ಪಿ ಬಿ ಶ್ರೀನಿವಾಸ್ ಶ್ರದ್ಧಾಂಜಲಿ |
ಸಿಡ್ನಿ ನಗರ ಚಳಿಗಾಲದ ಸಂಜೆಯಲ್ಲಿ ನಡಗುತ್ತಿದ್ದರೆ, ಅದೇ ನಗರದ ವ್ಯಾಟಲ್ ಗ್ರೂವ್ ಶಾಲೆಯಲ್ಲಿ ಕನ್ನಡದ ಅಭಿಮಾನಿ ಬಳಗವು ಕೆಲವು ತಿಂಗಳಿನ ಹಿಂದೆ ಅಗಲಿದ ಸುಮಧುರ ಕಂಠದ ಗಾಯಕ ಪಿ. ಬಿ. ಶ್ರೀನಿವಾಸ್ ರವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸೇರಿದ್ದರು.2013 ಸುಗಮ ಗಾನ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಈ ಸಭೆಗೆ ಚಳಿ ಅಡ್ಡವಿಲ್ಲದಂತೆ ನೂರಾರು ಜನರು ಸೇರತೊಡಗಿದ್ದರು. ಅಗಲಿದ ನೆಚ್ಚಿನ ಗಾಯಕನ ಚಿತ್ರಕ್ಕೆ ಸ್ಥಳೀಯ ಗಾಯಕರೆಲ್ಲರೂ ಒಬ್ಬೊಬ್ಬರಾಗಿ ದೀಪ ಇಟ್ಟು “ನಿಮ್ಮ ಹಾಡುಗಳು ನಂದಾದೀಪದಂತೆ ಅಜರಾಮರ” ಎಂಬ ಭಾವದಿಂದ ತಮ್ಮ ಭಾವುಕತೆ ತೋರಿದರು.
“ಇದೇ ಹೊಸ ಹಾಡು ... “ ಹಾಡಿದ ಪುಟ್ಟ ಪೋರ ಕಾರ್ತಿಕ್ ಕುಮಾರ್, ಈ ತಲೆಮಾರಿನ ಜನರಿಗೆ ಕೂಡ ಪಿ. ಬಿ. ಎಸ್ ಅಚ್ಚು ಮೆಚ್ಚು ಎಂದು ಹಾಡಿ ತೋರಿಸಿದರು. “ನಾವಾಡುವ ನುಡಿಯೇ ...” ಯನ್ನು ಸುಶ್ರಾವ್ಯವಾಗಿ ಹಾಡಿದ ನಿರೀಕ್ಷಾ ಭಟ್ ನೆರೆದವರ ರೋಮಗಳಲ್ಲಿ ಕನ್ನಡತನ ತುಂಬುವಲ್ಲಿ ಯಶಸ್ವಿಯಾದಳು.
ಮುಂದಿನ ಎರಡು ಘಂಟೆ ಅವಧಿಯ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕರು ತಮ್ಮ ಗಾನ ನೈಪುಣ್ಯದಿಂದ ಪಿ.ಬಿ.ಎಸ್ ಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ಲಿವರ್ಪೂಲ್ ನ ಖ್ಯಾತ ಗಾಯಕ ದೀಪಕ್ “ಆಡಿಸಿ ನೋಡು” ಹಾಡನ್ನು ಸೊಗಸಾಗಿ ಹಾಡಿದರೆ, ಶ್ರೀಮತಿ ಜಯಂತಿ ಮತ್ತು ಶ್ರೀಮತಿ ಪ್ರಿಯಾ ಅವರು “ಪಂಚಮವೇದ ಪ್ರೇಮದನಾದ"ವನ್ನು ಯುಗಳ ಗೀತೆಯಾಗಿ, ಹಾಡಿದರು.ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಜ್ಯೋತ್ಸ್ನ “ ಒಲವೆ ಜೀವನ “ ಶ್ರೀ ಮಂಜುನಾಥ ಮತ್ತು ಶ್ರೀಮತಿ ಜಯಂತಿ ಅವರು “ಓಡುವನದಿ ಸಾಗರವ” ಮಧುರವಾಗಿ ಹಾಡಿದರು. ಶ್ರೀ ವಿಶ್ವನಾಥ ಅವರು “ ನಗು ನಗುತಾ ನಲಿ” , “ಆಗದು ಎಂದು", “ ಆಡುತಿರುವಾ ಮೋಡಗಳೇ” ಪಿ ಬಿ ದ್ವನಿಯಲ್ಲೇ ಹಾಡಿ ಮೆಚ್ಚುಗೆ ಪಡೆದರು. ಕಾರ್ಯಕ್ರಮದಲ್ಲಿ ಮತ್ತೆರೆಡು ಸೊಗಸಾದ ಯುಗಳ ಗೀತೆ ಮೂಡಿದವು ಶ್ರೀ ನಾಗಭೂಷಣ್ ದಂಪತಿಗಳಿ “ತಂ ನಂ ನನ್ನೀ ಮನಸು” ಹಾಡಿದರೆ ಶ್ರೀ ಆಂತೋನಿ ದಾಸ್ ದಂಪತಿಗಳು “ಎಂದೆಂದೂ ನಿನ್ನನು ಮರೆತು” ಹಾಡಿದರು. ಅದೇ ಗಾಯಕರು ಎಂದೂ ನಿನ್ನ ನೋಡುವೆ,ಬಾರೇ ಬಾರೇ,ಬರೆದೆ ನೀನು ನಿನ್ನ ಹೆಸರ, "ಹಳ್ಳಿಯಾದರೇನು ಶಿವ" ಹೀಗೇ ಕೆಲವು ಸೋಲೋ ಹಾಡುಗಳನ್ನೂ ಹಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಬಬ್ರುವಾಹನ ಚಿತ್ರದ “ಯಾರು ತಿಳಿಯರು ನಿನ್ನ ...” ಗೀತೆಗೆ ಅಭಿನಯ ಮತ್ತು ಗಾಯನದ ಮೂಲಕ ಜೀವ ಕೊಟ್ಟ ದಿವಾಕರ್ ಹೆರಳೆ ತಮ್ಮ ಕಲಾ ಚಾತುರ್ಯವನ್ನು ಪ್ರದರ್ಶಿಸಿದರು. “ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ...” ಮತ್ತು “ನಿನ್ನಕಣ್ಣ ನೋಟದಲ್ಲಿ” ಗೀತೆಯನ್ನು ಶ್ರೀನಿವಾಸ್ ಗೋಪಿನಾಥ್ ಹಾಡಿದಾಗ, ಸಭೆ ಚಪ್ಪಾಳೆ ತಟ್ಟುತ್ತ ಅನಂದಿಸದಿರದೆ ಇರಲಾಗಲಿಲ್ಲ. ಎಲ್ಲರೂ ಹಾಡಿಗೆ ಹೆಜ್ಜೆ ಹಾಕುತ್ತ, ಗುನುಗುತ್ತಾ ಹಾಡಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಒಂದೊಂದು ಹಾಡು ಗಾಯಕರಿಂದ ಹೊರಹೊಮ್ಮುತ್ತಿದ್ದಂತೆ, ನೆರೆದ ಎಲ್ಲರಲ್ಲೂ ತಾವೂ ಶ್ರದ್ಧಾಂಜಲಿಯಲ್ಲಿ ಹಾಡಿನ ಮೂಲಕ ಭಾಗವಹಿಸುತ್ತಿದ್ದೀವೇನೋ ಎನ್ನುವಷ್ಟರ ಮಟ್ಟಿಗೆ ಕಾರ್ಯಕ್ರಮ ಸಭಿಕರನ್ನು ಹಿಡಿದಿಟ್ಟಿತ್ತು. ಪಿ. ಬಿ. ಎಸ್ ಬಗ್ಗೆ ಮಾತನಾಡುತ್ತ ನಾರಾಯಣ್ ಹೇಳಿದ ಮಾತು “ಪ್ರಪಂಚದಲ್ಲಿ ಹೆಜ್ಜೆ ಗುರುತು ಮೂಡಿಸುವ ಜನರು ೬೦ ಲಕ್ಷಕ್ಕೆ ಒಬ್ಬರು” ಎನ್ನುವುದು ಅತಿಶಯೋಕ್ತಿಯಲ್ಲ. ಪಿ. ಬಿ. ಎಸ್ ಅಂತಹ ಒಬ್ಬ ಮಹಾನ್ ವ್ಯಕ್ತಿ .
ಪ್ರತಿ ಹಾಡಿಗೆ, ಅದರ ವೈಶಿಷ್ಟ್ಯ ತಿಳಿಸಿದ ನಾಗಶೈಲ ಕುಮಾರ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಕೊನೆಗೆ “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ...” ಹಾಡಿನ ಹಿನ್ನಲೆಯಲ್ಲಿ ಪಿ. ಬಿ. ಎಸ್ ರವರ ಅಪರೂಪದ ಛಾಯ ಚಿತ್ರಗಳ ಪ್ರದರ್ಶನವನ್ನು ಕನಕಾಪುರ ನಾರಾಯಣ ಮಾಡಿದಾಗ, ನೋಡಿದ ಜನರಲ್ಲಿ ಗಾಯಕನ ಅಗಲಿಕೆ ತಡೆಯಲಾರದೆ ಭಾವ ಪರವಶರಾದರು. ಅಗಲಿದ ಇನ್ನು ಅನೇಕ ಕಲಾವಿದರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.ಶ್ರೀಧರ್ ನೊಣವಿನಕೆರೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸ್ಥಳೀಯ ಗಾಯಕರನ್ನು ಬರಮಾಡಿ ಅವರ ಮೂಲಕ ಪಿ. ಬಿ. ಎಸ್ ರವರಿಗೆ ಅರ್ಥಪೂರ್ಣ ಮತ್ತು ಭಾವಪೂರ್ಣ ಶ್ರದ್ದಾಂಜಲಿ ಕೊಟ್ಟ ಸುಗಮ ಕನ್ನಡ ಕೂಟ ಈ ಮೂಲಕ ಕನ್ನಡವೇ ತನ್ನುಸಿರು ಎಂದು ಮಾಡಿ ತೋರಿಸಿತು.
ವರದಿ - ಶ್ರೀ ಬದರಿ ತ್ಯಾಮಗೊಂಡ್ಲು