ಯುಗಾದಿ ಹಬ್ಬ ರಸದೌತಣಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಕನ್ನಡ ಶಾಲೆ ಲಿವರ್ಪೂಲ್ ಮತ್ತು ಪಾರಾಮಟ ಶಾಖೆಗಳ ಆಶ್ರಯದಲ್ಲಿ ಸುಗಮ ಗಾನ ಸಮಾಜ ಹಮ್ಮಿಕೊಂಡಂತಹ ಯುಗಾದಿ ಹಬ್ಬ ರಸದೌತಣ ಕಳೆದ ಏಪ್ರಿಲ್ 9ರಂದು ಸಿಡ್ನಿಯ WattleGrove ಸಾರ್ವಜನಿಕ ಸರ್ಕಾರೀ ಶಾಲೆಯ ಆವರಣದಲ್ಲಿ ಜರುಗಿತು.
ಸಂಜೆ 6ಕ್ಕೇ ರವಿಜಾರಿ ಕತ್ತಲು ಕವಿಯುವ ಸಮಯ ಚಳಿಗಾಲಕ್ಕೆ ಎರಡು ತಿಂಗಳು ಮುಂಚೆಯೇ ಹವಾಮಾನ ತಂಪಾದ ಸಂಜೆ ವಾತಾವರಣ ಮೂಡಿಸಿತ್ತು.ಕಾರ್ಯಕ್ರಮದ ಹೆಸರೇ ಸೂಚಿಸಿದಂತೆ ರಸದೌತಣ ಆರಂಭವಾಗೇ ಬಿಟ್ಟಿತು, ಬಿಸಿಬಿಸಿ ಆಂಬೊಡೆ,ಮಂಗಳೂರು ಗೋಳಿಬಜೆ ಬಾಣಲೆಯಲ್ಲಿ ಕುದಿಯುತ್ತಿರಲು ಮೊದಲ ಒಂದು ತಾಸು ಕುರುಕಲು ತಿಂಡಿಗಳಾದ ಚಕ್ಕುಲಿ, ಮಂಗಳೂರು ಬನ್ಸ್, ಬಜ್ಜಿ ತಡವಾಗಿ ಬಂದವರಿಗೆಲ್ಲಾ ಸಿಗದಿದ್ದರೂ ಸಾಲಿನಲ್ಲಿ ಇದ್ದವರು ಸ್ವಲ್ಪ ಕಾಯಬೇಕಾಗಿತ್ತು.7ಕ್ಕೆ ಆರಂಭವಾದ ಕಾರ್ಯಕ್ರಮ ಶ್ರೀಮತಿ ಕನಕಾರಾಮಕೃಷ್ಣ ಅವರು ದೀಪ ಬೆಳಗುವುದರೊಂದಿಗೆ ಅದರ ಜೊತೆಗೇ ಲಿವರ್ಪೂಲ್ ಮಕ್ಕಳು ಹಾಡಿದ ಶಾಲೆಯ ಪ್ರಾರ್ಥನೆಯೊಂದಿಗೆ ಆರಂಭವಾಗಿ ಕಾರ್ಯಕ್ರಮ ಮೊದಲ ಐದಾರು ಹಾಡುಗಳು ಮಕ್ಕಳ ಹಾಡುಗಳು ಕೇಳುವ ಸೌಭಾಗ್ಯ ದೊರಕಿತು. ಮಕ್ಕಳು ಕನ್ನಡ ಭಾಷೆಯಲ್ಲಿ ಹಾಡುವುದು ಕೇಳುವುದೇ ಚೆನ್ನ.ರೋಷಿನಿ ಹಾಡಿದ “ ಮೂಡಲ ಮನೆಯ",ದೀಪಕ್ ಹಾಡಿದ“ಅಮ್ಮ ನಾನು ದೇವರಾಣೆ",ನಿರೀಕ್ಷ ಹಾಡಿದ “ಜಲಲ ಜಲಲ ಜಲಧಾರೆ" ನೆರೆದವರ ಮನಸೂರೆ ಮಾಡಿದರೆ ಸಿರಿ ಹಾಡಿದ “ಎಲ್ಲಿ ದಾರಿ ತಪ್ಪೇ", ಜಸ್ನ ಹಾಡಿದ“ಉಲ್ಲಾಸದ ಹೂಮಳೆ" ಮತ್ತು ಸೌಮ್ಯಾ ಹಾಡಿದ “ಎಲ್ಲೋ ಜಿನುಗಿರುವ" ಹಾಡುಗಳು ಕೇಳುಗರಿಗೆ ಅಚ್ಚರಿ ಮೂಡಿಸಿತು..
ಲಿವರ್ಪೂಲ್ ಕನ್ನಡ ಶಾಲೆಯ ಮಕ್ಕಳು ಕುಣಿದ ಜಾನಪದ ಕೋಲಾಟಕ್ಕೆ ಕಿಕ್ಕಿರಿದು ಸೇರಿದ್ದವರ ಚಪ್ಪಾಳೆ, ಶಿಳ್ಳೆಗಳು ಮುಗಿಲು ಮುಟ್ಟಿತ್ತು.ಬಣ್ಣ ಬಣ್ಣದ ಉಡುಪು ಮಿಂಚುವ ಕೋಲುಗಳು ಕಣ್-ಮನಗಳಿಗೆ ಮುದ ನೀಡಿತ್ತು. ಕಾರ್ಯಕ್ರಮದಲ್ಲಿ ಈ ಬಾರಿ ದೊಡ್ದವರು ಹಾಡಿದ ಎಲ್ಲಾ ಚಲನಚಿತ್ರ, ಭಾವ ಹಾಗೂ ಜಾನಪದ ಗೀತೆಗಳು ಹಿಂದಿನ ಎಲ್ಲಾ ಕಾರ್ಯಕ್ರಮಕ್ಕೆ ಹೋಲಿಸಿದರೆ ಸಂಖ್ಯೆ ಕಡಿಮೆ ಇದ್ದರೂ ಕೇಳಲು ಇಂಪಾಗಿ ಮಧುರವಾಗಿ ತಾಳಬದ್ಧವಾಗಿಯೂ ಇದ್ದವು.ಆಂತೋನಿ ದಾಸ್ “ಹಾಡಿದ ಮಾಮರವೆಲ್ಲೋ",ಶ್ರೀನಿವಾಸ್ ಅವರು ಹಾಡಿದ“ಈ ಭೂಮಿ ಬಣ್ಣದ ಬುಗುರಿ"ಮಧುರ ಗೀತೆಗಳು ಎನಿಸಿದರೆ,ರಾಜೇಶ್ ಹೆಗ್ಗಡೆ ಹಾಡಿದ“ಈ ಸುಂದರ ಬೆಳದಿಂಗಳ",ಡಿ.ವಿ.ಶ್ರೀನಿವಾಸ ಅವರು ಹಾಡಿದ“ಚೆಂಗುಲಾಬಿಯ" ಮತ್ತು ರೇಖಾ ಶಶಿ ಅವರು ಹಾಡಿದ“ ನಂಬಿದೇ ನಿನ್ನ ನಾದ ದೇವತೆ" ಹಾಡುಗಳು ಉತ್ತಮ ಗಾಯಕರ ಕಂಠಪರಿಚಯ ಮಾಡಿಸಿತು.ಅತೀಕ್ ಹಾಡಿದ“ಈದೇಶಚೆನ್ನ"ಅಕ್ಷತಾ ಶಟ್ಟಿ ಹಾಡಿದ “ಪಂಚಮೀ ಹಬ್ಬ",ಸೌಮ್ಯ ಮತ್ತು ರಾಜ್ ಹಾಡಿದ“ಒಂದು ಮಾತು ಕೇಳಲು ಒಂದು ವರುಶ" ಆಂತೋನಿ ಹಾಡಿದ“ನಿನ್ನಿಂದಲೇ ನಿನ್ನಿಂದಲೇ",ಅತೀಕ್ ಮತ್ತು ಝಹೀದಾ ಹಾಡಿದ“ಪ್ರೀತಿಮಾಡಬಾರದು" ಹಾಗೂ ಶ್ರೀಮತಿಯರಾದ ಪ್ರಿಯ,ಪರಿಮಳ,ರಾಜಲಕ್ಷ್ಮಿ,ಸ್ನೇಹ,ಸುಧಾ,ಕುಸುಮಾ ಅವರು ಹಾಡಿದ ಸಮೂಹ ಗಾಯನ “ಯುಗಯುಗಾದಿ ಕಳೆದರೂ" ಸೊಗಸಾಗಿ ಮೂಡಿ ಬಂದಿತು.ಸಮೂಹ ಗೀತೆಯ ಜೊತೆಗೇ ಸಂಜು ತಯಾರಿ ಮಾಡಿದ್ದ ವಿವಿಧ ಬಣ್ಣದ ಹೂವಿನ ಪವರ್ ಪಾಯಿಂಟ್ ಶೋ ಅತ್ಯಂತ ಆಕರ್ಷಣೆ ಆಗಿತ್ತು..
ರಾತ್ರಿ 9ಕ್ಕೆ ಮೊದಲೇ ಹಾಡಿನ ಪುಟ್ಟ ಕಾರ್ಯಕ್ರಮ ಮುಗಿದರೂ ಊಟದ ಸಂಭ್ರಮ ಆರಂಭವಾಗಿತ್ತು.ಕಾರ್ಯಕ್ರಮ ಮುಗಿಯುವ ಮೊದಲೇ ಜನ ಎದ್ದು ಊಟದ ಸಾಲಿನಲ್ಲಿ ಬಂದು ನಿಂತಿದ್ದು ಸ್ವಲ್ಪ ಕಸಿವಿಸಿ ಎನಿಸಿತ್ತು.ಬೇಳೆ ಹಾಗೂ ಕಾಯಿ ಒಬ್ಬಟ್ಟು ಇಪ್ಪತ್ತು ನಿಮಿಶದಲ್ಲೇ ಖಾಲಿ ಆಗಿತ್ತು. ನಂತರ ಚಿರೋಟಿ ಮತ್ತು ದೋಸೆ ನಿರೀಕ್ಷೆಗೂ ಮಿತಿಮೀರಿ ಬಂದಿದ್ದ ಜನಸಂಖ್ಯೆಗೆ ಸಾಲದೇ ಆಯಿತೇನೋ ಎನಿಸಿದರೂ ಬಿಸಿಬೇಳೆಭಾತ್, ಮೊಸರನ್ನ,ರಾಯತ,ಮೈಸೂರ್ಪಾಕ್ ಒಳಗೊಂಡ ಊಟ ಮಿಕ್ಕೆಲ್ಲರಿಗೂ ಸಾಕಷ್ಟು ಸಿಕ್ಕಿತು.ಒಟ್ಟಿನಲ್ಲಿ ತಂದಿದ್ದ ತಿಂಡಿ ತಿನಿಸುಗಳೆಲ್ಲಾ ಖಾಲಿಯಾಗಿ ಆದಿನ ಸೇವೆಗೆ ನಿಂತಿದ್ದ ಸದಸ್ಯರಿಗೆಲ್ಲಾ ಬಿಸಿಬಿಸಿ ಪಿಝ ತರಿಸುವ ಹಾಗಾಯಿತು.ಈ ಬಾರಿಯ ಧ್ವನಿವರ್ಧಕ ಸಹಾಯಕ್ಕೆ ನಿಂತಿದ್ದ ನಾಗರಾಜ್ ಮತ್ತು ಅತೀಕ್ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.ವೇದಿಕೆ ಅಲಂಕಾರ ಮತ್ತು ಅಡುಗೆ ಬಡಿಸುವ ಕಾರ್ಯವನ್ನು ಶಾಲೆಯ ಪೋಷಕರು ಸಡಗರದಿ ಮಾಡಿದರೆ, ಶಾಲೆಯ ಮಕ್ಕಳು ಹಾಡಿನ ವಿವರ ಮತ್ತು ಗಾಯಕರ ಪರಿಚಯ ಮಾಡಿಕೊಟ್ಟದ್ದು ಕಾರ್ಯಕ್ರಮದ ಹೈಲೈಟ್ ಎನ್ನಬಹುದು.