ದಾಸರಪದ (ಗ)
ಗಣಪತೇ ಎನ್ನ ಪಾಲಿಸೋ
ಗಣಪತೇ ಎನ್ನ ಪಾಲಿಸೋ - ಗಂಭೀರಾ||ಪ||
ಪಾರ್ವತಿ ನಂದನ ಸುಂದರ ವದನ ಶರ್ವಾದಿ ಸುರವಂದ್ಯ ||೧||
ಆದಿ ಪೂಜಿತ ನೀನು ಮೋದ ಭಕುತರಿಗಿತ್ತು ಮಾಧವನಲಿ ಮನ ಸದಾ ನಿಲಿಸು ನೀ||೨||
ಪಂಕಜ ನಯನ ವೆಂಕಟ ವಿಠಲನ ಕಿಂಕರನೆನಿಸೆನ್ನ ಶಂಕರ ತನಯನೆ ||೩||
ಗುಮ್ಮನ ಕರೆಯದಿರೆ
ಗುಮ್ಮನ ಕರೆಯದಿರೆ ಅಮ್ಮ ನೀನು |ಪ|
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ | ಅ.ಪ.|
ಹೆಣ್ಣುಗಳಿರುವಲ್ಲಿಗೆ ಪೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರಾ ಬಡಿಯೆನು, ಅಣ್ಣನ ಬೈಯ್ಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ್ಲ |೧|
ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆನೋಡೆ
ದೇವರಂತೆ ಒಂದು ಥಾವಿಲಿ ಕೊಡುವೆ |೨|
ಮಗನ ಮಾತನು ಕೇಳಿ ಗೋಪೀದೇವಿ
ಮುಗುಳುನಗೆ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ |೩|
ಗುರುಪುರಂದರದಾಸರೆ
ಗುರುಪುರಂದರದಾಸರೆ ನಿಮ್ಮ
ಚರಣಕಮಲವ ನಂಬಿದೆ |ಪ|
ಗರ್ವ ರಹಿತನ ಮಾಡಿ ಎನ್ನನು
ಪೊರೆವ ಭಾರವು ನಿಮ್ಮದೇ |ಅ.ಪ.|
ಒಂದು ಅರಿಯದ ಮಂದಮತಿ ನಾ
ನೆಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ
ತಂದೆ ಮಾಡೆಲೊ ಸತ್ಕೃಪೆ |೧|
ಮಾರಜನಕನ ಸನ್ನಿಧಾನದಿ
ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ
ತೋರಿ ದರುಶನ ನೀಡುತಾ | ೨|
ಪುರಂದರಾಲಯ ಘಟ್ಟದೊಳಗೆ
ನಿರುತ ಧನಗಳ ಗಳಿಸಲು
ಪರಮಪುರುಷನು ವಿಪ್ರನಂದದಿ
ಕರವ ನೀಡಿ ಯಾಚಿಸೇ | ೩|
ಗುರು ರಾಘವೇಂದ್ರರ ಚರಣ
ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮರಿಸುವ ಮನುಜರಿಗೆ |ಪ|
ಕರೆಕರೆಗೊಳಿಸುವ ದುರಿತ ದುಷ್ಕ್ರುತವೆಲ್ಲ ಕರಿಯು ಸಿಂಹನ ಕಂಡ ತೆರನಾಗುವುದಯ್ಯ |ಅ.ಪ|
ಗುರು ಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ
ಹರ ಧರಿಸಿದ ಶಶಿಯಂತುದಿಸಿ ಪರಮತ ತಿ –
ಮಿರಕ್ಕೆ ತರಣಿಕಿರಣನೆನಿಸಿ ಪಿರಿದು
ಮೆರೆವ ಸಿರಿ ರಾಮನರ್ಚಕರಾದ |೧|
ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆಂದು
ಗರುಡಶೇಷ ರುದ್ರ ಸಮರೆಂದು ಸ್ಥಾಪಿಸಿ
ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ |೨|
ಅಂಧಕರಿಗೆ ಚಕ್ಷು ವಂದ್ಯರಿಗೆ ಸುರತರು
ಬಂದಬಂದವರಭೀಷ್ಟಗಳನಿತ್ತು
ಒಂದಾರುನೂರುವತ್ಸರ ವೃಂದಾವನದಲ್ಲಿ
ಚೆಂದಾಗಿ ನಿಂದು ಮೆರೆವ ಕೃಪಾಸಿಂಧು ದೇವಾಂಶರ |೩|
ರಾ ಎನ್ನೆ ದುರಿತರಾಶಿಗಳ ದಹಿಸುವ
ಘ – ಎನ್ನೆ ಘನಜ್ಞಾನ ಭಕುತಿ ಈವ
ವೇಂ ಎನ್ನೆ ವೇಗದಿ ಜನನಮರಣ ದೂರ
ಗುರುವಿನ ಗುಲಾಮನಾಗುವ ತನಕ
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೇಕವನೋದಿ
ವ್ಯರ್ಥವಾಯ್ತು ಭಕುತಿ |ಪ|
ಆರು ಶಾಸ್ತ್ರವ ಓದಿದರಿಲ್ಲ ಮೂ
ರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಮೆರೆದರೆ ಇಲ್ಲ |೧|
ಕೊರಳೊಳು ಮಾಲೆ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಂತೆ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ |೨|
ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖವ ಬಿಡಿಸಿದರಿಲ್ಲ
ನಾರದವರದ ಶ್ರೀ ಪುರಂದರವಿಠಲನ
ಮರೆಯದೆ ಮನದೊಳು ಬೆರೆಯುವತನಕ |೩|
ಗೋಪಿಯ ಭಾಗ್ಯವಿದು
ಗೋಪಿಯ ಭಾಗ್ಯವಿದು
ಶ್ರೀಪತಿ ತಾ ಶಿಶುರೂಪಿನಲಿರುವುದು |ಪ|
ಕಡುಮುದ್ದುರಂಗನ ತೊಡೆಯಮೇಲೆತ್ತುತ
ಜಡೆಯ ಹೆಣೆದು ಹೂಮುಡಿಸಿ ಬೇಗ
ಬಿಡದೆ ಮುತ್ತಿನ ಚಿಂದರಳೆಲೆಯನು
ಸಡಗರದಿಂದಲಂಕರಿಸಿದಳು |೧|
ನಿತ್ಯನಿರ್ಮಲನಿಗೆ ನೀರನೆರೆದು ತಂ
ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ
ಮುತ್ತು ಕೊಟ್ಟು ಬಲುವಿಧದಿಂದಾಡಿಸಿ
ಅರ್ತಿಯಿಂದಲಿ ತಾ ತೂಗಿದಳು |೨|
ದೃಷ್ಟಿತಾಕೀತೆಂದಿಟ್ಟು ವಿಭೂತಿಯ
ತಟ್ಟೆಯೊಳಾರತಿಗಳ ಬೆಳಗಿ
ಥಟ್ಟನೆ ಉಪ್ಪುಬೇವು ನಿವಾಳಿಸಿ
ತೊಟ್ಟಿಲೊಳಿಟ್ಟು ತಾ ತೂಗಿದಳು |೩|
ಎನ್ನಯ ರನ್ನನೆ ಸುಮ್ಮನಿರೋ ದೊಡ್ಡ
ಗುಮ್ಮನು ಬರುವನು ಅಳಬೇಡ
ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು
ಬೊಮ್ಮನ ಪಿತನ ತಾ ತೂಗಿದಳು |4|
ಮಾಧವ ಜೋ ಮಧುಸೂದನ ಜೋ ಜೋ
ಯಾದವರಾಯ ಶ್ರೀ ರಂಗನೆ ಜೋ
ಆದಿಮೂರುತಿ ನಮ್ಮ ಪುರಂದರವಿಠಲನ
ಆದರದಿಂದ ತಾ ತೂಗಿದಳು |೫|
ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ ರಾಗ : ಆನಂದ ಭೈರವಿ, ತಾಳ:ಆದಿ
ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ
ಗಿಳಿಯು ಪಂಜರದೊಳಿಲ್ಲ |ಪ|
ಅಕ್ಕ ನಿನ್ನ ಮಾತ ಕೇಳಿ ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ |೧|
ಆಟಕೊಂದು ಗಿಳಿಯ ಸಾಕಿದೆ ಮುತ್ತಿನ ಹಾರವ ಹಾಕಿದೆ
ಮುತ್ತುಕೊಂಡು ಗಿಳಿಯು ತಾನು ಎತ್ತಲೋಡಿ ಹೋಯಿತಯ್ಯೋ |೨|
ಹಸಿರು ಬಣ್ಣದ ಗಿಳಿಯು ಕುಶಲ ಬುದ್ಧಿಯ ಗಿಳಿಯು
ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ |೩|
ಮುಪ್ಪಾಗದ ಬೆಣ್ಣೆಯನ್ನು ತಪ್ಪದೇ ನಾ ಹಾಕಿ ಸಾಕಿದೆ
ಒಪ್ಪದಿಂದ ಗಿಳಿಯು ಈಗ ತೆಪ್ಪನೆ ಹಾರಿ ಹೋಯಿತಯ್ಯೋ |೪|
ರಾಮ ರಾಮ ಎಂಬ ಗಿಳಿಯು ಕೋಮಲ ಕಾಯದ ಗಿಳಿಯು
ಸಾಮಜ ಪೋಷಕ ತಾನು ಪ್ರೇಮದಿ ಸಾಕಿದ ಗಿಳಿಯು |೫|
ಒಂಭತ್ತು ಬಾಗಿಲ ಮನೆಯು ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಭ ಬಿದ್ದು ಅಂಬರಕ್ಕೆ ಹಾರಿ ಹೋಯಿತು |೬|
ಅಂಗೈಯಲ್ಲಾಡುವ ಗಿಳಿಯು ಮುಂಗೈ ಮೇಲಿನ ಗಿಳಿಯು
ರಂಗ ಪುರಂದರ ವಿಠಲನಂಥ ರಂಗದೊಳಿಹ ಗಿಳಿಯು |೭|
ಗೋವಿಂದ ನಿನ್ನ ನಾಮವೆ ಚೆಂದ
ಗೋವಿಂದ ನಿನ್ನ ನಾಮವೆ ಚೆಂದ
ಅಣು ರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೇ ಆನಂದ ||ಅ ಪ||
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯುವುದೆ ಆನಂದ ||ಅ ಪ||
ಪರಮ ಪುರುಷ ಶ್ರೀ ಪುರಂದರ ವಿಠಲ
ಹಿಂಗಡ ದಾಸರ ಸಲಹುವುದೆ ಆನಂದ ||ಅ ಪ||
ಗಂಗಾತೀರದ ಮನೆ
ಗಂಗಾತೀರದ ಮನೆ ನಮ್ಮದು| ಕಾಶಿ| ಬಿಂದುಮಾಧವನಲ್ಲಿ ಇರುವುದು ನಮ್ಮನೆ ಪಂಚಾ||ಪ||
ಆವಾವ ಕಾಲದ ಆನಂದರಮನೆ| ತಾವರೆ ತಲಿತದ ನದಿಯ ಮನೆ|| ಆವಾಗ ಕಮಲಜ ಅವತರಿಸಿದ ಮನೆ| ಆ ವೇದಂಗಳಿಗೆಲ್ಲ ತೌರುಮನೆ ಪಂಚಾ|| 1 ||
ಚಿತ್ರವಳಿದಲ್ಲಿಯ ಮನೆ ಚಿನ್ಮಯಾರೂಪದ ಮನೆ| ನಿತ್ಯಲೋಕಾಗಳ ರಕ್ಷಿಸುವ ಮನೆ|| ಭಕ್ತಜನರನೆಲ್ಲ ಉದ್ಧರಿಸಿದ ಮನೆ| ಮುಕ್ತಿ ಸಾಯುಜ್ಯಕೆ ಕಡೆಯಿಲ್ಲ ಮನೆ ಪಂಚಾ||2||
ಹಂಗಿಲ್ಲದ ಮನೆ ಹಾದಿಯ ಬಿಡದೆ ಹಾಲು| ಗಂಗಿಯವದು ರಕ್ಷಿಸುವ ಮನೆ|| ಮೂ| ರಮ್ಗನೆರುಳ್ಳ ಮುಕ್ತಿ ಸಾಧನಕಿನ್ನು ಇಂಧಾ| ಕಂಗಳ ಪುನ್ಯಕಿನ್ನು ಕಡೆಯಿಲ್ಲ ಮನೆ ಪಂಚಾ||3||
ಧ್ವಜವಜ್ರಾಂಕಿತರೇಖಾ ಶಂಖ ಚಕ್ರದ ಮನೆ| ನಿಜ ಸುವರ್ಣರೇಖಾ ತೋರುವ ಮನೆ|| ಗಜರಾಜಗೊಲಿದಂಥ ಗರುದವಾಹನನಾದ ಇಂಥಾ| ಕಂಗಳ ಪುಣ್ಯಕಿನ್ನು ಕಡೆಯಿಲ್ಲ ಮನೆ ಪಂಚಾ||4||
ದ್ವಜವಜ್ರಾಂಕಿತರೇಖಾ ಶಂಖ ಚಕ್ರದ ಮನೆ| ನಿಜ ಸುವರ್ಣರೇಖಾ ತೋರುವ ಮನೆ|| ಗಜರಾಜಗೋಲಿದಂಥ ಗರುಡವಾಹನಾದ ಇಂಥಾ| ಮೂಜಗ ತ್ರೈಲೋಕ್ಯ ಮಾಡಿದ ಮನೆ ಪಂಚಾ ||5||
ಪರಮ ಪವಿತ್ರ ಚರಿತ್ರತೀರ್ಥರ ಮನೆ| ಪರಬರಬ್ರಹ್ಮ ರಥಕೆ ಸಾಧನದ ಮನೆ|| ಪರಮಾತ್ಮನಾಗಿ ಶ್ರೀ| ವರನಾದ ಪುರಂದರವಿಠಲನ ಮನೆ ಪಂಚಾ||6||
ಗಂಗಾದಿ ಸಕಲ
ಗಂಗಾದಿ ಸಕಲ ತೀರ್ಥಂಗಳಿಗತಧಿಕ| ಶ್ರೀಹರಿಯ ನಾಮ||
ಹಿಂಗದೆ ನೆನೆವರ್ಗೆ ಮಂಗಳ ಫಲವೀವ| ಹರಿಯ ನಾಮ| ||ಪ||
ಸ್ನಾನ ಜಪಂಗಳ ಸಾಧಿಸದವನಿಗೆ| ಹರಿಯ ನಾಮ||
ಜ್ಞಾನವನರಿಯದ ಮೂಧಾತ್ನನಿಗೆ ಇದು| ಹರಿಯ ನಾಮ ||1||
ವೇಧಶಾಸ್ತ್ರಂಗಳನೋಡದ ಮನುಜಗೆ| ಹರಿಯ ನಾಮ||
ಸಾಧನಗಳ ನಾಲ್ಕು ಸಾಧಿಸದವನಿಗೆ|| ಹರಿಯ ನಾಮ||೨||
ಕಾಲನ ದೂತರ ತರಿದು ಬಿಸುದುವುದು| ಹರಿಯ ನಾಮ||
ಲೋಲ ಶ್ರೀ ಪುರಂದರ ವಿಠಲನ ಒಲುಮೆಗೆ|| ಹರಿಯ ನಾಮ||೩||
ಗಜವದನ ಬೇಡುವೆ
ಗಜವದನ ಬೇಡುವೆ| ಗೌರಿತನಯ ||ಪ||
ತ್ರಿಜಗ ವಂದಿತನೆ ಸುಜನರ ಪೊರೆವನೆ||ಅ||
ಪಾಶಂಕುಶಧರ ಪರಮಪವಿತ್ರ ಮೂಷಿಕವಾಹನ ಮುನಿಜನ ಪ್ರೇಮ||1||
ಮೊದದಿನಿನ್ನಯ ಪಾದವ ತೋರೋ ಸಾಧುವಂದಿತನೆ ಆದರದಿಂದಲೆ||೨||
ಸರಸಿಜನಾಭ ಶ್ರೀಪುರಂದರ ವಿಠಲನ| ನಿರತ ನೆನೆಯುವಂತೆ ದಯಮಾಡೋ||೩||
ಗಾಜುಗನಾಡುತಲಿರ್ದನು
ಗಾಜುಗನಾಡುತಲಿರ್ದನು ನಮ್ಮ ರಂಗ ||ಪ||
ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು||ಅ||
ಒಂದನ್ನೇ ಹಾರಿಸಿದ| ವೇಗದಿ ಮ| ತ್ತೊಂದರಲಿ ತಾ ಬಡೆದ||
ಒಂದೆ ಬಾರಿಗೆ ಎಲ್ಲಾ ಗಜುಗವ ಗೆಲಿದನು||1||
ಬಚ್ಚಿಟ್ಟ ಗಜ್ಜುಗವ | ಹುಡುಕೆಂದು| ಅಚ್ಚುತ ನಗುತ ನಿಂತ||
ಮುಚ್ಚಿಟ್ಟ ಗಜುಗವು ದೊರಕಲಿಲ್ಲವೂ ಎಂದ ||೨||
ಕಾಕಾಚಿ ------ಯಿತು | ಎನುತಲಿ ರಂಗ|
ಆಕಾಶವನು ತೋರಿದ ಗಜುಗವ ನಿಮಗೆ ತರುವೆ ಎಂದ||೩||
ಗಾಜುಗ ಗಿದಗಳನೆಕ| ತೋರಿದವಯ್ಯ| ಗಾಜುಗ ಗೊಂಚಲುಗಳನೆಕ||
ಗಜುಗದ ಗಂಟುಗಳ್ ಕಚ್ಚಿದರು ಮಕ್ಕಳು ಕೂಡ ಸಂಭ್ರಮ ಮಾತು ||4||
ಭೂಮ್ಮನ ಪಡೆದಂಥ| ಚಿಕ್ಕ ಕೂಸು| ಅಮ್ಮನೇ ತೊಡೆಯ ಮೇಲೆ|
ಗಮ್ಮನೆ ಮಲಗಿದ ಆಟಂಗಳನೆ ಬಿಟ್ಟು||6||
ಸುರರು ವಂದಿಸಿ ನಿಲ್ಲಲು| ಯಕ್ಷ ಕಿನ್ನರರು| ಸ್ವರವೆತ್ತಿ ಸ್ತುಥಿಗೈಯ್ಯಲು||
ದೊರೆ ತಂದೆ ಪುರಂದರ ವಿಠಲನು ಒಪ್ಪಿದ||೭||