ದಾಸರಪದ (ಏ)
ಏನು ಧನ್ಯಳೊ ಲಕುಮಿ
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ||
ಸಾನುರಾಗದಿಂದ ಹರಿಯ ಪಾದಸೇವೆ ಮಾಡುತಿಹಳು ||ಅ ಪ||
ಕೋಟಿ ಕೋಟಿ ಭೃತ್ಯರಿರಲು ಹಾಠಕಾಂಬರನ ಸೇವೆ
ಸಾಟಿ ಇಲ್ಲದೆ ಪೂರ್ಣ ಗುಣನ ಶ್ರೇಷ್ಠನಾಗಿ ಮಾಡುತಿಹಳು ||೧||
ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ನಿಂತು
ಚಿತ್ರ ಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ||೨||
ಸರ್ವಸ್ಥಳದಿವ್ಯಾಪ್ತವಾದ ಸರ್ವದೋಷರಹಿತನಾದ
ಗರುಡಗಮನನಾದ ಪುರಂದರ ವಿಠ್ಠಲನ್ನ ಸೇವಿಸುವಳು ||೩||
ಏಕೆ ಮಮತೆ ಕೊಟ್ಟು ದಣಿಸುವಿ
ಏಕೆ ಮಮತೆ ಕೊಟ್ಟು ದಣಿಸುವಿ ರಂಗ
ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ ||ಪ||
ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ
ಗೆನ್ನವೊಪ್ಪಿಸುವುದು ನೀತವೆ
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ
ನಿನ್ನ ನೇಮಕೆ ಪ್ರತಿಕೂಲನೆ ||೧||
ತನುವು ತನ್ನದು ಅಲ್ಲ ತನುಸಂಬಂಧಿಗಳೆಂಬೋ
ತನುವ್ಯಾರೊ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿಂದಿನ ದೇಹದಂತಲ್ಲವೆ ||೨||
ಇಂದ್ರಿಯಗಳು ವಿಷಯದಿಂದ ತೆಗೆಯಲು ಗೋ
ವಿಂದ ಎನ್ನ ವಶಕೆ ಬಾರವೊ
ಇಂದಿರೆ ಅರಸ ಬ್ರಹ್ಮಾದಿವಂದಿತ ನಿನ್ನ
ಬಂಧಕಶಕುತಿಗೆ ನಮೋ ನಮೋ ||೩||
ಅರಿತು ಅರಿತು ಎನಗರೆಲವವಾದರು
ವಿರಕುತಿ ವಿಷಯದಿ ಬಾರದು
ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ
ಮರಳು ನೀಗುವ ಬಗೆಗಾಣೆನೊ ||೪||
ಎಂದಿಗೆ ನಿನ್ನ ಚಿತ್ತಕೆ ಬರುವುದೊ ಸ್ವಾಮಿ
ಅಂದೆ ಉದ್ಧರಿಸಯ್ಯ ಕರುಣಿಯೆ
ಸುಂದರವಿಗ್ರಹ ಗೋಪಾಲವಿಠಲ ಸುಖ
ಸಾಂದ್ರ ಭವಮೋಚಕ ನಮೋ ನಮೋ ||೫||
ಏಕೆ ಮಲಗಿಹೆ ಹರಿಯೆ
ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆಮಾಡುವ ಬಿರುದು ಸಾಕಾಯಿತೇನೊ ||ಪ||
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಾಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ ||೧||
ಆಕಾಶ ಬೇಧಿಸಲು ಆ ಕಾಲು ಉಳುಕಿತೊ
ಕಾಕುನ್ಯವರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ ||೨||
ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ
ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ ||೩||
ಏನ ಬೇಡಲಿ ನಿನ್ನ
ಏನ ಬೇಡಲಿ ನಿನ್ನ ಬಳಿಗೆ ಬಂದು
ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ||
ಜನನಿಯ ಕೊಡು ಎಂದು ಜಯವಂತ ಬೇಡುವೆನೆ
ಜನನಿ ಏನಿತ್ತಳಾ ಧ್ರುವರಾಯಗೆ
ಜನಕನ ಕೊಡು ಎಂದು ಜಗದೀಶ ಬೇಡುವೆನೆ
ಜನಕನೇನಿತ್ತನಾ ಪ್ರಹ್ಲಾದಗೆ ||೧||
ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ
ಅನುಜನೇನಿತ್ತನೈ ಆ ವಾಲಿಗೆ
ಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೆ
ಧನವ ಗಳಿಸಿದ ಸುಯೋಧನನೇನಾದನು ||೨||
ಸತಿಯಳ ಕೊಡು ಎಂದು ಮತಿವಂತ ಬೇಡುವೆನೆ
ಸತಿಯಿಂದ ದ್ಯುನಾಮಕನೇನಾದನಯ್ಯ
ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ
ಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ ||೩||
ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೆ
ಬಂಧುಗಳು ಸಲಹಿದರೆ ಗಜರಾಜನ
ಅಂದಣವ ಕೊಡು ಎಂದು ಅಂದದಲಿ ಬೇಡುವೆನೆ
ಅಂದಣೇರಿದ ನಹುಷನೇನಾದನಯ್ಯ ||೪||
ಬೇಡುವೆನು ನಾನಿನ್ನ ಬೇಡತಕ್ಕುದ ದೇವ
ನೀಡೆನೆಂಬುದು ನಿನ್ನ ಮನದೊಳಿತ್ತೆ
ಮೂಡಲಗಿರಿವಾಸ ಗೋಪಾಲವಿಠಲ ಪರರ
ಬೇಡದಂತೆ ಎನ್ನ ಮಾಡಯ್ಯ ಹರಿಯೆ ||೫||
ಏನಬೇಡಲೊ ನಿನ್ನ
ಏನಬೇಡಲೊ ನಿನ್ನ ದೇವಾಧಿದೇವ ||ಪ||
ಏನಿಹುದೊ ನಿನ್ನೊಳಗೆ ಮಹಾನುಭಾವ ||ಅ.ಪ||
ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರ
ವನಿತೆಯರ ಬೇಡಲೆ ಬ್ರಹ್ಮಚಾರಿ
ಘನಸಖ್ಯವನು ಬಯಸೆ ನೆನೆಯುವರ ಮನದಲಿಹೆ
ತಿನುವುದಕೆ ಕೇಳುವೆನೆ ನವನೀತಚೋರ ||೧||
ಒಡವೆಗಳ ಬಯಸೆ ಶಿಖಿಪಿಂಛ ತುಳಸಿಪತ್ರ
ಕಡುಸೈನ್ಯವನು ಬಯಸೆ ಗೋಪಾಲನು
ಬಿಡದೆ ರೂಪವ ಬಯಸೆ ನೀಲಮೇಘಶ್ಯಾಮ
ಉಡುವುದಕೆ ಕೇಳುವೆನೆ ಸ್ತ್ರೀವಸನಚೋರ ||೨||
ಶಕ್ತಿಯನು ಗೋಪಿಕಾಸ್ತ್ರೀಯರಲಿ ವ್ಯಯಗೈದೆ
ಭಕ್ತಿಯನು ಸತ್ಯವಂತರಿಗಿತ್ತಿಹೆ
ಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವ
ಮುಕ್ತಿಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ ||೩||
ಏನಾದರೇನು ಜ್ಞಾನವಿಲ್ಲದೆ
ಏನಾದರೇನು ಜ್ಞಾನವಿಲ್ಲದೆ ಮೋಕ್ಷವಿಲ್ಲ ||ಪ||
ವೇದವನೋದಿದರೇನು ಶಾಸ್ತ್ರವನೋದಿದರೇನು
ಕಾದಿ ಕಾದಾಡಿದರೇನು ||೧||
ಕಾಶಿಗೆ ತಾ ಹೋದರೇನು ಕಾನನವ ಸೇರಿದರೇನು
ಕಾಶಿಪೀತಾಂಬರ ಉಟ್ಟರೇನು ||೨||
ಜಪತಪವ ಮಾಡಲೇನು ಜಾಣತನದೊಳ್ ಮೆರೆದರೇನು
ವಿಜಯವಿಠಲನ್ನ ಸಾರಿದರೇನು ||೩||
ಏನು ಧನ್ಯಳೋ ಲಕುಮಿ
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ಪಾದಸೇವೆ ಮಾಡುತಿಹಳು
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||
ಕೋಟಿ ಕೋಟಿ ಭೃತ್ಯರಿರಲು ಹಾಠಕಾಂಬರನ ಸೇವೆ
ಸಾಟಿ ಇಲ್ಲದೆ ಪೂರ್ಣ ಗುಣನ ಶ್ರೇಷ್ಠನಾಗಿ ಮಾಡುತಿಹಳು ||ಏನು ಧನ್ಯಳೋ||
ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ನಿಂತು
ಚಿತ್ರ ಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ||ಏನು ಧನ್ಯಳೋ||
ಸರ್ವಸ್ಥಳದಿವ್ಯಾಪ್ತವಾದ ಸರ್ವದೋಷರಹಿತನಾದ
ಗರುಡಗಮನನಾದ ಪುರಂದರ ವಿಠ್ಠಲನ್ನ ಸೇವಿಸುವಳು ||ಏನು ಧನ್ಯಳೋ||
ಏನು ಬರೆದೆಯೊ ಬ್ರಹ್ಮ
ಏನು ಬರೆದೆಯೊ ಬ್ರಹ್ಮ ನೀನೆಷ್ಟು ನಿರ್ದಯನೊ ಅಭಿ
ಮಾನವನು ತೊರೆದು ಪರರನ್ನು ಬೇಡುವುದ ||ಪ||
ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ
ಬಾಣಸಮರೂಪ ನೀನೆಂದು ಪೊಗಳಿ
ಆಣೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು
ಗಾಣ ತಿರುಗುವ ಎತ್ತಿನಂತೆ ಬಳಲುವುದ ||೧||
ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ
ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದನಲು
ಅಲ್ಲವನು ತಿಂದ ಇಲಿಯಂತೆ ಕೊರಗುವುದ ||೨||
ಹಿಂದೆ ಬರೆದ ಬರಹ ಹೇಗಾದರಾಗಲಿ
ಮುಂದೆನ್ನ ವಂಶದಲಿ ಜನಿಸುವರ ಕಾಯೊ
ಸಂದೇಹಿಸಲಿ ಬೇಡ ಪುರಂದರವಿಠ್ಠಲ
ಕಂದರ್ಪಜನಕ ಉಡುಪಿಯ ಕೃಷ್ಣನಾಣೆ ||೩||
ಏನು ಮಾಡಿದರೇನು
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ ||ಪ||
ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ
ಹರಿ ನಿನ್ನ ಕರುಣಕಟಾಕ್ಷವಾಗದನಕ ||೧||
ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೆನೆಂದು ಕಾಯ ದಂಡಿಸಿದೆನೊ
ರತಿಪತಿಪಿತ ನಿನ್ನ ದಯವಾಗದನಕ ||೨||
ಧ್ಯಾನವನು ಮಾಡಿದೆನು ಮೌನವನು ತಾಳಿದೆನು
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ ||೩||
ಏನು ಸುಖವೋ ಎಂಥಾ ಸುಖವೋ
ಏನು ಸುಖವೋ ಎಂಥಾ ಸುಖವೋ ||ಪ||
ಹರಿಯ ಧ್ಯಾನಮಾಡುವವರ ಸಂಗ ||ಅ.ಪ||
ತಂಬೂರಿ ಮೀಟುತ್ತ ಹೃದಯ
ಅಂಬಕದಿಂದ ಆನಂದ
ಅಂಬುಗರೆಯುತ ಬಲು
ಸಂಭ್ರಮದಿಂದಿಹರ ಸಂಗ ||೧||
ಗೆಜ್ಜೆಯ ಕಾಲಲ್ಲಿ ಕಟ್ಟಿ
ಲಜ್ಜೆ ಬಿಟ್ಟು ಹರಿಯ ನಾಮ
ಗರ್ಜನೆ ಮಾಡುತ್ತ ಅಘ
ವರ್ಜರಾಗಿಹರ ಸಂಗ ||೨||
ಸ್ವರ್ಣಲೋಷ್ಠ ಸಮವೆಂದು
ತನ್ನದೆಂಬೊ ಹಮ್ಮು ತೊರೆದು
ಘನ್ನಮಹಿಮನ್ನ ಪಾಡಿ
ಧನ್ಯರಾಗುಹರ ಸಂಗ ||೩||
ಪುಷ್ಪದಿ ಸುಗಂಧ ಹ್ಯಾಂ-
ಗಿಪ್ಪುದೊ ತದ್ವತ್ತು ಜಗ-
ದಪ್ಪ ಬೊಮ್ಮಾದಿಗಳಲ್ಲಿ
ಇಷ್ಟನೆನ್ನುವರ ಸಂಗ ||೪||
ದರ್ವಿಯಂತೆ ದೇಹವನ್ನು
ಸರ್ವದಾ ತಿಳಿದು ಶೇಷ
ಪರ್ವತವಾಸನ ನಂಬಿ
ಉರ್ವಿಯೊಳಗಿಹರ ಸಂಗ ||೫||
ನಡೆವೋದು ನುಡಿವೋದು ನಿರುತ
ಕೊಡುವೋದು ಕೊಂಬೋದು ಜಗ
ದೊಡೆಯನ ಪ್ರೇರಣೆಯೆಂದು
ನುಡಿದು ಹಿಗ್ಗುವರ ಸಂಗ ||೬||
ಸೃಷ್ಟಿಗೊಡೆಯನ ಮನ
ಮುಟ್ಟಿ ಭಜಿಸುತ್ತ ಜ್ಞಾನ
ಕೊಟ್ಟ ಗೋಪಾಲವಿಠಲ-
ಗಿಷ್ಟರಾಗಿಹರ ಸಂಗ ||೭||
ಏನೆಂದು ಕೊಂಡಾಡಿ
ಏನೆಂದು ಕೊಂಡಾಡಿ ಸ್ತುತಿಸುವೆನೊ ದೇವ
ನಾನೇನು ಬಲ್ಲೆ ನಿಮ್ಮ ಮಹಿಮೆಗಳ ಮಾಧವ ||ಪ||
ಹರಿ ಮುಕುಂದನು ನೀನು ನರಜನ್ಮ ಹುಳುನಾನು
ಪರಮಾತ್ಮ ನೀನು ಪಾಮರನು ನಾನು
ಗರುಡಗಮನನು ನೀನು ಮರುಳು ಪಾಪಿಯು ನಾನು
ಪರಮಜ್ಯೋತಿಯು ನೀನು ದುರುಳನು ನಾನು ||೧||
ಅಣುರೇಣು ತೃಣಗಳಲಿ ಪರಿಪೂರ್ಣನೈ ನೀನು
ಕ್ಷಣ ಕ್ಷಣಕೆ ಅವಗುಣದ ಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ತನುನಿತ್ಯವಲ್ಲದಾ ಬೊಂಬೆ ನಾನು ||೨||
ಕಂಬದಲಿ ಬಂದ ಆನಂದಮೂರುತಿ ನೀನು
ನಂಬಿಗೆಯು ಇಲ್ಲದ ಪ್ರಪಂಚಕನು ನಾನು
ಅಂಬರೀಷಗೆ ಒಲಿದ ಅಕ್ರೂರಸಖ ನೀನು
ಡಂಬಕರ್ಮಿಯು ನಾನು ನಿರ್ಜಿತನು ನೀನು ||೩||
ವಾರಿಧಿಶಯನನಾದ ಕಾರುಣ್ಯನಿಧಿ ನೀನು
ಘೋರದಿಂದಿಹ ಕಾಮಿ ಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನು
ದೂರಿ ನಿನ್ನಯ ಬಯ್ವ ದುಷ್ಟ ನಾನು ||೪||
ತಿರುಪತಿಯ ವಾಸ ಶ್ರೀ ವೆಂಕಟೇಶನೆ ನಿನ್ನ
ಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕೆನೈ ನಾನು
ಸಿರಿ ಕಾಗಿನೆಲೆಯಾದಿಕೇಶವನು ನೀನು ||೫||