ಸುಳಾದಿ (ಸ)
||ಆದಿತಾಳ||
ಸಿದ್ಧಿವಿನಾಯಕ ವಿದ್ಯಪ್ರದಾಯಕ | ಸದ್ಯೋಜಾತನ ಮುದ್ದು ಮೋಹದಸುತ |
ಬದ್ಧವಿಷಯದಿಹ ಬುದ್ಧಿಮನಗಳನು | ತಿದ್ದಿಜ್ಞಾನ ಭಕುತಿಗಳಿತ್ತು ಹರಿಪದ |
ಪದ್ಮಯುಗದಿ ಸದಾ ಮಗ್ನವಾಗಿರಿಸಯ್ಯ | ಬದ್ಧಾಂಜಲಿಯಾಗಿ ಪ್ರಾರ್ಥಿಪೆ
ಗಗನೇಶಾ | ಮಧ್ವಾಂತರ್ಗತ ಹರಿ ಗುಣಗಾಯನ | ಪದ್ಯ ಸುಳಾದಿಗಳಿಂದ ಮಾಡಿ
ಪಾಡುತ | ಮಧ್ವಪನೊಲಿಸಿದ ದಧಿಶಿಲೆ ನಿಲಯನೆ | ಮಧ್ವಪತಿ ಅಭಿನವ ಪ್ರಾಣೇಶ
ವಿಠಲನ ಪದ ಪದ್ಮಗಳಲ್ಲಿ ದೃಢ ಭಕ್ತಿ ನೀಡು ||
||ಧೃವತಾಳ||
ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ | ಸಿರಿದೇವಿ ಉಳಿದನ್ಯ ನಾರಿ
ಶಿರೋಮಣಿ | ಸರಸಿಜ ಸಂಭವ ಬ್ರಹ್ಮದೇವನ ರಾಣಿ | ಸ್ಮರಿಪ ಸದ್ಭಕ್ತರ ಸುರಧೇನು
ಚಿಂತಾಮಣಿ | ಶರಣರ ಈಪ್ಸಿತ ಸಲಿಸುವ ಕಲ್ಯಾಣಿ | ಪರಮ ಸುಂದರ ಶ್ರೇಣಿ
ಶುಕವಾಣಿ ಫಣಿವೇಣಿ | ತಿರೋಹಿತವಾಗದ ವಿಮಲ ಸುಜ್ಞಾನಿ | ಪರಗತಿ ಸಾಧಕ
ಸದ್ ವಿದ್ಯಾದಾಯಿನಿ | ಸರ್ವ ವೇದಾಭಿಮಾನಿ ವೀಣಾಪಾಣಿ | ಸಿರಿಯರಸಭಿನವ
ಪ್ರಾಣೇಶ ವಿಠಲನ | ಸ್ಮರಿಪ ಸನ್ಮತಿ ನೀಡು ಸಿರಿ ಶಾರದಾಂಬಾ ||
||ಮಟ್ಟತಾಳ||
ಸಕಲ ದೇವರೋಳು ರುಗ್ಮಿಣಿ ಅರಸನ್ನ | ಸುಖ ಸಮುದಾಯಕ ಅಕಟ ನಾನೆಂಬೆ |
ಸಕಲ ಭೂಷಣ ಸುರನಿಕರ ಸಂದಣಿಯಲ್ಲಿ | ಮುಕುತಾ ಮುಕುತರ ಸೇವಕರ
ಕರದಿಂದ | ಅಕಳಂಕನಾಗಿ ಸಕಲ ಸೇವೆಯಗೊಂಬ | ಮಕ್ಕಳ ಮಾಣಿಕ ರಂಗ
ವಿಜಯ ವಿಠಲನ್ನ | ಭಕುತರೊಳಗ್ರಣಿ ಯುಕುತಿಲಿ ಪೇಳಿದನು ||
||ತ್ರಿವಿಡಿತಾಳ||
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾ ಕಾಳಿ ಉನ್ನತ ಬಾಹು ಕರಾಳವದನೆ
ಚಂದಿರಮುಖೆ | ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ ಸ್ಥಿತಿಯೆ ನಿದ್ರಾ
ಭದ್ರೆ ಭಕ್ತ ವತ್ಸಲೆ ಭವ್ಯೇ | ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿಗಮನೆ ಅ | ದ್ಭುತ ಪ್ರಬಲೆ
ಪ್ರವಾಸೆ ದುರ್ಗಾರಣ್ಯವಾಸೆ ಕ್ಷಿತಿಭಾರ ಹರಣೆ ಕ್ಷೀರಾಬ್ಧಿತನಯೆ ಸ | ದ್ಗತಿ ಪ್ರದಾತೆ
ಮಾಯಾ ಶ್ರೀಯೆ ಇಂದಿರೆ ರಮೆ | ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ |
ಪ್ರತಿಕೂಲಭೇದೆ ಪೂರ್ಣಬೋಧೆ ರೌದ್ರೆ | ಅತಿಶಯ ರಕ್ತ ಜಿಹ್ವಾಲೋಲೆ
ಮಾಣಿಕ್ಯಮಾಲೆ | ಜಿತ ಕಾಮೆ ಜನನ ಮರಣ ರಹಿತೆ ಖ್ಯಾತೆ | ಘೃತ ಪಾತ್ರ
ಪರಮಾನ್ನ ತಾಂಬೂಲ ಹಸ್ತೆ ಸು | ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ ಶತಪತ್ರ
ನಯನೆ ನಿರುತ ಕನ್ಯೇ ಉದಯಾರ್ಕ | ಶತಕೋಟಿ ಸನ್ನಿಭೆ ಹರಿಯಾಂಕ ಸಂಸ್ಥೆ |
ಶ್ರುತಿ ತತಿನುತೆ ಶುಕ್ಲ ಶೋಣಿತ ರಹಿತೆ ಅ | ಪ್ರತಿ ಹತೆ ಸರ್ವದಾ ಸಂಚಾರಿಣಿ
ಚತುರೆ | ಚತುರ ಕಪರ್ದಿಯೆ ಅಂಭ್ರಣಿ ಹ್ರೀ | ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರ
ಶೋಭನ ಮೂರ್ತೇ | ಪತಿತ ಪಾವನೆ ಧನ್ಯೆ (ರನ್ನೆ) ಸರ್ವೌಷಧಿಯಲಿದ್ದು ಹತ
ಮಾಡು ಕಾಡುವ ರೋಗಂಗಳಿಂದ | ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತ್ತು |
ಸತತ ಕಾಯಲಿ ಬೇಕು ದುರ್ಗೇ ದುರ್ಗೇ | ಚ್ಯುತದೂರ ವಿಜಯ ವಿಠಲರೇಯನ
ಪ್ರೀಯೆ | ಕೃತಾಂಜಲಿಯಿಂದಲಿ ತಲೆ ಬಾಗಿ ನಮಿಸುವೆ ||
||ಮಟ್ಟತಾಳ||
ಸರಸಿಜ ಭವ ಬೊಮ್ಮ ಕಶ್ಯಪರಾನ್ವಯದ | ಸಿರಿ ಪತಿ ಅಯ್ಯರ ಸದ್ವಂಶಜರಾದ |
ತಿರುಕಾರ್ಯರ ಪೌತ್ರ ಯೋಗೀಂದ್ರರ ಪುತ್ರ ಧರೆಯೊಳುದಿಸಿ ಬೆಳೆದ | ಪೆರೆಶುಕ್ಲನ
ತೆರದಿ | ಹಿರಿಯರ ಮುಖದಿಂದ ಬ್ರಹ್ಮ ಕರ್ಮಗಳನು | ಅರಿತಾಚರಿಸುತ್ತ
ಕರ್ಮಠನೆನಿಸಿದನು | ಹಿರಿಯರ ಶಿಕ್ಷಣದಿ ಹರಿದಾಸ ರಹಸ್ಯ | ಹರಿಮತ ದರ್ಶನದ
ಪರಿಚಯವನು ಪಡೆದ ಹರಿಗುರುಗಳ ಸೇವೆ ಹರುಷದಿಗೈಯುತ್ತ | ಸಿರಿವರ
ಅಭಿನವಪ್ರಾಣೇಶವಿಠಲನ | ಕರುಣದಿಂದಿರುತಿರ್ದ ಸಿರಿ ವೆಂಕಟೇಶಾರ್ಯ ||
||ತ್ರಿವಿಡಿತಾಳ||
ಸುಳಾದಿಗಳು ಅರವತ್ತು ನಾಲ್ಕು ಸಾವಿರ | ಬಲುವೃತ್ತ ನಾಮ ಮೂವತ್ತಾರು
ಸಾವಿರ | ಸಲೆ ಶೇತ ದ್ವೀಪಾನಂತಾಸನ ವೈಕುಂಠ | ನಳಿನಜ ನಗರ ಕೈಲಾಸ ದಿ |
ಕ್ಪಾಲರ ನಿಲವರ ಪೇಳುವನು ಅರವತ್ತು ಸಾವಿರ ಒಲಿದು ಕೇಳಿ ದಶಕಲ್ಯಾಣ
ದಶಚರಿತೆ ತಿಳಿವದು ನಲವತ್ತು ಸಾವಿರ ನಿಜವೆಂದು ಇಳಿಯ ವಲ್ಲಭರಂಗ ವಿಜಯ
ವಿಠ್ಠಲನ್ನ | ಕಲ ಕಾಲ ಮನದೊಳು ನಿಲಸಿ ಕೊಂಡಾಡುತ್ತ ||
||ಮಟ್ಟತಾಳ||
ಸಾನುರಾಗದಿ ಎನ್ನ ಸಾಮಿಪ್ಯವ ನೈದಿ | ಪಾಣಿದ್ವಯದಲಿ ವೇಣಿ ಸ್ಪರಿಶ ಮಾಡಿ |
ಏನು ಬೇಡುವೆ ಬೇಡು ನೀಡುವೆನೆಂತೆಂದು | ವಾಣಿ ಇಂದಲಿ ನುಡಿದು
ಅನುಗ್ರಹಿಸಿದ ದಕ್ಕೆ | ಮಾನುಷಾನ್ನ ಜನಿತ ಅಜ್ಞಾನದಿಂದ | ಜ್ಞಾನನಿಧಿಯೆ ನಿನ್ನ
ಪದದ್ವಂದ್ವಕೆ ನಮಿಸಿ | ಮಾನಸಿನಾಪೇಕ್ಷೆ | ವಿವರಿಸಿ ಬಿನ್ನೈಸಿ | ಪೂರ್ಣ ಮಾಡು
ಎಂದು ವರಗಳ ಬೇಡದಲೆ ನಿನ್ನ ಪದದ್ವಂದ್ವಕೆ ನಮಿಸಿ | ಹೀನ ಮನೋಭಾವ
ಮಾಡಿದೆ ಹೇ ಜನನಿ | ಧೇನುವಿಗೆ ವತ್ಸ ಮಾಡಿದ ಅಪಚಾರ | ತಾನೆಣಿಸಿ ಅದರ
ಸಾಕದೆ ಬಿಡುವುದೆ | ಮಾನನಿಧಿಯೆ ಎನ್ನ ಅನುಚಿತವೆಣಿಸದಲೆ | ಏನು ಬೇಡಿದ
ವರವ ನೀಡುವೆನೆಂತೆಂದ | ವಾಣಿ ಸತ್ಯ ಮಾಡು ಅವ್ಯವಧಾನದಲಿ | ಜ್ಞಾನ ಪೂರ್ಣ
ಗುರು ವಿಜಯ ವಿಠ್ಠಲರೇಯನ | ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ ||
||ರಾಗ ಭೈರವಿ-ಧೃವತಾಳ ||
ಸುಂದರಮಯವಾದ ದ್ವಂದ್ವ ಚರಣವನ್ನು | ಇಂದು ಕಂಡೆನು ಬಂದು | ಅಂದು
ಕಾಳಿಂದಿಯ ಧುಮುಕಿ ನಾ | ಗೇಂದ್ರನ ಫಣೆಯಲ್ಲಿ ಕುಣಿಕುಣಿದಾಡಲು |
ದುಂದುಭಿ ರಭಸಾ ಮೊರೆಯ ಗಗನ | ದಿಂದಲೆ ಪೂಮಳೆ ಬಿಡದೆ ಸುರಿಯೆ |
ವೃಂದಾರಕವೃಂದ ಚಂದಾಗಿ ಸರಸಿಜ | ನಂದನ ಸಹಿತ ವಂದನೆ ಗೈವುತಿರೆ |
ನಂದನಂದನ ಗೋಪಿಯ ಕಂದ | ಅಂದಂದಾಡಿದ ಗೋವಿಂದ ವಿಜಯವಿಠಲಾ |
ನಿಂದು ನಲುವಿಂದಾ ಮೆರೆವನು ಇಲ್ಲಿ | ಇಂದಿರೆಯರಸನ ನಂದ ಮೂರುತಿಯಾ ||