ರಾಜ್ಯವಾಳಿತು ಪಾದುಕೆ
ಇಪ್ಪತ್ತನೇ ಶತಮಾನದ ಕವಿಪುಂಗವರಲ್ಲಿ ಮಾನ್ಯರಾದ ಶ್ರೀ ಶ್ರೀ ಶ್ರೀ ರಮಾನಂದೇಂದ್ರ ಸರಸ್ವತಿಯವರ ಸಾಹಿತ್ಯ ಸಂಸ್ಕೃತ ಭಾಷಾ ಪ್ರಪಂಚಕ್ಕೆ ಮತ್ತೊಮ್ಮೆ ಭಾಸಮಹಾಕವಿಯನ್ನು ಪರಿಚಯಿಸಿದಂತೆ ತೋರುತ್ತದೆ.ಉಚ್ಛಿಷ್ಠ ಗನಪತಿಯ ಆರಾಧಕರಾದ ಶ್ರೀ ಶ್ರೀಯವರು ಸಂಸ್ಕೃತ,ತಮಿಳು ಹಾಗೂ ಗ್ರಂಥಭಾಷೆಯಲ್ಲಿ ಘನಪಾಂಡಿತ್ಯವನ್ನು ಹೊಂದಿದ್ದರೆಂಬುದು ಅವರ ಕೃತಿಗಳಿಂದ ತಿಳಿದುಬರುತ್ತದೆ.ಸಂಸ್ಕೃತ ಸಾರಸ್ವತ ಭಾಷಾಲೋಕಕ್ಕೆ ಶ್ರೀಗಳ ಸೇವೆ ಅಪಾರ ಹಾಗೂ ಮಾನನೀಯ.ಸಂಸ್ಕೃತ ಭಾಷಾ ಕೃತಿಗಳಲ್ಲಿ ಒಂದಾದ"ಪಾದುಕಾ ಪ್ರಧಾನಂ" ಭಾಷಾಭಿಜ್ಞರಿಗೆ ಸಾಹಿತ್ಯ ಹಾಗೂ ಗೂಡ ವಿಷಯಗಳ ರಸದೌತಣವನ್ನು ಮಾರ್ಮಿಕವಾಗಿ ಹೇಗೆ ನಿರೂಪಿಸಿದ್ದಾರೆಂಬುದೇ ಈ ಲೇಖನದ ಮುಖ್ಯ ಉದ್ದೇಶ.
ಶೀರ್ಷಿಕೆಯೇ ತಿಳಿಸುವಂತೆ ಈ ಸಾಹಿತ್ಯ ಅಯೋಧ್ಯಾ ನಗರದ ಸೂರ್ಯವಂಶೀ ರಾಜಾರಾಮನ ಪಾದುಕೆಯ ಪ್ರಧಾನತ್ವವನ್ನು ಪರಿಚಯಿಸಿಕೊಡುತ್ತದೆ. ಶ್ರೀರಾಮನ ಪಾದುಕೆಗೆ ಪ್ರಧಾನತ್ವ ಹೇಗೆ ಲಭಿಸಿತೆಂಬುದನ್ನು ಹೃದಯಂಗಮವಾಗಿ ವಾಗ್ವಾದ ಅಥವಾ ಸಂವಾದದ ಮೂಲಕ ಈ ಕಾವ್ಯದ ಕವಿ ತಿಳಿಸಿರುತ್ತಾರೆ.
ಹೀಗೊಂದು ಸಮಯ: ಒಮ್ಮೆ ರಾಜಾರಾಮನ ಮಸ್ತಕದ ಮೇಲೆ ಜಾಜ್ವಲ್ಯಮಾನವಾದ ನವರತ್ನದ ಕಿರೀಟ ಶ್ರೀರಾಮನ ಪಾದುಕೆಯನ್ನು ಕುರಿತು"ಹೇ ಪಾದುಕೆ ಏನೆಂದು ವರ್ಣಿಸಲಿ ನಿನ್ನ ಸ್ಥಿತಿಯನ್ನು.ಸದಾ ರಾಮನು ನಿನ್ನನ್ನು ತುಳಿಯುತ್ತಲೇ ಇರುವನು.ಹೇಗೆ ನೀನು ಉತ್ತಮನಾಗಲು ಸಾಧ್ಯ? ನೋಡು ನಾನಾದರೋ ಜನರೆಲ್ಲರೂ ಶ್ರೇಷ್ಠನೆಂದರೂ ರಾಜನ ಶಿರಸ್ಸು ಅದಕ್ಕಿಂತಲೂ ಮುಖ್ಯವಾದುದ್ದಾದರೂ ಅದೆಲ್ಲದರ ಮೇಲೆ ನಾನಿರುವೆ.ಆದ್ದರಿಂದ ನಾನೇ ಪ್ರಧಾನ.ನೀನು ಮಹಾನೀಚ" ಎಂದು ಅವಹೇಳನ ಮಾಡಿತು.ಇಂತಹ ಸಂವಾದ ಹಲವಾರು ದಿನಗಳು ಪಾದುಕೆ ಮತ್ತು ಕಿರೀಟಕ್ಕೆ ನಡೆಯುತ್ತಿತ್ತು.ಪಾದುಕೆಯಾದರೋ ತನ್ನ ನಿಲುವನ್ನು ಪ್ರತಿಷ್ಠಾಪಿಸಲು ಹೀಗೆಂದಿತು "ರಾಜನ ಪಾದದ ರಕ್ಷಕ ನಾನು.ನಾನೇ ಬಹಳ ಮುಖ್ಯ ಹಾಗೂ ಪ್ರಧಾನ.ರಾಜನ ತಲೆಗಿಂತ ಕಾಲುಗಳು ಕ್ಷೇಮವಾಗಿರಬೇಕು, ಅದನ್ನು ನೀನು ಮಾಡಲು ಸಾಧ್ಯವಿಲ್ಲ.ಆದ್ದರಿಂದ ನಾನೇ ಪ್ರಧಾನ ಹಾಗೂ ಬಹಳ ಮುಖ್ಯನಾದವನು" ಎಂದು ತನ್ನ ಅಭಿಪ್ರಾಯವನ್ನು ಸ್ಥಿರಗೊಳಿಸಿತು.
ಹೀಗೇ ಮಾತು ಮುಂದುವರೆದು ವಾಗ್ವಾದವು ಪ್ರಾರಂಭವಾಯಿತು. ಸರ್ವದಾ ಅಹಂನಿಂದ ಕೂಡಿದ ಕಿರೀಟಕ್ಕೆ ಪಾದುಕೆಯು ಸಮಂಜಸವಾದ ತನ್ನ ಶಪಥವನ್ನು ತಿಳಿಸಿತು "ಹೇ ಕಿರೀಟವೇ ಪ್ರಜಲ್ಪನ ಒಳ್ಳೆಯದಲ್ಲ, ಮುಂದೊಂದು ದಿನ ಬರುವುದು, ರಾಜನಾಗಲೀ ಕಿರೀಟವಾಗಲೀ ಇರುವುದಿಲ್ಲ.ರಾಜನಿಲ್ಲದಿದ್ದರೂ ಸಿಂಹಾಸನದ ಮೇಲೆ ನೀನು ಕುಳಿತುಕೊಂಡು ರಾಜ್ಯಭಾರ ಹೊರಲು ಸಾಧ್ಯವಿಲ್ಲ.ಸರ್ವಭಾರವನ್ನೂ ಹೊರುವ ಸಾಮರ್ಥ್ಯ ನನಗೆ ಇರುವುದರಿಂದ ಸಾಕೇತ ರಾಜ್ಯದ ರಾಜ್ಯಭಾರ ನನ್ನಿಂದ ಮಾತ್ರ ಭರಿಸಲು ಸಾಧ್ಯ. ಅಹಂಕಾರವನ್ನು ಬಿಡು.ಮತ್ತೊಂದು ದಿನ ಭರತನೆಂಬ ರಾಜ ಅಗ್ರಜನ ಶಾಸನದಂತೆ ಈ ರಾಜ್ಯವನ್ನು ನಡೆಸುವನು. ಆಗ ನಾನು "ಪಾದುಕೆ" ಸಿಂಹಾಸನದ ಮೇಲೆ ಕುಳಿತು ಪ್ರಜಾರಕ್ಷಣೆ ಮಾಡುವೆ.ನೀನು ಪಕ್ಕದಲ್ಲಿ ಕುಳಿತು ನೋಡುತ್ತಿರುವೆ, ಇದು ಸತ್ಯ"
ಅದರಂತೆಯೇ ಶೃಂಗಭೇರಪುರಕ್ಕೆ ಸೇನಾಸಮೇತರಾಗಿ ಬಂದ ಭರತ, ಶತೃಘ್ನ ಮತ್ತು ನಿಷಧರಾಜ ಗುಹನನ್ನು ಸಂದಿಸಿ,ರಾಮನಿರುವ ಸ್ಥಳವನ್ನು ಗುರುತಿಸಿ, ಶ್ರೀರಾಮನನ್ನೊಪ್ಪಿಸಿ ಅವನ ಆಜ್ಞೆಯಂತೆ ರಾಜ್ಯವಾಳುವ ಅನುಮತಿಯನ್ನು ಪಡೆದು,ರಾಮನ ಪ್ರತಿನಿಧಿಯಾದ ಪಾದುಕೆಗಳನ್ನು ಶಿರದಿಂದ ಹೊತ್ತುತಂದು ಅಯೋಧ್ಯಾನಗರದ ಸಿಂಹಾಸನದಲ್ಲಿಟ್ಟು, ಮುನಿವೇಷಧಾರಿಯಾಗಿ ಅರಮನೆಯಲ್ಲಿಯೇ ವನವಾಸಿಯ ಜೀವನ ನಡೆಸಿದನೆಂದೂ, ಈ ಪಾದುಕೆಯು 14 ವರ್ಷ ರಾಜ್ಯವಾಳಿತೆಂದು ಬಹಳ ಮಾರ್ಮಿಕವಾಗಿ ಪ್ರಸಂಗವನ್ನು ಶ್ರೀಶ್ರಿಗಳು ರಚಿಸಿದ್ದಾರೆ.
ಅಂತಹ ಪಾದುಕೆಗಳು ಧರ್ಮಮಾರ್ಗವನ್ನು,ಪಿತೃವಾಕ್ಯಪರಿಪಾಲನೆಮಾಡಿ ಬಂದಂತಹ ರಾಮನಿಗೆ ರಾಜ್ಯವನ್ನು ಒಪ್ಪಿಸಿ,ತಾನೂ ಸಾಮರ್ಥ್ಯಶಾಲಿ ಭಾರನಿರ್ವಾಹಕನೆಂಬುದನ್ನು ಪ್ರತಿಷ್ಠಾಪಿಸಿತು. ರಾಜ್ಯಭಾರ ನಿರ್ವಹಿಸಿದ ಅಂತಹ ಶ್ರೀರಾಮನ ಪಾದುಕೆಯು ನಮ್ಮನ್ನು ಕಾಪಾಡಲಿ.