ಸುಳಾದಿ (ಭ)
||ಆದಿತಾಳ||
ಭಾಸುರ ಚರಿತಳೆ ಭೂಸುರ ವಿನುತಳೆ | ಸಾಸಿರ ನಾಮನ ತೋಷದಿ ಭಜಿಪಳೆ |
ವಾಸವಾದಿ ದಿವಿಜೇಶ ಗಣಾರ್ಚಿತೆ | ದಾಶರಥಿ ಹರಿ ವಾಸುದೇವ ಪದ |
ಸಾಸಿರ ಪತ್ರದಿ ದೃಢ ಭಕುತಿಯ ಕೊಡು | ಮೇಷಾಭಿನವ ಪ್ರಾಣೇಶ ವಿಠಲನ |
ದಾಸ್ಯತನವನಿತ್ತು ಪೋಷಿಸುವದೆಮ್ಮಾ ||
||ತ್ರಿವಿಡಿತಾಳ||
ಭೂತದೊಳು ಮಹಾಪಾತಕಿ ನಾನಯ್ಯ | ಘಾತಕನು ಇತ್ತ ಮಾತು ತಪ್ಪುವನಯ್ಯ |
ಆತುಮ ಭವ ಶಿವರಾತಿಯೆ ಶರದಿಂದ | ನೀತಿ ತೊರೆದು ವಂಶಖ್ಯಾತಿ ಮರೆದು |
ಸೀತಾಂಶು ಮುಖಿಯರ ಪ್ರೀತಿ ಚಿಂತನೆಯಲ್ಲಿ | ಬಾತುಕೋಳಿಯ ತೆರ ತಿರುಗಿದೆನು
ದೇವ | ಮಾತು ಮಾತಿಗೆ ಎನ್ನ ಪೊಗಳಿಕೆ ಪೇಳುತ | ಖ್ಯಾತಿ ಕಾಮುಕನಾಗಿ ಕಾರ್ಯ
ಮಾಡುವೆನಯ್ಯಾ | ಈ ತೆರವಾಗಿದೆ ಎನ್ನಯ ಸ್ಥಿತಿಗತಿ | ಭೀತನಾಗಿರುವೆನು
ಕರುಣಿಸಯ್ಯ | ಸೀತಾಧವಭಿನವ ಪ್ರಾಣೇಶ ವಿಠಲನ | ದೂತಾಗ್ರಣಿ ಎನ್ನ ಮಾತು
ಲಾಲಿಸು ಜೀಯಾ ||
||ಅಟ್ಟತಾಳ||
ಭರಿತ ಕ್ರೋಧದಿಂದ ಪರವಶನಾಗುತ | ಥರ ಥರ ನಡುಗುತ ಜರಿವೆನು
ಸುಜನರ | ಪರಮ ವೈಷ್ಣವರ ಧರಣಿ ದೇವತೆಗಳ | ಹರಿದಾಸರ ನಿಂದ್ಯ
ನಿರುತದಿಗೈಯುತ | ಖರನಂತೆ ಭುವಿಯೊಳು ಚರಿಸುತಿರುವೆನಯ್ಯ |
ಉರುತರವಾದಂಥ ದುರಿತರಾಶಿಯು ಬಾಯ್ | ತೆರೆದು ಬರುತಲಿದೆ
ಉರಿಯ ನಾಲಿಗೆ ಚಾಚಿ | ಬರುತಲಿದೆ ನೋಡು ಕರಿಮೋರೆ ಕೆಂಜೆಡೆ |
ಧರಿಸಿ ಬರುತಲಿದೆ ಭರದಿಂದ ಬರುತಿದೆ | ಪರಿಹಾರೋಪಾಯವನ್ನರಿಯದೆ
ಬಳಲುವೆ | ವರಲುವೆ ಹಾಯೆಂದು ಚೀರುವೆ ಭೋರೆಂದು | ಪೊರೆವರನ್ಯರ
ಕಾಣೆ ಕರಗಳ ಜೋಡಿಸಿ | ಶರಣು ಬಂದಿರುವೆನು ಗುರುರಾಜ ರಕ್ಷಿಸು |
ಶರಣನ ಪಿಡಿಕೈಯ | ವರದೇಂದ್ರ ಗುರುರಾಯ | ಮುರಗೇಡಿಯಭಿನವ
ಪ್ರಾಣೇಶವಿಠಲನ | ಚರಣವಾರಿಜ ಭೃಂಗನತದಯಾಪಾಂಗ ||
||ತ್ರಿವಿಡಿತಾಳ||
ಭರತ ಖಂಡವ ಚರಿಸಿ ದುರ್ವಾದಿಗಳ ಜಯಿಸಿ | ಮರುತ ಮತಾಂಬುಧಿ ವಿಸ್ತರಿಸಿ |
ಪರಿಮಳ ತಂತ್ರದೀಪಿಕೆ ಯಾದಿಗಳ ರಚಿಸಿ | ಹರಿಮತ ದರ್ಶನ ತಿರುಳ ತಿಳಿಸಿ |
ನಿರುತದಿ ಪ್ರವಚನ ಪಾಠಗಳನು ಪೇಳಿ | ಧರಿಸುರರಿಗೆ ಧರ್ಮ ಮರ್ಮವರುಹಿ |
ಪರಿಸರ ಶ್ರೀ ಮಧ್ವಮುನಿ ಮತ ಸಿಂಧುವ | ಧರೆಯೊಳು ಮೆರೆಸಿದ ಗುರುರಾಜನೆ |
ತುರುಕ ಭೂಪತಿಯಿಂದ ವರಹಜ ತೀರದ | ವರಕ್ಷೇತ್ರ ಮಂಚಾಲಿ ಗ್ರಾಮ ಪಡೆದು
ಶಿರಿ ರಘುಪತಿ ಚರಣಾರ್ಚನೆ ಗೈಯುತ | ಹರುಷದಿ ನೆಲೆಸಿದಿ | ಸುಕ್ಷೇತ್ರದಿ
ಶಿರಿವರ ಅಭಿನವ ಪ್ರಾಣೇಶವಿಠಲನ ಚರಣ ವಾರಿಜ ಭೃಂಗ ಶರಣಾಂತರಂಗ |
||ಜತೆ||
ಭಾಗ್ಯನಗರದಿಂದ ಸಗ್ಗವ ಸೇರಿದ |
ಭಾರ್ಗವಾಭಿನವ ಪ್ರಾಣೇಶವಿಠಲನ ಪಾದ ||
||ಅಟ್ಟತಾಳ||
ಭರತ ಖಂಡದಿ ಸರ್ವ ತೀರ್ಥಯಾತ್ರೆಗಳ | ನಾರಾಯಣ ಬದರಿಯ ಶ್ರೀಕೃಷ್ಣ
ಉಡುಪಿಯ | ತಿರುಪತಿದೇವನ ದರುಶನಪಡೆಯುತ | ಮರಳಿಬಂದು
ಸ್ವಗ್ರಾಮದಿನೆಲೆಸಿದ | ಗುರುವರದೇಂದ್ರರ ಸೇವೆಗೈಯುತ | ಸಿರಿಪ್ರಾಣೇಶವಿಠಲ
ವಿರಚಿತ ಶ್ರೀಕೃಷ್ಣ ಲೀಲಾಮೃತ | ಸರ್ವದಪಾಡುತ ಗೃಹಕೃತ್ಯ ಮಾಡುತ್ತ |
ವರುಷಕಾಲ ಪರಿಯಂತ ಪಡೆದನು | ವರರಥವೇರಿದ ಗುರುಗಳ ದರ್ಶನ |
ಶರಧರ ಅಭಿನವ ಪ್ರಾಣೇಶವಿಠಲನ ಚರಣವಾರಿಜ ಭೃಂಗ ದೀನದಯಾಪಾಂಗ ||
||ಆದಿತಾಳ||
ಭಕ್ತಿಗೆಲ್ಲಿ ಸರಿಗಾಣೆ | ಮುಕ್ತಿಗೆಲ್ಲಿ ಸರಿಗಾಣೆ | ಮುಕ್ತಾರ್ಥ ಹರಿ ಪಾದಾಸಕ್ತರಾಗಿ
ಧೇನಿಸುತ್ತ ರಕ್ತಾಕ್ಷಿ ವತ್ಸರದ ಅರ್ಕವಾರಯಿಂದು ಕ್ಷಯ | ಶುಕ್ಲ ಪುಷ್ಯಮಾಸದಿ
ಉದ್ಯುಕ್ತರಾಗಿ ಪುಷ್ಪಕದಿ ವ್ಯಕ್ತವಾಗಿ ಪೊಳೆದು ಮಧುರೋಕ್ತಿಯಲ್ಲಿ ತರಣಿಯಂತೆ |
ಮುಕ್ತಿಗೆ ಸಾಗಿದರು ವಿರಕ್ತಿ ಮಾರ್ಗವನ್ನು ಪಿಡಿದು | ಮುಕ್ತ ಮುಕ್ತಾಶ್ರಯ ನಮ್ಮ
ವಿಜಯ ವಿಠ್ಠಲರೇಯನ | ಶಕ್ತನೆಂದು ಪೊಗಳಿ ಬಲುರಿಕ್ತರಿಗಾಧಾರವಿತ್ತು ||