ದಾಸರಪದ (ಭ)
ಭಕ್ತಿ ಬೇಕು ವಿರಕ್ತಿ ಬೇಕು
ಭಕ್ತಿ ಬೇಕು ವಿರಕ್ತಿ ಬೇಕು
ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ಪ
ಸತಿ ಅನುಕೂಲ ಬೇಕು ಸುತನಲ್ಲಿ ಗುಣ ಬೇಕು
ಮತಿವಂತನಾಗಬೇಕು ಮತ ಒಂದಾಗಿರಬೇಕು ೧
ಜಪದಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸ ವ್ರತಬೇಕು ಉಪಶಾಂತವಿರಬೇಕು ೨
ಸುಸಂಗ ಹಿಡಿಯಲಿ ಬೇಕು ದುಸ್ಸಂಗ ಬಿಡಲಿಬೇಕು
ರಂಗವಿಠಲನ ಬಿಡದೆ ನೆರೆನಂಬಿರಬೇಕು ೩
ಭಕುತಜನ ಮುಂದೆ
ಭಕುತಜನ ಮುಂದೆ ನೀನವರ ಹಿಂದೆ ಪ
ಯುಕುತಿ ಕೈಗೊಳ್ಳದೋ ಗಯಾ ಗದಾಧರನೆ ಅ.ಪ
ಕಟ್ಟೆರಡು ಬಿಗಿದು ನದಿಸೂಸಿ ಹರಿಯುತಲಿರಲು
ಕಟ್ಟಲೆಯಲಿ ಹರಿಗೋಲ ಹಾಕಿ
ನೆಟ್ಟನೆ ಆಚೆಗೀಚೆಗೆ ಪೋಗಿಬರುವಾಗ
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೇನು ೧
ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮಟೆ ನಿ
ಸ್ಸಾಳೆ ನಾನಾವಾದ್ಯಘೋಷಂಗಳು
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ
ಆಳು ಮುಂದಲ್ಲದೆ ಅರಸು ತಾ ಮುಂದೇನು ೨
ಉತ್ಸಾಹವಾಹನದಿ ಬೀದಿ ಮೆರೆಯುತಲಿರಲು
ಸತ್ಸಂಗತಿಗೆ ಹರಿದಾಸರಲ್ಲದೆ ಭಕ್ತ
ವತ್ಸಲ ಸಿರಿ ವಿಜಯವಿಠಲ ವೆಂಕಟಾಚಲ
ವತ್ಸ ಮುಂದಲ್ಲದೆ ಧೇನು ತಾ ಮುಂದೇನು ೩
ಭಾಗ್ಯದ ಲಕ್ಷ್ಮಿ ಬಾರಮ್ಮ
ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ ಪ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆಯ ಕಾಲಿನ ನಾದವ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂದದಿ ೧
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಪೊಳೆಯುವ
ಜನಕರಾಯನ ಕುಮಾರಿ ಬೇಗ ೨
ಶಂಕೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣಕೈಯ ತಿರುಹುತ ಬಾರೆ
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ ೩
ಅತ್ತಿತ್ತಗಲದೆ ಭಕ್ತರ ಮನೆಯೊಳು
ನಿತ್ಯಮಹೋತ್ಸವ ನಿತ್ಯಸುಮಂಗಳ
ಸತ್ಯವ ತೋರುತ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ೪
ಸಕ್ಕರೆ ತುಪ್ಪ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿರಂಗನ
ಚೊಕ್ಕಪುರಂದರ ವಿಠಲನರಾಣಿ ೫
ಭ್ರಾಂತಿ ಬಿಡದೊ
ಭ್ರಾಂತಿ ಬಿಡದೊ ಭಾಗ್ಯಪುರುಷನೆ ಪ
ವಿಷಯಂಗಳ ಜರಿದು ಶಾಂತಚಿತ್ತನಾಗೋ ತನಕ
ಹೇ ಪ್ರಾಣಿ ನಿನ್ನ ಅ.ಪ
ಕಾಲಕಾಲಕೆ ಹರಿಕಥಾಶ್ರವಣ ಗುರುಗ ಮುಖದಿಂದ
ಕೇಳಿದ್ದೆ ಕೇಳುತ ಪೇಳುತ ಮನಮಾಡುತ್ತ
ಕೇಳಿದಂತೆ ಧ್ಯಾನವ ಮಾಡುತ್ತ ಮಾಡಿದ್ದನುಭವಕೆ
ಮೇಲಾಗಿ ಬಂದೊದಗೋತನಕ ೧
ಪಾಂಚಜನ್ಯ ಅರಿಪಾಣಿ ಸರ್ವೇಶ ತದ್ರಾಣಿ ಲಕುಮಿ ವಿ
ರಿಂಚಿ ವಾಯುಸಮ ವಾಣಿ ಭಾರತಿ ಭುಜಂಗಪತಿಯು
ಪಂಚಾನನ ಖಗ ಸುತ್ರಾಮ ಕಾಮ ಈ ಬಗೆ ತಾರತಮ್ಮ
ಪಂಚಭೇದವ ತಿಳಿಯೋತನಕ ೨
ಪೂರಕ ಕುಂಭಕ ರೇಚಕದಿಂದಲಿ ಹೃದಯಸ್ಥ ಭೌತಿಕ
ಮಾರುತನ ಜಯಿಸಿ ಅಣಿಮಾದಿಸಿದ್ಧಿ ಅಷ್ಟಾಂಗಯೋಗ
ಧಾರಣನಾಗಿ ನಿಸ್ಸಂಗದಿ ಚರಿಸಿ ಭಾರತಿಪತಿಯಾದ ಸ
ಮೀರನ ಒಲುಮೆ ಪಡೆಯೋತನಕ ೩
ಅಂಶಿ ಅಂಶ ವೇಷಾಧಿಷ್ಠಾನ ಅಂತರ್ಯಾಮಿಗಳ
ಸಂಶಯರಹಿತತ್ಯಂತ ಭೇದವು ರೂಪಗಳ ತಿಳಿದು
ಕಂಸಾರಿಯ ಕರುಣ ಬಲಮಾಡಿ ಹಿಂಸೆಗಳೀಡ್ಯಾಡಿ
ಹಂಸೋಪಾಸಿ (ಯಾ)ಗೋ ತನಕ ೪
ಹಂಚುಹಾಟಿಕ ಸಮದರ್ಶಿ ಎನಿಸಿ ಶೀತೋಷ್ಣವ ಸಹಿಸಿ
ಸಂಚಿತಾಗಮಗಳನೆ ದಹಿಸಿ ಇಂದ್ರಿಯಗಳ ಜಯಿಸಿ
ಪಂಚವೃತ್ಯಾತ್ಮ ಕಮನ ವಶೀಕರಿಸಿ ಧ್ಯಾನದೊಳು ಶ್ರೀಹರಿ
ಮಿಂಚಿನಂದದಿ ಪೊಳೆಯೋತನಕ ೫
ವಿಷಯ ವಿಷಯಂಗಳ ರೂಪವ ತಿಳಿದು ವಶವಾಗದನ್ಯ
ವಿಷಯವೆಂಬೋದನ್ನು ತಾನರಿದು ದುರಾಶೆಯ ತೊರೆದು
ಹಸಿ ತೃಷೆ ಹಗಲಿರುಳು ಮಾಡದಲೆ ಹರಿದಾಸರ ಬೆರೆದು
ಕುಶಲವಾರ್ತೆಗಳಾಡೋತನಕ ೬
ಸ್ವತಂತ್ರ ಅಸ್ವತಂತ್ರ ವಸ್ತುವಿವೇಕವ ತಿಳಿದು
ಸ್ವತಂತ್ರನೆ ಮುಖ್ಯ ಶ್ರೀಹರಿಯೆಂದು ಧ್ಯಾನಕೆ ತಂದು
ಸ್ವತಂತ್ರನಲ್ಲವೋ ನೀ ಬಂದು ಆಪ್ತ ನೀನೆಂದು
ವ್ಯಾಪ್ತದರ್ಶಿ ಆಗೋತನಕ ೭
ಸಕಲೇಂದ್ರಿಯಗಳಿಂದ ಶ್ರೀಹರಿಯ ವ್ಯಕತತಿಗೆ ತಂದು
ಕಕುಲಾತಿ ಹಗಲಿರುಳು ಬಿಡುತಲಿ ಮುಕುತರಟ್ಟಿದಲ್ಲಿ
ಲಕುಮೀಶ ಗೋವಿಂದನ ಮೂರ್ತಿಯ ಭಕುತಿಲಿ ತನ್ನ
ಸುಖವಿಷಯನೆಂದರಿಯೋತನಕ ೮
ಬಿಂಬ ಭಾವ ಕ್ರಿಯ ದ್ರವ್ಯಾದ್ವೈತವ ತಿಳಿದು ಸರ್ವಗತ
ಬಿಂಬ ಮಮಸ್ವಾಮಿ ಗೋಪಾಲವಿಠಲನಲ್ಲದಿನ್ನಿಲ್ಲ
ಎಂಬುದನರಿತು ಅನ್ಯ ಸ್ವತಂತ್ರವ ಜರಿದು ಸರ್ವವ್ಯಾಪಾರದಿ
ಬಿಂಬಕ್ರಿಯವ ಕಾಣೋತನಕ ೯
ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ
ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಪ
ಲಕುಮಿಪತಿಯೆಂಬ ಸಖನಿದ್ದ ಬಳಿಕ ಅ.ಪ
ರಜತಾದ್ರಿ ಅರಮನೆಯು ಹೇಮಕೂಟವೆ ಧನುವು
ಗಜಗಮನ ಸುರನಿಕರ ಪರಿವಾರವು
ನಿಜರಾಣಿ ಅನ್ನಪೂರ್ಣೆ ಭುಜಗಪತಿ ಭೂಷಣನು
ಗಜಮುಖನೆ ಮೊದಲಾದ ಗಂಡುಮಕ್ಕಳಿರಲು ೧
ಬೇಡುವುದು ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟು
ಮಾಡಬಾರದೆ ಮುಯ್ಯ ಆವನ ಕೋಣ,
ಜೋಡುಮಾಡಿಕೊಂಡು ಬಾತಿಮುಟ್ಟು ತ್ರಿಶೂಲ,
ಬೇಡಿದ್ದು ಆಗದೆ ಬರಿದೆ ಧಾವತಿಗೊಂಬೆ ೨
ರೊಕ್ಕ ರುಪಾಯಿಗಳು ಇಲ್ಲವೆಂಬೆಯ, ಸಾಲ
ತಕ್ಕೋಬಾರದೆ ಗೆಳೆಯ ಧನಪನಲ್ಲಿ
ಶುಕ್ರ ಒಕ್ಕಣ್ಣ ಮೋಹನವಿಠಲ ಇಕ್ಕಣ್ಣ
ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವು ಬಿಡದೆ ೩
ಭೂರಿನಿಗಮವ ಕದ್ದ
ಭೂರಿನಿಗಮವ ಕದ್ದ ಚೋರದೈತ್ಯನ ಗೆದ್ದ
ಸಾರವೇದಗಳ ವಿಧಿಗಿತ್ತ
ಸಾರವೇದಗಳ ವಿಧಿಗಿತ್ತ ಮತ್ಸ್ಯಾವ
ತಾರಗಾರತಿಯ ಬೆಳಗಿರೆ ೧
ವಾರಿಧಿ ಮಥನದಿ ನೀರೊಳು ಗಿರಿಮುಳುಗೆ
ತೋರಿ ಬೆನ್ನಾಂತ ಸುರನುತ
ತೋರಿ ಬೆನ್ನಾಂತ ಸುರನುತ ಕೂರ್ಮಾವ
ತಾರಗಾರತಿಯ ಬೆಳಗಿರೆ ೨
ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದ
ಎತ್ತಿದಾಡೆಯಲಿ ನೆಗಹಿದ
ಎತ್ತಿದಾಡೆಯಲಿ ನೆಗಹಿದ ವರಾಹ
ಮೂರ್ತಿಗಾರತಿಯ ಬೆಳಗಿರೆ ೩
ಕಡುಬಾಲನ ನುಡಿಗೆ ಒಡೆದು ಕಂಬದೊಳುದಿಸಿ
ಒಡಲ ಸೀಳಿದ ಹಿರಣ್ಯಕನ
ಒಡಲ ಸೀಳಿದ ಹಿರಣ್ಯಕನ ನರಸಿಂಹ
ಒಡೆಯಗಾರತಿಯ ಬೆಳಗಿರೆ ೪
ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ
ಈ ಮೂರುಜಗವ ಈರಡಿಯ
ಈ ಮೂರುಜಗವ ಈರಡಿಮಾಡಿ ಅಳೆದ
ವಾಮನಗಾರತಿಯ ಬೆಳಗಿರೆ ೫
ಅಂಬರಕೇಶನ್ನ ನಂಬಿದ ಕ್ಷತ್ರಿಯರ
ಸಂಭ್ರಮ ಕುಲವ ಸವರಿದ
ಸಂಭ್ರಮ ಕುಲವ ಸವರಿದ ಪರಶುರಾ
ಮೆಂಬಗಾರತಿಯ ಬೆಳಗಿರೆ ೬
ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ
ತಂದ ರಾವಣನ ತಲೆಹೊಯ್ದ
ತಂದ ರಾವಣನ ತಲೆಹೊಯ್ದ ರಘುರಾಮ
ಚಂದ್ರಗಾರತಿಯ ಬೆಳಗಿರೆ ೭
ಶಿಷ್ಟಯಮಳಾರ್ಜುನರಭೀಷ್ಟವ ಸಲಿಸಿದ
ದುಷ್ಟ ಕಂಸನ್ನ ಕೆಡಹಿದ
ದುಷ್ಟಕಂಸನ್ನ ಕೆಡಹಿದ ನಮ್ಮ ಶ್ರೀ
ಕೃಷ್ಣಗಾರತಿಯ ಬೆಳಗಿರೆ ೮
ರುದ್ರನ್ನ ತ್ರಿಪುರದೊಳಿದ್ದ ಸತಿಯರ
ಬುದ್ಧಿ ಭೇದಮಾಡಿ ಕೆಡಿಸಿದ
ಬುದ್ಧಿ ಭೇದವಮಾಡಿ ಕೆಡಿಸಿ ಬತ್ತಲೆನಿಂದ
ಬೌದ್ಧಗಾರತಿಯ ಬೆಳಗಿರೆ ೯
ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು
ತಾ ಪಿಡಿದು ಖಡ್ಗವ
ತಾ ಪಿಡಿದು ಖಡ್ಗ ತುರುಗವೇರಿದ ಕಲ್ಕಿ
ರೂಪಗಾರತಿಯ ಬೆಳಗಿರೆ ೧೦
ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ
ಹತ್ತವತಾರಿ ಹಯವದನ
ಹತ್ತವತಾರಿ ಹಯವದನ ಪಾಡುತ
ಚಿತ್ತದಾರತಿಯ ಬೆಳಗಿರೆ ೧೦
ಭೂಷಣಕೆ ಭೂಷಣ
ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀ ವರವೆಂಕಟೇಶ ಪ
ನಾಲಿಗ್ಗೆ ಭೂಷಣ ನಾರಾಯಣ ನಾಮ
ಕಾಲಿಗ್ಗೆ ಭೂಷಣ ಹರಿಯಾತ್ರೆಯು
ಆಲಯಕೆ ಭೂಷಣ ತುಲಸಿವೃಂದಾವನ ವಿ
ಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು ೧
ದಾನವೇ ಭೂಷಣ ಇರುವ ಹಸ್ತಂಗಗಳಿಗೆ
ಮಾನವೇ ಭೂಷಣ ಮಾನವರಿಗೆ
ಜ್ಞಾನವೇ ಭೂಷಣ ಮುನಿಯೋಗಿವರರಿಗೆ
ಮಾನಿನಿಗೆ ಭೂಷಣ ಪತಿಭಕ್ತಿಯು ೨
ರಂಗನನು ನೋಡುವುದೇ ಕಂಗಳಿಗೆ ಭೂಷಣ
ಮಂಗಳಾಂಗಗೆ ಮಣಿವ ಶಿರ ಭೂಷಣ
ಶೃಂಗಾರ ತುಲಸಿಮಣಿ ಕೊರಳಿಗೆ ಭೂಷಣ
ರಂಗವಿಠಲ ನಿಮ್ಮ ನಾಮ ಅತಿಭೂಷಣ ೩
ಭಂಡನಾದೆನು ನಾಮ
ಭಂಡನಾದೆನು ನಾಮ ಸಂಸಾರದಿ ಪ
ಕಂಡು ಕಾಣದ ಹಾಗೆ ಇರಬಹುದೆ ಹರಿಯೆ ಅ.ಪ
ಕಂಡ ಕಲ್ಲುಗಳಿಗೆ ಕೈ ಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತು
ಪುಂಡರೀಕಾಕ್ಷ ನೀ ಕರುಣಿಸಯ್ಯ ಬೇಗ ೧
ನಾನಾ ವ್ರತಗಳನು ಮಾಡಿ ನಾ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವಯ್ಯ
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರೂ ಕೃಪೆಯ ಮಾಡಯ್ಯ ಹರಿಯೆ ೨
ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟು ಹೋಯ್ತು
ಉದ್ಧಾರಕ ಪುರಂದರವಿಠಲನ ತತ್ವದ
ಸಿದ್ಧಿಯನು ದಯೆಗೈದು ಉದ್ಧರಿಸು ಹರಿಯೆ ೩