ರತ್ನಾಕರನ ಬಾಣವೇ.....
ಶಿವಪೂಜೆ ಶಿವನನ್ನು ತಲುಪಿ, ದೈವಸಾನಿಧ್ಯ ಬಯಸಿತ್ತು ತನುವು. ಸಾಮಗಾನ ಕೈಲಾಸಶಿಖರವನ್ನೂ, ವೈಕುಂಠವನ್ನು ತಲುಪಿ ಶಿವ ಹಾಗೂ ನಾರಾಯಣನನ್ನು ಕೂಡಿ ಬರುವಂತೆ ವಿನಂತಿಸಿಕೊಳ್ಳುತ್ತಿತ್ತು. ಮಹಾರಾಣಿಯಾದ ಕೌಸಲ್ಯ ಹಾಗೂ ರಾಣಿಯರ ಹೃದಯ ಪ್ರಾರ್ಥನೆ ನಾರಾಯಣನನ್ನು ಭುವಿಗಿಳಿದು ಬರುವಂತೆ ಮಾಡಿತ್ತು. ಕುಲಗುರು ವಸಿಷ್ಠರ ತಪಸ್ಸು ಫಲಗೊಡುವ ಸಮಯ ಬಂದೊದಗಿತ್ತು. ರಾಜಾ ದಶರಥನ ಶಾಪ ವಿಮೋಚನಾ ಸಮಯ ನಿಕಟವಾಗಿತ್ತು. ಋಷಿ ಋಷ್ಯಶೃಂಗರ ವೈದ್ಯಕೀಯ ಮೇಧಾಶಕ್ತಿ ಸಾಕಾರವಾಗುವ ಸಮಯ ಒದಗಿ ಬಂದಿತ್ತು. ಕಕುಸ್ಥ ವಂಶದ ರಾಜನಾದ ಇಕ್ಷ್ವಾಕುವಿಗೆ ಸೂರ್ಯಪದವಿ ದೊರಕುವ ಸಮಯ ಒದಗಿ ಬಂದು, ಮುಂದೆ ಸೂರ್ಯವಂಶವೆಂದು ಪ್ರಖ್ಯಾತವಾಗುವ ಕಾಲ (ಒದಗಿ ಬರುತ್ತಿತ್ತು) ಸನ್ನಿಹಿತವಾಗಿತ್ತು.
ನಾರದರು ಮಹಾಲಕ್ಷ್ಮಿಯ ಸ್ವಯಂವರದಲ್ಲಿ ಅನುಭವಿಸಿದ ಅವಮಾನದಿಂದ ನಾರಾಯಣನಾದ ಮಹಾವಿಷ್ಣುವಿಗಿತ್ತ ೬ ಶಾಪರೂಪ ವರಗಳು ಮೂರ್ತರೂಪವಾಗುವ ಸಮಯ ಒದಗಿಬಂದಿತ್ತು. ೬೪ ಕಲೆಗಳ ದಶಮಹಾವಿದ್ಯೆಯ ಶಸ್ತ್ರಾಸ್ತ್ರ ಪಾರಂಗತರಾಗಿದ್ದ ರಾಜಾ ವಿಶ್ವಾಮಿತ್ರರ ಬ್ರಹ್ಮರ್ಷಿ ಚಿಂತನೆ ಹಾಗೂ ಅವರ ಎಲ್ಲಾ ಕಲೆಗಳನ್ನು ಧಾರೆ ಎರೆದು ಕೊಡುವ ಸಮಯ ಒದಗಿ ಬಂದಿತ್ತು. ರಾಜಾ ಜನಕನ ಪೂರ್ವಜರ ಐಶ್ವರ್ಯ ಸಂಕೇತವಾದ ಧನುಸ್ಸು ಶಿವನನ್ನು ಪುನಃ ತಲುಪಲು ಅನವರತ ಮಹಾವಿಷ್ಣುವನ್ನು ಕೂಗಿ ಕರೆಯುತ್ತಿತ್ತು. ರಾಜರ್ಷಿ ಜನಕನ ಮಿಥಿಲಾ ನಗರ ದೇವತಾ ಮಹಾ ವಿಷ್ಣುವಿನ ದರ್ಶನಕ್ಕಾಗಿ ಧನುಃಧಾರಿಣಿಯಾಗಿ ಕ್ಷತ್ರಿಯ ರಾಜರನ್ನು ಆಹ್ವಾನಿಸುವ ರಾಜ್ಯಕಾರ್ಯವನ್ನು ಹೊತ್ತು ನಿರೀಕ್ಷಿಸುತ್ತಿದ್ದಂತಹ ಸಮಯವಾಗಿತ್ತು.
ರಾಜಸೀ ಹಾಗೂ ರಾಕ್ಷಸೀ ಭಾವಗಳು ಪರಾಕಾಷ್ಠತೆಯನ್ನು ತಲುಪಿ, ಋಷಿ-ಮುನಿ-ಯೋಗಿಗಳು ಸತ್ವವನ್ನು ಶರಣು ಹೋದ ಸಮಯವೇ ಅದಾಗಿತ್ತು. ರತ್ನಾಕರ ಬೇಡನು ವಾಲ್ಮೀಕಿಯಾಗುವ ಸುಸಮಯ ಕಾಲಪುರುಷನ ಆವಿರ್ಭಾವಕ್ಕೆ ನಾಂದಿಯಾಯಿತು. ಸತ್ಪುರುಷರ ಸಮಯಾಚಾರ ಪ್ರಾರ್ಥನೆ ಮೂರ್ತರೂಪವಾಗಿ “ಶ್ರೀರಾಮರೂಪವಾಗಿ” ಭೂಮಿಯನ್ನು ಸತ್ವಪ್ರಧಾನವಾದ ಧರ್ಮವನ್ನು ಸ್ಥಾಪಿಸುವ ಮೂಲ ಉದ್ದೇಶವನ್ನು ಹೊತ್ತು ಸಾಕೇತದಲ್ಲಿ ಶಿಶುವಾಗಿ ಪ್ರಕಟವಾಯಿತು.
ಧರ್ಮ ಪಂಚಾಂಗದ ಅನುಸಾರ ಹೇಳುವುದಾದರೆ , ಸೃಷ್ಠಿ ಹಾಗೂ ಪುನರುಜ್ಜೀವನ ಸಿದ್ಧಾಂತದ ಆಧಾರದ ಮೇಲೆ ನಿಂತಿರುವ ಸನಾತನ ಧರ್ಮ ಅಧರ್ಮ ತಲೆಯೆತ್ತಿ ಮೆರೆಯಲಾರಂಭಿಸಿದರೆ “ಕಾಲ ಪುರುಷ” ಮಹಾಪುರುಷ ರೂಪಧಾರಿಯಾಗಿ ಅವತರಿಸುವುದು ನಿಶ್ಚಯ. ಅಂಥಹ ಸಿದ್ಧಾಂತಕ್ಕೆ ಮೂಲ “ಸೃಷ್ಠಿ”. ೮೪ ಲಕ್ಷ ಜೀವರಾಶಿಗಳ ಉಗಮ ಮೂಲಭೂತವಾದ ೪ ವಿಧವಾದ ಸ್ವೇದಜ, ಅಂಡಜ, ಉದ್ಭಿಜ ಹಾಗೂ ಯೋನಿಜಾ ಮಾತ್ರವೇ. ಈ ಒಂದೊಂದೂ ಜೀವರಾಶಿಯೂ ಸೃಷ್ಠಿಯಾಗಲು ಪಂಚಭೂತ ಹಾಗೂ ಯಕ್ಷ, ಗಂಧರ್ವ, ನಾಗಾದಿಗಳ ಸಮ್ಮಿಶ್ರಣ ಅತ್ಯಗತ್ಯವೆಂದು ರಚಿಸಿ, ಇಂಥಹ ಪ್ರಯೋಗಗಳು ಸಂಶೋಧಿತವಾದ ನಂತರವೇ ವರ್ಗೀಕರಣ ನಿರ್ಣಯವಾದಂತೆ ತಿಳಿದು ಬರುತ್ತದೆ. ಪ್ರಾಣಿವರ್ಗ, ಖಗವರ್ಗ, ಮನುಷ್ಯ ವರ್ಗ, ಹಾಗೂ ಜಲಚರಾದಿ ವರ್ಗದಲ್ಲಿನ ಜೀವರಾಶಿಯೂ ೮೪ ಲಕ್ಷ ಜನ್ಮ ಪಡೆದ ನಂತರವೇ ಪುರುಷರೂಪವೆಂಬ ನಿಲುವು ನಮ್ಮ ಆಚಾರ್ಯರ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.
ಹೀಗೆ ಸೃಷ್ಠಿಯಲ್ಲಿನ ಅವತಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಪರಿಪೂರ್ಣ ಮಾನವರೂಪ ತ್ರೇತಾಯುಗದಲ್ಲಿ ಕಾಣಬಹುದು. ಸೂರ್ಯವಂಶದ ಮಹರ್ಷಿ ಕಶ್ಯಪರಿಂದ ಪ್ರಾರಂಭವಾದ ಈ ವಂಶದಲ್ಲಿಯೇ ಇಕ್ಷ್ವಾಕು ರಾಜರು, ಅವರಲ್ಲಿ ಪ್ರಮುಖವಾಗಿ ಜನ್ಮ ತಾಳಿದ ಪರತತ್ವ ಹಾಗೂ ಜಲತತ್ವದ ಸಮ್ಮಿಶ್ರಣವೇ “ರಾಮ” ತತ್ವ.
ಹಿಂದೂ ಮಾಸದ ಚಿತ್ರಶುದ್ಧ ನವಮೀ ದಿವಸ, ಪುನರ್ವಸು ನಕ್ಷತ್ರದಲ್ಲಿ, ಕರ್ಕಾಟಕ ಲಗ್ನದಲ್ಲಿ ಪಂಚ ಗ್ರಹಗಳು ಉತ್ತುಂಗದಲ್ಲಿ ಇರುವಂತಹ ಸಂದರ್ಭದಲ್ಲಿ ಭುವಿಯನ್ನು ಪುನರಸ್ಥಿತ್ವಗೊಳಿಸಲು ಉದಿಸಿಬಂದಿತು “ಈ ಜೀವಾತ್ಮ”. ಅಂತಹ ಶ್ರೀರಾಮಚಂದ್ರನ ಅಥವಾ ಕಾಲಪುರುಷನ ಜೀವಾತ್ಮರೂಪ ನಡೆದುಬಂದ ದಾರಿಯ ಅನುಭವವನ್ನು ಅರಿತುಕೊಳ್ಳುವುದೂ ಹಾಗೂ ಅದರಂತೆ ಮುಂದಿನ ಪೀಳಿಗೆಯು ನಡೆಯುವುದೇ “ರಾಮರಾಜಮಾರ್ಗ”.
ಬೇಡನಾದ ರತ್ನಾಕರಾದಿಯಾಗಿ, ಈ ಆದಿಕಾವ್ಯದಲ್ಲಿ ಬರುವ ಎಲ್ಲಾ ಪಾತ್ರಗಳು ನಡೆದು ತೋರಿಸಿರುವ ಮಾರ್ಗ, ಜೀವನ ಶೈಲಿಯನ್ನು ಹಾಕಿಕೊಟ್ಟ ಸೋಪಾನ ಮಾರ್ಗವೇ ಆಗಿದೆ. ಸೃಷ್ಠಿಯ ೬೪ ಅವತಾರಗಳಲ್ಲಿ ಹತ್ತು ಅವತಾರಗಳು ಪ್ರಧಾನವಾದ ಕಾರ್ಯವನ್ನು ನಿರ್ವಹಿಸುವುದ ಮೂಲಕ ಧರ್ಮಸ್ಥಾಪನೆ ಹಾಗೂ ನೀತಿಮಾರ್ಗ ರಚನೆಗೆ ಹೊಸ ಆಯಾಮವನ್ನು ತಂದುಕೊಟ್ಟಿದೆ.
“ಸಮಾಜ ಅಧರ್ಮದಲ್ಲಿ ನಡೆಯದಿರಲೆಂಬ ಮೂಲ ಉದ್ದೇಶದಿಂದಲೇ ಅವತಾರಗಳು ಉದಿಸಿಬರುವವೆಂಬ ಸಿದ್ಧಾಂತ ನಮ್ಮ ಧಾರ್ಮಿಕ ಇತಿಹಾಸ ಗ್ರಂಥಗಳಲ್ಲಿ ಕೂಲಂಕುಷವಾಗಿ ವಿಮರ್ಷಿಸಲ್ಪಟ್ಟಿದೆ. ಅಂಥಹ ಧರ್ಮಸ್ಥಾಪನೆಗೆ ತಪಸ್ಸು ಮುಖ್ಯವಾದ ಮೆಟ್ಟಿಲು. ಅಂಥಹ “ತಪಸ್ಸು ವರ್ಧಿಸಲೀ” ಎಂಬುದೇ ಶ್ರೀರಾಮ ತತ್ವವೂ ಹಾಗೂ ರತ್ನಾಕರನಾಗಿದ್ದ ವಾಲ್ಮೀಕಿಯಿಂದ ರಚಿತವಾದ “ರಾಮಾಯಣ ಸಾರ”ವೂ ಹೌದು.
ತಪಃ ಸ್ವಾಧ್ಯಾಯ ನಿರತಂ ತಪಸ್ವೀ ವಾಗ್ವಿಧಾಂ ವರಂ|
ನಾರದಂ ಪರಿಪಪ್ರಚ್ಛ ವಾಲ್ಮೀಕಿಮುನಿ ಪುಂಗವಂ" ವಾ.ರಾ.೧-೧-೧
" ಶ್ರೀ ರಸ್ತು "