ದಾಸರಪದ (ಹ)
ಹರಿ ಚಿತ್ತ ಸತ್ಯ ನಮ್ಮ ಹರಿ
ರಾಗ: ಪೂರ್ವಿಕಲ್ಯಾಣಿ, ತಾಳ: ಆದಿ
ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ
ನರ ಚಿತ್ತಕೆ ಬಂದದು ಲವಲೇಶ ನಡೆಯದು |ಹರಿ|
ಸುದತಿ ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ
ಮದುವ್ಯಾಗದಿರುವುದು ಹರಿಚಿತ್ತವು |ಹರಿ|
ಕುದುರೆ ಅಂದಾನ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿಚಿತ್ತವಯ್ಯ |ಹರಿ|
ಪುರಂದರ ವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದು ಹರಿಚಿತ್ತವಯ್ಯ |ಹರಿ|
ಹರಿ ನಾರಾಯಣ ರಾಗ: ಶಂಕರಾಭರಣ ತಾಳ: ಆದಿ
ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ ||ಪ||
ನಾರಾಯಣನೆಂಬೋ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||ಅ ಪ||
ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳ್ಕೆಯಾಯ್ತು
ಧರಣೀಶ ರುಕುಮಾಂಗದನಿಂದ ಚಿಗುರಿತು ಕುರು ಪಿತಾಮಹನಿಂದ ಹೂವಾಯ್ತು ||ಹರಿ||
ವಿಜಯನ ಸತಿಯಿಂದ ಕಾಯಾಯ್ತು ಅದು ಗಜೇಂದ್ರನಿಂದ ದೊರೆ ಹಣ್ಣಾಯ್ತು
ದ್ವಿಜ ಶುಕ ಮುನಿಯಿಂದ ಪರಿಪಕ್ವವಾಯಿತು ಅಜಮಿಳ ತಾನುಂಡು ರಸ ಸವಿದ ||ಹರಿ||
ಕಾಮಿತ ಫಲವೆಂಬ ನಾಮವೊಂದಿರಲಾಗಿ ಹೋಮ ನೇಮ ಜಪ ತಪವ್ಯಾಕೆ
ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ ನೇಮದಿಂದಲಿ ನೆನೆ ಮನವೆ ||ಹರಿ||
ಪುರಂದರದಾಸರು: ಹರಿಯಧಿಕ ಹರನಧಿಕ ರಾಗ: ಕಾಂಭೋದಿ, ತಾಳ ಝಂಪೆ
ಹರಿಯಧಿಕ ಹರನಧಿಕ ಎಂದು ಹೋರಾಡದಿರಿ ಹರಿ-ಹರರ ಭಕ್ತರೇ ಸಾಕ್ಷಿ ಲೋಕದೊಳು |ಪ|
ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ ಹರನೆಂದು ಅವನ ಪಿತ ತಾನೆ ಒಲಿದ
ಹರಿಯೆಂದು ವಿಭೀಷಣನು ಸ್ಥಿರ ಪಟ್ಟವೈದಿದ ಹರನೆಂದು ರಾವಣನು ಹತನಾದನಯ್ಯ |೧|
ಹರಿಯೆಂದು ಭೀಮ ಪರಿಪೂರ್ಣ ಕಾಮನು ಆದ ಹರನೆಂದ ಆ ಜರಾಸಂಧ ಹತನಾದ
ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ ಹರನ ಬಾಗಿಲ ಕಾಯ್ದ ಬಾಣನಳಿದ |೨|
ಹರನ ವರವನು ಪಡೆದ ಭಸ್ಮಾಸುರನು ಅವನ ಶಿರದಲ್ಲಿ ತನ್ನ ಕರವಿಡಲು ಬರಲು
ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು ವರದ ಪುರಂದರ ವಿಠಲ ಕಾಯ್ದ ದರಿಯ |೩|
ಹೆಂಡತಿ ಪ್ರಾಣ ಹಿಂಡುತಿ
ಹೆಂಡತಿ ಪ್ರಾಣ ಹಿಂಡುತಿ
ಹೆಂಡತಿ ಪ್ರಾಣ ಹಿಂಡುತಿ ||ಪ||
ದೊಡ್ಡ| ಕೊಂಡ ಕೋತಿಯಂತೆ ಕುಣಿಕುಣಿಸುತ್ತಾ||ಅ||
ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ |
ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ|
ಉತ್ತಮ ಗುರುಹಿರಿಯರ ಮಾತು ಮೀರುತ್ತಿ |
ಮೃತ್ಯುದೇವತೆಯಂತೆ ಮನೆಯೊಳಗಿರುತಿ ||೧||
ಇಲ್ಲದ್ದು ಬೇಡತ್ತಿ ಸುಳ್ಳು ಮಾತಾಡುತ್ತಿ |
ಒಳ್ಳೆ ಊಟಮಾಡುವನುಂಡು ಕುಳಿತಿರ್ಪೆನೆಂತಿ|
ಎಳ್ಳಿನಷ್ಟು ಕೆಲಸ ಮಾಡಲಾರೆನಂತಿ |
ಎಲ್ಲೆಲ್ಲಿ ತಲೆಯೆತ್ತಧಾಂಗೆ ಮಾಡುತ್ತಿ||೨||
ಹಿರಿತನಕ್ಕೋಗುತ್ತಿ ಗರುವಿಕೆ ಮಾಡುತ್ತಿ |
ನೆರೆಹೊರೆಯರ ಕಂಡು ಬಡಿದಾಡುತ್ತಿ |
ದೊರೆ ಸಿರಿಪುರಂದರವಿಠಲನ ಸ್ಮರಿಸದೆ
ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ ||೩||
ಹರಿ ಸ್ಮರಣೆ ಮಾಡೋ
ಹರಿ ಸ್ಮರಣೆ ಮಾಡೋ ನಿರಂತರ|
ಪರಗತಿಗೆ ಇದು ನಿಧಾನ ||ಪ||
ದುರಿತಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕ ಪಾವನ ನೀ||೧||
ಸ್ಮರಣೆಗೈದ ಪ್ರ್ಹ್ಲಾದನ ಪಕ್ಷಿಸಿದ| ದುರುಳ ಹಿರಣ್ಯಕನುದರವ ಸೀಳಿದ ||೨||
ತರುಣಿ ದ್ರೌಪದಿ ಮೊರೆಯಿಡಲಾ ಕ್ಷಣ|ಭರದಿಂದಕ್ಷಯವಿತ್ತ ಮಹಾತ್ಮನಾ||೩||
ಅಂದು ಅಜಾಮಿಳ ಕಂದನ ಕರೆಯಲು| ಬಂದು ಸಲಹಿ ಆನಂದವ ತೋರಿದ||೪||
ಶ್ರೀಶ ಪುರಂದರವಿಠಲರಾಯನ|ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ||೫||
ಹರಿಹರರು ಸಮರೆಂದು
ಹರಿಹರರು ಸಮರೆಂದು ಅರಿಯದಜ್ಞಾನಿಗಳು|
ಹರನ ಹೃದಯದೊಳಿರುವ ಹರಿಯ ತಾವರಿಯರು||ಪ||
ಶರಧಿಮಥನದೊಳಂದು ಸಿಂಧುಸುತೆ ಬಂದಾಗ|ಹರಿ ಹರ ವಿರಿಂಚಿ ಮೊದಲಾದ ಸುರರ|
ವರರಾರೆಂದು ನೋಡಿ ಶಂಕೆಯ ಬಿಟ್ಟು ಸಿರಿದೇವಿ|ಹರಿ ಸರ್ವವರನೆಂದು ಮಾಲೆ ಹಾಕಿದಳು||೧||
ಹರಿನಾಮ ಕ್ಷೀರವನು ಹರನಾಮ ನೀರನು|ಕ್ಷೀರ ನೀರೊಂದಾದುದಂತೆ ಇಹದು ಪರರು|
ಪರತತ್ವವರಿಯದ ನರ ತಾನು ಹರಿ ಹರರು|ಸರಿಯೆಂದು ನರಕಕ್ಕೆ ಒಳಗಾಗುತಿಹನು||೨||
ಕ್ಷೋಣಿಯೊಳು ಬಾಣನಾ ತೋಳುಗಳ ಕಡಿವಾಗ ಏಣಾಂಕಧರ ಬಾಗಿಲೊಳಗೆ ಇರಲು|
ಕಾಣರೇ ಜನರೆಲ್ಲ ಹರಿ ಪರನು ತಾನೆಂದು| ಗುಣಪೂರ್ಣ ಪುರಂದರವಿಠಲನು ಪರನು||೩||
ಹರಿಕೊಟ್ಟ ಕಾಲಕ್ಕೆ
ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ | ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವ್ಯಲ್ಲೋ ಪ್ರಾಣಿ ||ಪ||
ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂತಿಟ್ಟು| ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೋ ಪ್ರಾಣಿ |
ಹತ್ತು ಸಾವಿರ ಹೊನ್ನು ತಿಪ್ಪೇಲಿ ಪೋಪಾಗ|ಮೃತ್ತಿಗೆ ಬಾಯಲ್ಲಿ ಬಿತ್ತಲ್ಲೋ ಪ್ರಾಣಿ||೧||
ಹುಗ್ಗಿಯು ತುಪ್ಪವು ಅಗ್ಗವಾಗಿರಲಿಕ್ಕೆ|ಗುಗ್ಗುರಿಯನ್ನವ ತಿಂದ್ಯಲ್ಲೋ ಪ್ರಾಣಿ|
ವೆಗ್ಗಳದ ಭಾಗ್ಯ ಗಳಿಗೇಲಿ ಪೋಪಾಗ|ಬುಗ್ಗೆಯು ಹೊಯ್ಕೊಂಡು ಹೋದ್ಯಲ್ಲೊ ಪ್ರಾಣಿ||೨||
ನಂಟರಿಷ್ಟರು ಬಂದು ಮನೆಮುಂದೆ ಕುಳಿತಿರಲು|ಕುಂಟ ಸುದ್ದಿ ನೀನಾಡಿದ್ಯಲ್ಲೋ ಪ್ರಾಣಿ|
ಕಂಟಕ ಯಮನು ಕುಂಠಿಸುತ್ತೆಳೆವಾಗ|ನಂಟ ಪುರಂದರವಿಠ್ಠಲೆನ್ನು ಪ್ರಾಣಿ||೩||
ಹರಿಯೆ ಹದಿನಾಲ್ಕು ಲೋಕದ ದೊರೆಯೆ
ಹರಿಯೆ ಹದಿನಾಲ್ಕು ಲೋಕದ ದೊರೆಯೆ ||ಪ||
ಕರುಣದಿಂದ ತವ ಚರಣ ಕಮಲ ಷಟ್| ಚರಣನೆನಿಸಿ ಎನ್ನ ಪೊರೆವುದು ಸಂತತ||ಅ||
ವೀರ ಭಕ್ತ ಪ್ರಹ್ಲಾದ ವರದ ಕರುಣಾರಸ ಪರಿಪೂರ್ಣ |
ಸಾರಸಿ ಭವ ಮುಖ ಸುರವರ ಸನ್ನುತ ಚಾರ ಚರಣನಳೀನ||೧||
ಸಾರಿದ ಪ್ರಣತ ಜನಾರ್ತಿನಿವಾರಣ |
ಘೋರದುರಿತ ಮದಗಜ ಪಂಚಾನನ||೨||
ನಾರದ ಮುನಿವರ ಸೇವಿತ ಚರಣ|
ಸಾರಸಾಕ್ಷಿ ಶ್ರೀ ಕರಿಗಿರಿ ನಿಕೇತನ ||೩||
ಹೂ ಬೇಕೆ ಹೂವು
ಹೂ ಬೇಕೆ ಹೂವು ಪರಿಮಳದ ಹೂವು || ಪ ||
ಪರಮ ಪುರುಷ ನಮ್ಮ ಕೃಷ್ಣನ ತೋಟದ ||ಅ||
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ | ಮಲ್ಲೆ ಗುಲಾಬಿ ತಾವರೆ ಪಾರಿಜಾತ |
ಎಲ್ಲ ವಿಧದ ಮನಕ್ಲೇಶವ ಕಳೆಯಲು | ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ ||೧||
ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ|ಕೇರಿ ಕೇರಿಗಳಲ್ಲಿ ಮಾರುವುದಿಲ್ಲ|
ಭೂರಿಭಕುತಿ ಎಂಬ ಭಾರಿಯ ಬೆಲೆಗಿದು |ಮಾರೆಂದು ಪೇಳಿದ ಶೌರಿಯ ಸೊಬಗಿನ ||೨||
ರಂಗು ರಂಗುಗಳಿಂದ ಕಂಗೊಳಿಸುವ ಸ್ವಚ್ಛ | ಬಂಗಾರದ ಛವಿ ಹಂಗಿಸುವ|
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ|ನಂಘ್ರಿಯ ಸಂಗದಿ ಮಂಗಳಕರವಾದ||೩||