ದಾಸರಪದ (ಚ)
ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ
ನಮೋ ನಮೋ |ಪ|
ಸುಂದರ ಮೃಗವರ ಪಿನಾಕಧನುಕರ ಗಂಗಾಶಿರ
ಗಜಚರ್ಮಾಂಬರಧರ |ಅ.ಪ.|
ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವ ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರ ನೀನೆ
ಇಂದಿರೇಶ ಶ್ರೀರಾಮನ ಪಾದವ ಚೆಂದದಿ ಪೊಗಳುವ ನೀನೆ |೧|
ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷ ಬೇಡೋ ದಿಗಂಬರ ನೀನೆ
ಕಾಲಕೂಟವನು ಪಾನ ಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ |೨|
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ |೩|
ಚಿರಂಜೀವಿಯಾಗೆಲೊ ಚಿಣ್ಣ ನೀನು
ಹರಿದಾಸ ದಾಸ ದಾಸರ ಪಾದಧೂಳಾಗಿ | ಪ|
ಜರಿಯಬ್ಯಾಡ ಹರಿಯ ಮರೆಯಬ್ಯಾಡೆಂದೆಂದು
ತಿರಿಯಬ್ಯಾಡ ಖಳರ ಮನೆಗೆ ಪೋಗಿ
ಓರೆಯಬ್ಯಾಡನ್ಯರಿಗೆ ತತ್ವಗಳನು
ಬೆರೆಯಬ್ಯಾಡ ಅನ್ಯಸತಿಯ ಸ್ವಪ್ನದಲಿ |೧|
ಸಾಲ ಮಾಡಲು ಬೇಡ ಸಾಲದೆನ್ನಲು ಬೇಡ
ನಾಳಿಗೆ ಹ್ಯಾಂಗೆಂಬೊ ಚಿಂತೆ ಬೇಡ
ಖೂಳ ಜನರೊಡನೆ ಮಿತ್ರತ್ವ ಮಾಡಲಿಬೇಡ
ಬಾಳುವರ ಸಂಗಡ ಬಾಳೆಲೊ ಬಾಲಾ |೨|
ಲೋಕವಾರ್ತೆಯು ನಿನ್ನ ಕಿವಿಕೇಳಿಸಲು ಬೇಡ
ಶ್ರೀಕಾಂತನ ವಾರ್ತೆ ಕೇಳದಿರಬೇಡ
ಪಾಕವನು ಮಾಡಿ ಏಕಾಂಗಿಯಾಗಿ ಉಣಬೇಡ
ಲೌಕಿಕವನುಸರಿಸಿ ದಣುಕೊಳಲಿ ಬೇಡ |೩|
ಪಂಡಿತರು ಪಾಮರರು ಆರಾದರೂ ನಿನ್ನ
ಕಂಡವರಿಗೆಲ್ಲ ಕೌತುಕ ತೋರಲೀ
ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು
ಉಂಡುಟ್ಟು ದ್ವಿಜರುಸಹ ಗಂಡುಗಲಿಯಾಗಿರೆಲೊ |೪|
ಮಂದ ಮತಿಗಳ ಕೂಡ ಮಾತಾಡದಿರು ಹರಿ
ನಿಂದಕರ ಕಣ್ಣೆತ್ತಿ ನೋಡಬೇಡ
ಇಂದಿರಾರಮಣ ಸಿರಿ ವಿಜಯವಿಠಲನ ಚರಣ
ದ್ವಂದ್ವದಲಿ ಮಸ್ತಕವನಿಡದಿರಬೇಡ |೫|
ಚರಣವ ತೋರೈ ಚೆಲುವರ ಅರಸನೆ
ಚರಣವ ತೋರೈ |ಪ|
ಸ್ಮರಣೆ ಮಾತ್ರದಲಿ ಮುಕುತಿಯ ಕೊಡುವ
ಚರಣವ ತೋರೈ |ಅ.ಪ|
ರಮ್ಮೆಯ ಮನಕೆ ಬೆಡಗು ತೋರಿದ ಚರಣವ ತೋರೈ
ಬೋಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ
ಚಿಮ್ಮಿ ರಾವಣನ ಬಲುದೂರವ ಗೈದ ಚರಣವ ತೋರೈ
ಘಮ್ಮನೆ ಮೊಸರ ಮೆದ್ದು ನಡೆದ ಚರಣವ ತೋರೈ |೧|
ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೈ
ಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೈ
ಬೇಕೆಂದು ಕುಬುಜೆಯ ಮನೆಗೆ ಪೋದ ಚರಣವ ತೋರೈ
ನೂಕಿಭವಾಬ್ಧಿಯ ಬತ್ತಿಸಿಬಿಡುವ ಚರಣವ ತೋರೈ |೨|
ಬಿಡದಲೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೈ
ಬಡವರಾಧಾರ ದಿವ್ಯಭೂಷಣವಿಟ್ಟ ಚರಣವ ತೋರೈ
ಕಡುಮುದ್ದುಸಿರಿಕೃಷ್ಣ ವಿಜಯವಿಠಲ ನಿನ್ನ ಚರಣವ ತೋರೈ
ಉಡುಪಿಯ ಸ್ಥಳದಲಿ ನಿಂದು ಪೂಜೆಯಗೊಂಬ ಚರಣವ ತೋರೈ