಲಿರಬೇಕು । ದಿಣ್ಣ ಪ್ರತಿದಿನದಲಿ । ಅನ್ನ ಉದಕಗಳಿಲ್ಲದಿರಬೇಕು । ತನ್ನವರ ಕೈಯಿಂದ ತಾ ಛೀ । ಎನ್ನಿಸಿಕೊಳಬೇಕು । ಬನ್ನಬಡಿಸುತ ರೋಗಂಗಳು । ಬೆನ್ನಟ್ಟಿರಬೇಕು । ಎನ್ನ ಈಪರಿಯ ಮಾಡಿದ್ದು । ಏನೋ ಸಿರಿಕೃಷ್ಣ.
ನಿನ್ನ ಎಂಜಲನುಂಡು
ನಿನ್ನ ಎಂಜಲನುಂಡು, ನಿನ್ನ ಬೆಳ್ಳುಡೆಯುಟ್ಟು । ಮುನ್ನ ಮಾಡಿದ ಕರ್ಮ ಬೆನ್ನು ಬಿಡದಿದ್ದರೆ । ನಿನ್ನ ಓಲೈಸಬೇಕೋ ಕೃಷ್ಣ । ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು । ನಿನ್ನ ಓಲೈಸಬೇಕೋ ಕೃಷ್ಣ । ದಿನಕರನುದಿಸಿ ಕತ್ತಲೆ ಪೋಗದಿದ್ದರೆ । ಹಗಲೇನೋ, ಇರುಳೇನೋ ಕುರುಡಗೆ, ಸಿರಿ ಕೃಷ್ಣ.
ನಿನ್ನ ಜನರ ಸಂಗ ಕೊಡು
ನಿನ್ನ ಜನರ ಸಂಗ ಕೊಡು, ಎನ್ನ ಅಂತರಂಗ । ಘನ್ನ ಸುಗುಣಾಂತರಂಗ, ಮಂಗಳಾಂಗ । ಅನ್ನ್ಯಪೇಕ್ಷೆಯೊಲ್ಲೆ, ಅಂದಿನ ಭವಾನಿ ಬಲ್ಲೆ । ಮನ್ನಿಸು ಮಾರಮಣ ಇಲ್ಲೇ, ಇಲ್ಲೇ । ಇನ್ನು ಈ ದೇಹದಲ್ಲೇ ಕಡೆಮಾಡು ಇಹದಲ್ಲಿ । ಮುನ್ನೆ ಪುಟ್ಟಿಬರುವ ಕರ್ಮದ ಬಲೆ । ಎನ್ನ ಮನೋರಥ ಶ್ರೀ ವಿಜಯವಿಠಲ ಹರಿ । ಧನ್ಯನ ಮಾಡುವದು ಪಥವ ತೋರಿ.
ನಿನ್ನ ದಾಸನೆಂದೆನಿಸಬೇಕಾದರೆ
ನಿನ್ನ ದಾಸನೆಂದೆನಿಸಬೇಕಾದರೆ । ಭಂಗಪಡಲುಬೇಕು ದಿನ ಪ್ರತಿದಿನದಲ್ಲಿ । ಅನ್ನವಸ್ತ್ರಕಿಲ್ಲದೆ ತಿರುಗಬೇಕು । ಬೆನ್ನುಬಿಡದೆ ರೋಗಂಗಳು ಬರಬೇಕು । ಪನ್ನಗಶಯನ ಶ್ರೀ ವಿಜಯವಿಠಲರೇಯ । ಎನ್ನನೀಪರಿಯಲ್ಲಿ ಮಾಡಿದ ಬಗೆ ಏನು?.
ನಿನ್ನ ಪಾದಾಂಬುಜವ
ನಿನ್ನ ಪಾದಾಂಬುಜವ ನೋಡಿದ ಮನುಜಗೆ । ಘನ್ನ ಪಾಪಗಳುಂಟೆ? ಘನ್ನವರ್ಣ । ನಿನ್ನಪೋಲುವ ದೈವ ಆವಾವ ಕ್ಷೇತ್ರದಲ್ಲಿ । ಬಣ್ಣಿಸಿನೋಡಿದರೂ ಕಾಣೆನಯ್ಯಾ । ಕಣ್ಣಿಲಿ ನೋಡಿದರು, ಕರಣದಲಿ ಕೇಳಿದರು । ಬಿನ್ನಹಮಾಡಿ ತುತಿಸಿದಕಾಲಕ್ಕೂ । ಎನ್ನ ಮೊದಲುಮಾಡಿ ಪರಮೇಷ್ಟಿತನಕ । ಸಂಪನ್ನಜ್ಞಾನದಲಿ ಗುಣಿಸಿದರು । ಪನ್ನಗಶಾಯಿ ಸಿರಿವಿಜಯವಿಠಲರೇಯ । ನಿನ್ನ ಮಹಿಮೆಗೆ ನಮೋ ನಮೋ ಏನೆಂಬೆನೋ.
ನಿನ್ನ ಮನದೊಳಗೆ
ನಿನ್ನ ಮನದೊಳಗೆ, ಉಳಿಸುವೆನೆಂಬುವದು । ಘನ್ನವಾಗಿರಲಿಕ್ಕೆ ಎನ್ನೊಳಗೆ । ಇನಿತು ಪ್ರೇರಿಸಿ ನೀನೇ ನುಡಿಸಿದ್ದು । ಘನ್ನವಲ್ಲವೆ, ಇದಕೆ ಸಂಶಯವಿಲ್ಲ । ಇನ್ನು ಯೋಚಿಸಲ್ಯಾಕೆ? ಭಕ್ತಪಾಲಕ ಬಿರಿದು । ಅನಂತಕಾಲಕ್ಕೂ ನಿನ್ನದಯ್ಯಾ । ಉನ್ನತಮಹಿಮಶಿರಿವಿಜಯವಿಠಲರೇಯ । ಎನ್ನ ಮಾನಾಪಮಾನ ಮತ್ತಾರದಲ್ಲ.
ನಿನ್ನ ನಾಮದ ಸುರತರುವಿನ
ನಿನ್ನ ನಾಮದ ಸುರತರುವಿನ ನೆರಗಳಲ್ಲಿ । ಇನ್ನು ಇರುತಿಹನೆಂದು ಮಹದಾಶೆ । ನಿನ್ನ ಪಾದಾಂಬುಜವ ಸ್ಮರಿಸುವ ಸುಖಕಿಂತ । ಚುನ್ನ ವಿಷಯಂಗಳ ಭೋಗ ಲೇಸೆ । ಮುನ್ನೊಬ್ಬ ನರಗೆ ಭಾವನ್ನಗಳೆರಡು । ಮನ್ನಿಸಿ ಮೋದಗಳನೀವುತಿರಲು । ತನ್ನಿಚ್ಛೆಯಿಂದ ಕಂಟಕತರುವಿನ ಇಂಬಯಸಿ । ಖಿನ್ನಾಗಿಹತೆರನೋ ಎನ್ನಾಶೆಯು । ಕನ್ನೆ ನೃಪರನ್ನೆ ಗಜವನ್ನೆ ಕಾಯ್ದ ದೇವ । ಸನ್ನದ್ಧನಹುದೊ ಭಕ್ತರ ಪಾಲಿಸೆ । ಉನ್ನತೋನ್ನತ ಮಹಿಮ ವೇಣುಗೋಪಾಲ ವಿಟ್ಠಲ । ನಿನ್ನನೇ ನಂಬೆ ನರನೆನ್ನಲಾರೆನೊ ಅವನ.
ನಿತ್ಯಾನಿತ್ಯ ಪೂರಿತವಾದ
ನಿತ್ಯಾನಿತ್ಯ ಪೂರಿತವಾದ ಜಗತ್ತು । ಸತ್ಯವೆಂಬುವ ಜ್ಞಾನ ಅಗತ್ಯ ತಿಳಿದಿರಬೇಕು ಗುರುಮುಖದಿಂದಲಿ । ಸತ್ವ ಮೊದಲಾದ ತ್ರಿಗುಣಜ ಕರ್ಮಗಳೆಲ್ಲ । ನಿತ್ಯ ಅರ್ಪಿಸಬೇಕು