ದಾಸರಪದ (ಮ)
ಮಂದಗಮನೆ ಇವನಾರೆ
ಮಂದಗಮನೆ ಇವನಾರೆ ಪೇಳಮ್ಮ ||ಪ||
ಮಂದರಧರ ಗೋವಿಂದ ಕಾಣಮ್ಮ ||ಅ ಪ||
ಕೆಂದಳಿರುನಖಿ ಶಶಿಬಿಂಬಪದಪದ್ಮ
ಅಂದುಗೆ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ ||೧||
ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ
ಕಡಗ ಕಂಕಣವಿಟ್ಟವನಾರಮ್ಮ
ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ
ಳೊಡನೆ ತೋರಿದ ಜಗದೊಡೆಯಕಾಣಮ್ಮ ||೨||
ನೀರದನೀಲದೆಂತೆಸವ ವಕ್ಷದೀ ಕೇ
ಯೂರ ಹಾರನಿಟ್ಟವನಾರಮ್ಮ
ನೀರೆ ಕೇಳು ನಿರ್ಜರರಾದವರಿಗೆ ಪ್ರೇರಿಸಿ
ಫಲವಿತ್ತು ದಾರಿ ಕಾಣಮ್ಮ ||೩||
ಶಂಕ ಚಕ್ರವು ಗದೆ ಪದ್ಮ ಕೈಯೊಳಗಿಟ್ಟ
ಲಂಕರಿಸುವನೀತನಾರಮ್ಮ
ಪಂಕಜಮುಖಿ ಶ್ರೀ ಭೂದೇವಿಯರಸನು
ಶಂಕೆಯಿಲ್ಲದೆ ಗೋಪಿತನಯಕಾಣಮ್ಮ ||೪||
ಕಂಬುಕಂಧರ ಕರ್ಣಾರ್ಲಂಬಿತ ಕುಂಡಲ
ಅಂಬುಜಮುಖದವನಾರೆ ಹೇಳಮ್ಮ
ರಂಭೆ ಕೇಳೀತ ಪುರಂದರವಿಠ್ಠಲ
ನಂಬಿದಭಕ್ತಕುಟುಂಬಕಾಣಮ್ಮ ||೫||
ಮೆಲ್ಲಮೆಲ್ಲನೆ ಬಂದನೆ
ಮೆಲ್ಲಮೆಲ್ಲನೆ ಬಂದನೆ ಗೋಪಮ್ಮ ಕೇಳೆ
ಮೆಲ್ಲಮೆಲ್ಲನೆ ಬಂದನೆ
ಮೆಲ್ಲಮೆಲ್ಲನೆ ಬಂದು ಗಲ್ಲಕೆ ಮುದ್ದುಕೊಟ್ಟು
ನಿಲ್ಲದೆ ಓಡಿ ಹೋದ ಕಳ್ಳಗೆ ಬುದ್ದಿ ಪೇಳೆ
ಹಾಲು ಮಾರಲು ಪೋದರೆ ನಿನ್ನಯ ಕಂದ
ಕಾಲಿಗಡ್ಡವ ಕಟ್ಟಿದ
ಹಾಲಸುಂಕವ ಬೇಡಿ ಕೋಲನ್ನೆ ಅಡ್ಡಗಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ
ಮೊಸರು ಮಾರಲು ಪೋದರೆ ನಿನ್ನಯ ಕಂದ
ಹೆಸರೇನೆಂದು ಕೇಳಿದ
ಹಸನಾದ ಹೆಣ್ಣಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರನೆಲ್ಲ ಮರುಳುಮಾಡಿದನೀತ
ಹೋಗಿರೆ ರಂಗಯ್ಯನ ಮೇಲೆ ನೀವು
ದೂರೇನು ಕೊಂಡುಬಂದಿರೆ
ಯೋಗೀಶ ಪುರಂದರವಿಠ್ಠಲರಾಯನ
ತೂಗಿಪಾಡಿರೆ ಬೇಗ ನಾಗವೇಣಿಯರೆಲ್ಲ
ಮೋಸಹೋದೆನಲ್ಲ
ಮೋಸಹೋದೆನಲ್ಲ ಸಕಲವು ವಾಸುದೇವ ಬಲ್ಲ
ಭಾಸುರಾಂಗ ಶ್ರೀ ವಾಸುಕಿಶಯನನ
ಸಾಸಿರ ನಾಮವ ಲೇಸಾಗಿ ವರಿಸದೆ
ದುಷ್ಟಜನರ ಕೂಡಿ ನಾನತಿ
ಭ್ರಷ್ಟನಾದೆ ನೋಡಿ
ಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯ
ನಿಷ್ಠೆಯಿಂದ ನಾ ದ್ರಷ್ಟಿಸಿ ನೋಡದೆ
ಕಾಯವು ಸ್ಥಿರವಲ್ಲ ಎನ್ನೊಳು
ಮಾಯೆ ತುಂಬಿತಲ್ಲ
ಪ್ರಾಯಮದದಿ ಪರಸ್ತ್ರೀಯರ ಕೂಡಾಡಿ
ಕಾಯಜಜನಕನ ಗಾಯನ ಮಾಡದೆ
ಕಂಗಳಿಂದಲಿ ನೋಡೋ ದೇವ ನಿ
ನ್ನಂಗಸಂಗವ ನೀಡೋ
ಮಂಗಳಮಹಿಮ ಶ್ರೀ ರಂಗವಿಠಲ ಮುಂ
ದಂಗ ಬಾರದಂತೆ ನೀ ದಯಮಾಡೋ
ಮಾಡು ಸಿಕ್ಕದಲ್ಲ ರಾಗ: ಪಂತುರಾವಳಿ, ತಾಳ:ಆದಿ
ಮಾಡು ಸಿಕ್ಕದಲ್ಲ
ಮಾಡಿನ ಗೂಡು ಸಿಕ್ಕದಲ್ಲ
ಜೋಡು ಹೆಂಡಿರಿಗಂಜಿ ಓಡಿ ಹೋಗುವಾಗ
ಗೋಡೆ ಬಿದ್ದು ಬಯಲಾಯಿತೆಲ್ಲ |ಪ|
ಎಚ್ಚರ ಗೊಳಲಿಲ್ಲ ಮನವೆ
ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು
ಮೆಚ್ಚಿನೊಳಗೆ ಅಚ್ಚು, ಕಿಚ್ಚೆದ್ದು ಹೋಯಿತೆಲ್ಲ |೧|
ಮುಪ್ಪು ಬಂದಿತಲ್ಲ ಪಾಯಸ
ತಪ್ಪದೆ ಉಣಲಿಲ್ಲ
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ
ದೊಪ್ಪನೆ ಬಿತ್ತಲ್ಲ |೨|
ಯೋಗವು ಬಂತಲ್ಲ ಬದುಕು ವಿ-
ಭಗ ವಾಯಿತೆಲ್ಲ
ಭೋಗಿ ಶಯನ ಶ್ರೀ ಪುರಂದರ ವಿಠಲನ
ಆಗ ನೆನೆಯಲಿಲ್ಲ |೩|
ಮಂದ ಮತಿಯು ನಾನು
ಮಂದ ಮತಿಯು ನಾನು ಮದನ ಜನಕನು ನೀನು||ಪ||
ಕುಂದುಗಳ ಎಣಿಸದೆ ದಯಮಾಡಿ ಸಲಹೊ ||ಅ ಪ||
ಪಾಪ ಕರ್ತನು ನಾನು ಪಾಪ ನಾಶನು ನೀನು
ಕೋಪ ಮದ ಮತ್ಸರದಿ ತುಡಿವೆ ನಾನು
ತಾಪವನು ತರಿದು ನಿರ್ಭಯವ ಮಾಡುವೆ ನೀನು
ರೂಪ ಚಯಕೆ ಮರುಳುಗೊಂಬೆನೊ ನಾನು |೧|
ಮಂದ ಭಾಗ್ಯನು ನಾನು ಇಂದಿರಾ ಪತಿ ನೀನು
ಹಿಂದು ಮುಂದಿನ ಸುದ್ದಿ ಅರಿಯದವ ನಾನು
ತಂದೆ ಶ್ರೀ ಪುರಂದರ ವಿಠಲ ರಾಯನೇ
ಎಂದೆಂದು ಭಕ್ತರನು ಸಲಹುವೆಯೊ ನೀನು |೨|
ಮಗನಿಂದ ಗತಿಯುಂಟೆ
ಮಗನಿಂದ ಗತಿಯುಂಟೆ ಜಗದೊಳಗೆ
ನಿಗಮಾರ್ಥಸಾರ ವಿಚಾರದಿಂದಲ್ಲದೆ ಪ
ತ್ರಿಗುಣರಹಿತ ಪರಮಾತ್ಮನ ಧ್ಯಾನದಿ
ಹಗಲಿರುಳಿರಲು ನಿತ್ಯಾನಂದದಿ
ತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆ
ಮಗನಿದ್ದರೇನು ಇಲ್ಲದೆ ಹೋದರೇನು ೧
ಲಲನೆಯರು ಪುರುಷರು ತಮತಮ್ಮ ಕಾಮದ
ಸಲುವಾಗಿ ಕೂಡಲು ಶುಕ್ಲಶೋಣಿತದಿ
ಮಿಳಿತ ಮಾನಿಸಪಿಂಡ ಪೂರ್ವಕರ್ಮದಿಂದ
ನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ೨
ಪರಮದುಷ್ಟನಾಗಿ ಮರೆತು ಸದ್ಧರ್ಮವ
ಗುರುಹಿರಿಯರ ಸಾಧುಗಳ ನಿಂದಿಸಿ
ಬೆರೆತನ್ಯಜಾತಿಯ ಪರನಾರಿಯ ಕೂಡಿ
ಹಿರಿಯರ ಜರೆದು ತಾ ನರಕಕ್ಕೆ ಬೀಳುವ ೩
ಸತ್ಯನೊಬ್ಬ ಪುತ್ರ ಶಾಂತನೊಬ್ಬ ದುರ್
ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬ
ಉತ್ತಮ ನಾಲ್ವರು ಮಕ್ಕಳಿದ್ದ ಮೇಲೆ
ಹೆತ್ತರೆ ಫಲವೇನು ಹೆರದಿದ್ದರೇನಯ್ಯ ೪
ಸುತರಿಲ್ಲದವರಿಗೆ ಗತಿಯಿಲ್ಲವೆಂಬುದು
ಕೃತಕಶಾಸ್ತ್ರ ಲೌಕಿಕಭಾವಕೆ
ಕ್ಷಿತಿಯೊಳು ಬಾಡದ ಆದಿಕೇಶವ ಜಗ-
ತ್ಪತಿಯ ಧ್ಯಾನಿಪಗೆ ಸದ್ಗತಿಯಿರದೆಹೋಹುದೆ ೫
ಮಡಿ ಮಡಿ ಮಡಿಯೆಂದಡಿಗಡಿಗ್
ಮಡಿ ಮಡಿ ಮಡಿಯೆಂದಡಿಗಡಿಗ್ ಹಾರುತಿ
ಮಡಿಮಾಡುವ ಬಗೆ ಬೇರುಂಟು ಪ
ಪೊಡವಿಪಾಲಕನ ಪಾದಧ್ಯಾನವನು
ಬಿಡದೆಮಾಡುವುದು ಅದು ಮಡಿಯು ಅ.ಪ
ಬಟ್ಟೆಯ ನೀರೊಳಗದ್ದಿ ಒಣಗಿಸಿ
ಉಟ್ಟುಕೊಂಡರೆ ಅದು ಮಡಿಯಲ್ಲ
ಹೊಟ್ಟೆಯೊಳಗಿನ ಕಾಮಕ್ರೋಧವ
ಬಿಟ್ಟು ನಡೆದರೆ ಅದು ಮಡಿಯು ೧
ಇಚ್ಛೆಯಿಂದ ಮಲಮೂತ್ರ ಶರೀರವ
ನೆಚ್ಚಿ ತೊಳೆಯಲು ಅದು ಮಡಿಯೆ?
ಅಚ್ಚ್ಯುತಾನಂತನ ನಾಮವ ನೆನೆದು
ಸಂಚಿತ ಕಳೆವುದು ಅದು ಮಡಿಯು ೨
ಹಸಿದು ಭೂಸುರರು ಮಧ್ಯಾಹ್ನ ಕಾಲದಿ
ಕುಸಿದು ಮನೆಗೆ ಬಳಲುತ ಬರಲು
ಹುಸಿಯತನದಿ ಗತಿಯಿಲ್ಲವೆಂದು ತಾ
ಹಸನಾಗಿ ಉಂಬುವುದೆ ಹೊಲೆ ಮಡಿಯು ೩
ದಶಮಿ ದ್ವಾದಶಿ ಪುಣ್ಯಕಾಲದಲಿ
ವಸುದೇವ ಸುತನನು ಪೂಜಿಸದೆ
ದೋಷಕಂಜದೆ ಪರರನ್ನವ ಭಂಜಿಸಿ ಯಮ
ಪಾಶಕೆ ಬೀಳ್ವುದು ಅದು ಮಡಿಯೆ ೪
ಹಿರಿಯರ ಗುರುಗಳ ಹರಿದಾಸರುಗಳ
ಚರಣಕೆರಗಿ ಬಲು ಭಕುತಿಯಲಿ
ಪರಿಪಾಲಿಸು ಎಂದು ಪುರಂದರವಿಠಲನ
ಇರುಳು ಹಗಲು ನೆನೆವುದೆ ಮಡಿಯು ೫
೨೨೧
ಸುಳಾದಿ
ತ್ರಿಪುಟತಾಳ
ಗುರುಮುಖವಿರಬೇಕು ಹರಿದೈವನೆನಬೇಕು
ಪರ ಉಪಕಾರ ಇರಬೇಕು ಪ್ರತಿಕ್ಷಣ
ಪರರು ತನ್ನವರು ಸಮವೆಂದು ತಿಳಿಯಬೇಕು
ಹಿರಿದುಹಿಗ್ಗದೆತಾನಸ್ವತಂತ್ರನೆನಬೇಕು
ಪರಮಾಣುಸ್ಥಳದಲ್ಲಿ ಹರಿವ್ಯಾಪ್ತನೆನಬೇಕು
ಈ ಪರಿಯಲ್ಲಿ ತಿಳಿದರೆ ಅವನೆ ಮುಕ್ತಿಯೋಗ್ಯ
ಸಿರಿಯರಮಣ ನಮ್ಮ ಗೋಪಾಲವಿಠಲನ್ನ
ಕರುಣಕ್ಕೆ ಪಾತ್ರನಾದವನೆ ಇದನರಿವ ೩
ಅಟ್ಟತಾಳ
ನಿತ್ಯಸಂಸಾರಿಗೆ ಅತ್ಯಂತ ದೂರವು
ದೈತ್ಯಗಂತು ಸ್ವಪ್ನದಲ್ಲೂ ನಾಸ್ತಿ
ಸತ್ವಜೀವರಿಗೆ ಹರಿ ಕರುಣವನೆ ಮಾಡಿ
ತತ್ವಾಭಿಮಾನಿ ದೇವತೆಗಳಿಗೆ ಪೇಳಿ
ಮೊತ್ತ ದೋಷಗಳ ಕರಿಯಾಧೀನ ಮಾಡಿ
ಉತ್ತಮ ಕರ್ಮಗಳ ಮಾಡಿಸಿ
ಸತ್ಯಲೋಕಾಧಿವನ ಕಲ್ಪಾಂತರದಲ್ಲಿ
ಸತ್ವಜೀವಿಗಳು ವಿರಜೆಯಲ್ಲಿ ಬೊಮ್ಮನ ಸಹ
ಮುಕ್ತಿಯೈದುವರು ಶಕ್ತ್ಯಾನುಸಾರದಿಂದ
ಸತ್ಯಸಂಕಲ್ಪ ಗೋಪಾಲವಿಠಲನ್ನ
ಭೃತ್ಯರೆ ಧನ್ಯರೊ ಉತ್ತಮೋತ್ತಮರು ೪
ಆದಿತಾಳ
ಎತ್ತ ಪೋದರೇನು ಎತ್ತ ನಿಂತರೇನು
ಚಿತ್ತಬಂದಂತೆ ಚಿಗಿದಾಡಿದರೇನು
ಚಿತ್ತದಲಿ ಹರಿಯ ಕಾಂಬವ ಭಕುತರಿಗೆ
ಮತ್ತೆ ಇತ್ರ ಜನರವರಿಗೆ ಸರಿಯೆ
ಮತ್ತೆ ವ್ಯಾಘ್ರವ ನೋಡಿ ನರಿ ಸುಟ್ಟುಕೊಂಡಂತೆ
ಚಿತ್ತಕ್ಕೆ ಬಂದ ಪರಿಪರಿಗಣನೆಯೇನೊ
ಉತ್ತಮೋತ್ತಮ ನಮ್ಮ ಗೋಪಾಲವಿಠಲನ
ಚಿತ್ತಾನುಸಾರ ನಡೆದವರೆ ಧನ್ಯರೊ ೫
ಜತೆ
ಆವಾವ ಕರ್ಮಗಳ ದೇವಗರ್ಪಿಸುವ
ಜೀವರೆ ಧನ್ಯರೊ ಗೋಪಾಲವಿಠಲ ೬
ಮಂತ್ರವನಲ್ಲೋ ಮುರಾರಿ
ಮಂತ್ರವನಲ್ಲೋ ಮುರಾರಿ ನಿನಗೆ ನಾ
ಮತ್ತವನಲ್ಲೋ ಮುರಾರಿ ಪ
ನಿನ್ನ ಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿ
ಗೆತ್ತಣ ಸ್ವಾತಂತ್ರ್ಯ ಸಲಹಯ್ಯ ಶೌರಿ ಅ.ಪ
ರಂಗ ನೀ ಕೊಳ್ಳದ ಬಂಗಾರ ತಳಿಗೂಟ ನುಂಗುವ ನಾ ಮತ್ತವನಲ್ಲೊ
ರಂಗ ನಿನ್ನ ಮರೆದಂಗನೆಯರನಾಲಂಗಿಪ ನಾ ಮತ್ತವನಲ್ಲೊ
ರಂಗ ನಿನ್ನಂಘ್ರಿಯ ಡಿಂಗರರಂಘ್ರಿಗೆರಗದ ನಾ ಮತ್ತವನಲ್ಲೊ
ರಂಗ ನಿನ್ನೆಂಜಲೆನ್ನಂಗೈಯೊಳುಂಡು ರಾ
ಜಂಗಳನುಡುಗುವ ಬಡವ ನಾನಲ್ಲದೆ ೧
ನಾಥನೆ ನಾನೆಂಬ ಮಾತು ಕಲಿತು ಖಳಾದ್ರಾತಸಂಗದಿ ಮಂತ್ರವನಲ್ಲೊ
ನಾಥ ನಿನ್ನನು ಮೀರಿದಾತನುಂಟೆಂದು ನಿರ್ಭೀತಿಲಿರುವ ನಾ ಮತ್ತವನಲ್ಲೊ
ನಾಥ ನಿನ್ನಯ ಸ್ತುತಿ ಖ್ಯಾತಿ ಪೊಗಳದನ್ನ ಸ್ತೋತ್ರದಿ ನಾ ಮತ್ತವನಲ್ಲೊ
ನಾಥ ನಿನ್ನಡಿಯ ತೀರರಥವೆಗತಿ ಯಮಯಾತನೆಗಂಜುವ ಬೆದರುಗುಳಿಯಲ್ಲದೆ ೨
ತಂದೆ ನೀ ಮಾರಿದರೊಂದೊಪ್ಪು ಕೊಂದರೊಪ್ಪೆಂದಿಗೆ ನಾ ಮತ್ತವನಲ್ಲೊ
ತಂದೆ ನಿನ್ನಯ ಮನೆ ಹಿಂದಂಗಣದೊಳೊಯ್ದು ಬಂಧಿಸು ನಾ ಮತ್ತವನಲ್ಲೊ
ತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿ ಕಂದಿಸು ನಾ ಮತ್ತವನಲ್ಲೊ
ತಂದೆ ಪ್ರಸನ್ವೆಂಕಟಿಂದಿರೇಶಿನ್ನಾರ ಹೊಂದದ ಸೊಕ್ಕೊಂದೆ ಉಳ್ಳವನಲ್ಲದೆ ೩
ಮಧುರವು ಮಧುರಾನಾಥನ ನಾಮವು
ಮಧುರವು ಮಧುರಾನಾಥನ ನಾಮವು ಪ
ದಧಿಮಧು ದ್ರಾಕ್ಷಾಸುಧೆರಸಗಳಿಗಿಂತ ಅ.ಪ
ಸುಂದರವದನನ ಅರವಿಂದ ನಯನನ
ನಂದಕುಮಾರನ ಚೆಂದದ ನಾಮವು ೧
ಯದುಕುಲತಿಲಕನ ಸದಮಲ ಚರಿತನ
ಮದನಪಿತನ ನಾಮ ಮುದದಲಿ ಪಾಡಲು ೨
ಗಾನವಿಲೋಲನ ದಾನವಕಾಲನ
ಲೀಲೆಗಳನು ಸದಾ ಲಾಲಿಸಿ ಪೊಗಳಲು ೩
ಹೇಮವಸನ ಕೋಮಲರೂಪನ
ಭಾಮಾಕಾಂತನ ಪ್ರೇಮದ ನಾಮವು ೪
ಪನ್ನಗಶಯನನ ಚಿನ್ಮಯರೂಪನ
ಸನ್ನುತಿಸಲಿಕೆ ಪ್ರಸನ್ನನ ನಾಮವು ೫
ಮನವ ಶೋಧಿಸಬೇಕೋ
ಮನವ ಶೋಧಿಸಬೇಕೋ ನಿಚ್ಚ ದಿನ
ದಿನ ಮಾಡುವ ಪಾಪಪುಣ್ಯದ ವೆಚ್ಚ ಪ
ಧರ್ಮ ಅಧರ್ಮ ವಿಂಗಡಿಸಿ ಅ
ಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಾಲಾಚಾರದಿ ಚರಿಸಿ ಪರ
ಬೊಮ್ಮಮೂರುತಿ ಪಾದಕಮಲವ ಭಜಿಸಿ ೧
ತನುಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳಗೆ ನೀ ಜಾಣೋ ಮುಕ್ತಿ
ನಿನಗೆ ದೂರಿಲ್ಲವು ಒಂದೆ ಗೇಣೋ ೨
ಆತನವರಿಗೆ ಕೇಡಿಲ್ಲ ಅವ
ಪಾತಕಪತಿಸಂಗವ ಮಾಡ್ವನಲ್ಲ
ನೀತಿವಂತರು ಕೇಳಿರೆಲ್ಲ ನಮ
ಗಾತನೆ ಗತಿಯೀವ ಪುರಂದರವಿಠಲ ೩
ಮರೆತೆಯೇನೋ ರಂಗ
ಮರೆತೆಯೇನೋ ರಂಗ ಮಂಗಳಾಂಗ
ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ಪ
ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ
ಮ್ಯಾಲೆ ಕಲ್ಲಿಚೀಲ ಕೊಂಕಳಲ್ಲಿ
ಕಾಲಕಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ೧
ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ ೨
ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ
ಸಿರಿ ಅರಸನೆಂದು ಸೇವಕರರಿವರೋ
ಶರಣಾಗತರ ಪೊರೆವ ಶ್ರೀ ರಂಗವಿಠಲಯ್ಯ
ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು ೩
ಮಲವ ತೊಳೆಯಬಲ್ಲರಲ್ಲದೆ
ಮಲವ ತೊಳೆಯಬಲ್ಲರಲ್ಲದೆ
ಮನವ ತೊಳೆಯಬಲ್ಲರೆ ಪ
ಹಲವು ತೀರ್ಥಂಗಳಲಿ ಮುಳುಗಿ
ಹಲುಬಿದರೆ ಫಲವೇನು ಅ.ಪ
ಭೋಗವಿಷಯ ಫಲವನುಂಡು ರಾಗಲೋಭದಿಂದ ಮತ್ತ
ನಾಗಿ ಮೆರೆಯುತಿರೆ ಅವನ ಭಾಗ್ಯವಂತನೆಂಬರೆ
ಯೋಗಿಯಂತೆ ಜನರು ಮೆಚ್ಚುವಂತೆ ಹೋಗಿ ನೀರಿನಲ್ಲಿ
ಕಾಗೆಯಂತೆ ಮುಳುಗೆ ಮಾಘಸ್ನಾನಫಲವು ಬಾಹೋದೆ ೧
ಪರರ ಕೇಡುಬಯಸಿ ಗುರುಹಿರಿಯರನ್ನು ನಿಂದಿಸುತ್ತ
ಪರಮ ಸೌಖ್ಯವೆಂದು ಪರಸ್ತ್ರೀಯರನ್ನು ಬಯಸುತ್ತ
ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭತೋರಿ
ಹರಿವ ನೀರತೀರದಿ ಕುಳಿತರೇನು ಬಕಧ್ಯಾನದಿ ೨
ಕಾಸುವೀಸಕ್ಕಾಗಿ ಹರಿಯ ದಾಸನೆಂದು ತಿರುಗಿ ತಿರುಗಿ
ದೇಶದೇಶಗಳಲಿ ತೊಳಲಿ ಕಾಶಿಯಾತ್ರೆ ಪೋಗಲು
ಆಶಾಪಾಶ ಬಿಡದೆ ಮನಸು ಹೇಸಿವಿಷಯ ಬಯಸುವಂಥ
ವೇಷಧಾರಿಗಳಿಗೆ ಕಾಶಿಯಾತ್ರೆಫಲವು ಬಾಹೋದೆ ೩
ತಂದೆ ತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ
ಮಂದಗಮನೆಯರೊಡನೆ ಆನಂದದಿಂದಲಿರುವರು
ತಂದೆ ಸತ್ತಮೇಲೆ ನೂರುಮಂದಿ ವಿಪ್ರರಿಗುಣಿಸಿ ತಮ್ಮ
ತಂದೆ ತೃಪ್ತನಾದರೆಂಬರು ಮಂದಮತಿಯ ಜನಗಳು ೪
ಏನುಓದಲೇನುಫಲ ಏನುಕೇಳಲೇನುಫಲ
ಜ್ಞಾನದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಯಾಕೆ ಹೀನಚಿತ್ತನಾದ ಮೇಲೆ
ಶ್ರೀನಿವಾಸ ಪುರಂದರವಿಠಲನು ಮೆಚ್ಚುವನೆ ಮರುಳೆ ೫
ಮಾನವಜನ್ಮ ದೊಡ್ಡದು
ಮಾನವಜನ್ಮ ದೊಡ್ಡದು ಇದ
ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ ಪ
ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣುಮುಕ್ಕಿ ಮರುಳಾಗುವರೆ
ಹೆಣ್ಣುಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ ೧
ಕಾಲನ ದೂತರು ಕಾಲ್ ಪಿಡಿದೆಳೆದಾಗ
ತಾಳುತಾಳೆಂದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರಸುಳಿಗೆ ಸಿಕ್ಕಲುಬೇಡಿ ೨
ಏನು ಕಾರಣ ಯದುಪತಿಯನು ಮರೆತಿರಿ
ಧನಧಾನ್ಯ ಸತಿಸುತರು ಕಾಯುವರೆ
ಇನ್ನಾದರು ಏಕೋಭಾವದಿ ಭಜಿಸಿರೊ
ಚೆನ್ನ ಶ್ರೀ ಪುರಂದರವಿಠಲರಾಯನ ೩