ಸಿಡ್ನಿ ದಸರಾ ಬೊಂಬೆ ಹಬ್ಬ 2012ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ವರದಿ - ಶ್ರೀಮತಿ ವೀಣಾ ಸುದರ್ಶನ್
ಸಿಡ್ನಿಯ ಸುಗಮ ಗಾನ ಸಮಾಜ ತನ್ನ 7ನೇ ವರ್ಷದ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ನೆ ತಾರೀಖಿನಂದು ಹಮ್ಮಿಕೊಂಡಿತ್ತು. ಈಗಾಗಲೇ ಕನ್ನಡದವರಿಗೆಲ್ಲ ಚಿರಪರಿಚಿತ ವಾಗಿರುವ ಈ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ಬಾರಿಯೂ ತುಂಬು ಸಭಾಂಗಣವನ್ನು ಹೊಂದಿತ್ತು.
Wattlegrove Public Schoolನ ಆವರಣವಂತೂ ಚಿಕ್ಕ ಮೈಸೂರನ್ನೇ ತಂದಿಟ್ಟ ಹಾಗಿತ್ತು. ಮೈಸೂರು ಅರಮನೆಯ ಚಿತ್ರದ ಮುಂದೆ ಮೆಟ್ಟಿಲು ಮೆಟ್ಟಿಲಲ್ಲಿ ಸಾಲಾಗಿ ಜೋಡಿಸಿಟ್ಟ ಗೊಂಬೆಗಳು, ಅದರ ಮುಂದೆಲ್ಲಾ ಬಣ್ಣ ಬಣ್ಣದ ರಂಗೋಲಿಗಳು ನಿಜವಾದ ಮೈಸೂರನ್ನೇ ನೆನಪಿಸುವಂತಿತ್ತು. ಪ್ರತಿವರ್ಷವು ಅದೇ ಬೊಂಬೆಗಳೇ ಆದರೂ ಅದೇನೋ ನೋಡುವ ಆಕರ್ಷಣೆಯಂತೂ ಮಾಸುವುದಿಲ್ಲ. ಇನ್ನು ಮಕ್ಕಳು ತಾಯಂದಿರಿಂದ ಕಲಿತು ಹಾಕುತ್ತಿದ್ದ ರಂಗೋಲಿ ನೋಡುವುದಕ್ಕೆ ಸೊಗಸಾಗಿತ್ತು. ಪುಟ್ಟ ಮಕ್ಕಳ ಕೈಯಲ್ಲಿ ಚುಕ್ಕೆಗಳು ಗೆರೆಗಳಾಗಿ, ಗೆರೆಗಳು ಬಣ್ಣ ತುಂಬಿಸಿಕೊಂಡು ಚಿತ್ರಗಳಾಗಿ ಮೈತಳೆಯುತ್ತಿದ್ದವು.
ಒಳಗೆ ಮಕ್ಕಳೆಲ್ಲ ಸಂಭ್ರಮದಿಂದ ತಮ್ಮ ಕಾರ್ಯಕ್ರಮದ ಸರದಿಗೆ ಕಾತುರರಾಗಿರುವಾಗಲೇ ಶ್ರೀಯುತ ಸುಬ್ರಮಣಿ ರಾಜು ತಮ್ಮ ಆತ್ಮೀಯ ಸ್ವಾಗತ ಭಾಷಣದೊಂದಿಗೆ ಎಲ್ಲರನ್ನು ಬರಮಾಡಿಕೊಂಡರು. ಶ್ರೀಮತಿ ಪೂರ್ಣಿಮಾ ಭಟ್ ಅವರ ಲವಲವಿಕೆಯ ನಿರೂಪಣೆಯಿಂದ ಒಟ್ಟು ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆಬಂದಿತ್ತು.
ಮೊದಲಿಗೆ ಕುಮಾರಿ ಅಂಕಿತ ಆನಂದ ಹಾಡಿದ ಗಣಪತಿಯ ಸ್ತುತಿ ಮತ್ತು ನಂತರದ 'ಜಗದೋದ್ಧಾರನ' ಹಾಡಂತೂ ಕೇಳುಗರನ್ನು ತನ್ಮಯರನ್ನಾಗಿಸಿತು. ಈ ಹುಡುಗಿ ಹೀಗೆ ಹಾಡುತ್ತಿರಲಿ ಎಂದು ಅನ್ನಿಸಿದ್ದಂತೂ ನಿಜ.
ನಂತರ ಶ್ರೀಮತಿ ಪ್ರಿಯ ಶ್ರೀನಾಥ್ ಅವರ 'ಭುವನೇಶ್ವರಿಯ ನೆನೆ ಮಾನಸವೆ' ಹಾಡು ಮತ್ತೊಮ್ಮೆ ಎಲ್ಲರನ್ನು ಮೈಸೂರಿನ ದಸರಾ ಸಂಭ್ರಮವನ್ನು ನೆನಪಿಸಿತು.ಪ್ರಿಯ ಅವರ ಹಾಡಿಗೆ ಅವರ ಬಾಳ ಸಂಗಾತಿ ಶ್ರೀನಾಥ್ ಕಂಜರದೊಡನೆ ಕೈಜೋಡಿಸಿದ್ದರು. ಸಿಡ್ನಿಯ ಲತಾ ಮಂಗೇಶ್ಕರ್ ಎಂದೇ ಪರಿಚಿತವಿರುವ ಶ್ರೀಮತಿ ಪುಷ್ಪ ಜಗದೀಶ್ ಅವರು ಹಾಡಿದ ಭಾವಗೀತೆಗಳು ಪ್ರೇಕ್ಷಕರನ್ನು ಬಾವಯಾನಕ್ಕೆ ಕರೆದೊಯ್ಯಿತು. ಎಷ್ಟೋ ದಿನಗಳ ನಂತರ ಅವರು ಈ ಕಾರ್ಯಕ್ರಮದಲ್ಲಿ ಬಂದು ಹಾಡಿದ್ದು ಒಂದು ವಿಶೇಷವಾಗಿತ್ತು.
ಚಿ| ಸ್ಕಂದ ದೇಶ್ ಕುಲಕರ್ಣಿ ಮತ್ತು ಸ್ಕಂದ ನಾಗೇಂದ್ರ ಪುಟಾಣಿಗಳ ಮುದ್ದಾದ ಶಿಶುಗೀತೆಗಳು ಎಲ್ಲರ ಚಪ್ಪಾಳೆಗಿಟ್ಟಿಸಿದವು. ಜೊತೆಗೆ ಮಕ್ಕಳ ಪೋಷಕರಿಗೂ ವಿಶೇಷ ಚಪ್ಪಾಳೆಗಳು. ಬಹಳ ಸಮಯದಿಂದ ಎಲ್ಲರೂ ಕಾಯುತ್ತಿದ್ದ "ಶ್ರೀ ಕೃಷ್ಣಾವತಾರ' ಅಂತೂ ವಿಶ್ವರೂಪದರ್ಶನ ಮಾಡಿಸಿಯೇ ಬಿಟ್ಟಿತು. ಮಕ್ಕಳ ಮುಗ್ಧ ಅಬಿನಯಕ್ಕಾಗಿ ನೋಡುಗರೆಲ್ಲರ ಮೆಚ್ಚುಗೆಯ ಜೊತೆಗೆ ಅದಕ್ಕೆಂದೇ ಮಾಡಿದ ಪರಿಕರಗಳು, ಮುಖವಾಡಗಳು ಮುಖ್ಯ ಆಕರ್ಷಣೆಯಾಗಿತ್ತು. ಇದನ್ನು ಸಂಯೋಜಿಸಿ ಮಕ್ಕಳಿಗೆ ಕಲಿಸಿದ ಶ್ರೀ ನಾರಾಯಣ್ ಕನಕಪುರ ಅವರ ಶ್ರಮ ಎಲ್ಲರ ಅಭಿನಂದನೆಗೆ ಪಾತ್ರವಾಯಿತು . ಕೊನೆಯ ದೃಶ್ಯವಾದ ವಿಶ್ವರೂಪ ದರ್ಶನ ಚೆನ್ನಾಗಿ ಮೂಡಿಬರಲು ಕಾರಣ ಶ್ರೀಮತಿ ಪ್ರತಿಭಾ ದೀಪಕ್ ಅವರು ಹೆಚ್ಚಿನ ಮುತುವರ್ಜಿಯಿಂದ ತಯಾರಿಸಿದ್ದ ಮುಖವಾಡಗಳು ಎನ್ನುವುದರಲ್ಲಿ ಸಂದೇಹವೇ ಇರಲಿಲ್ಲ.
ಇನ್ನು ಚಿಕ್ಕಮಕ್ಕಳ ಕ್ಯಾರಿಯೋಕಿಯ ಸರದಿಯಲ್ಲಿ ಹಾಡಿದ ಕುಮಾರಿಯರಾದ ಪೂಜಾ ಕುಡುವಾ, ನಿರೀಕ್ಷಾ ಭಟ್ ಮತ್ತು ಸಿಂಧು ನಾರಾಯಣ ಮುಂದೆ ಒಳ್ಳೆಯ ಗಾಯಕಿಯರಾಗುವ ಭರವಸೆ ಇತ್ತರು. ಅಷ್ಟೇ ಭರವಸೆಯ ಮತ್ತೊಬ್ಬ ಗಾಯಕಿ ಕು||ಸಿರಿ ಶ್ರೀನಿವಾಸ್ ಹಾಡಿದ ಭಾವಗೀತೆ ಮತ್ತೊಮ್ಮೆ ಕೇಳಬೇಕೆನಿಸಿತು. ಈ ಮಕ್ಕಳಿಗೆ ಇನ್ನಷ್ಟು ಅವಕಾಶಗಳು ಸಿಗುವಂತಾಗಲಿ. ಲಿವರ್ಪೂಲ್ ಮತ್ತು ಪಾರಾಮಟ ಕನ್ನಡ ಶಾಲೆಯ ಮಕ್ಕಳು 'ಕೇರ್ ಆಫ್ ಫುಟ್ಪಾತ್ ' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು. ಇದನ್ನು ಮಕ್ಕಳು ಕೇವಲ ಒಂದೇ ದಿನದಲ್ಲಿ ಕಲಿತು ಮಾಡಿದ್ದು ಎಂದು ತಿಳಿದಾಗ ಎಲ್ಲರಿಗು ಆಶ್ಚರ್ಯವೋ ಆಶ್ಚರ್ಯ. ಪ್ರತಿವರ್ಷವೂ ಸಮುದಾಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನಿಟ್ಟಿನಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಯೊಬ್ಬರನ್ನು ಗೌರವಿಸುವ ಪರಿಪಾಠ ದಂತೆ ಈ ಬಾರಿ "ಶ್ರೀ ರಮೇಶ್ ಚಂದ್ರ ಅಳಂಡಕರ್' ಅವರನ್ನು 'ಕಲಾ ಕೌಸ್ತುಭ' ಎಂದು ಗೌರವಿಸಿದ್ದು ಇಡೀ ಕಾರ್ಯಕ್ರಮದ ಹೆಗ್ಗಳಿಕೆ ಕೂಡ.
ನಂತರ ಚಲನಚಿತ್ರ ಹಾಡಿನ ಕ್ಯಾರಿಯೋಕಿಯಲ್ಲಿ ಶ್ರೀಯುತರಾದ ರಾಜು ಚೌಡಪ್ಪ, ದೀಪಕ್, ಚೇತನ್, ರಾಜೇಶ್, ಶ್ರೀಧರ್ ಮತ್ತು ಶ್ರೀನಿವಾಸ್ ಎಲ್ಲರೂ ತಮ್ಮ ನುರಿತ ಗಾಯನದೊಂದಿಗೆ ರಂಜಿಸಿದರು. ಸುಗಮ ಗಾನ ಸಮಾಜ ಸಿಡ್ನಿಯ ಕನ್ನಡದ ಹಾಡುಗಾರರನ್ನು ಈ ರೀತಿ ಒಟ್ಟಿಗೆ ತರುವ ಕೆಲಸ ಮಾಡುತ್ತಿರುವುದು ಮೆಚ್ಚ ಬೇಕಾದ್ದೇ. ಸೀತಾ ಕೇಶವ ದಂಪತಿಗಳಿಂದ ಮಕ್ಕಳಿಗೆ ಬಹುಮಾನ ವಿತರಣೆಯಾಗಿ ವಂದನಾರ್ಪಣೆ ಆಗುವ ವೇಳೆಗಾಗಲೇ ಹೊರಗಡೆ ಅಂಗಳದಲ್ಲಿ ಬಿಸಿಬೇಳೆ ಭಾತ್, ಮೊಸರನ್ನ, ಮೈಸೂರುಪಾಕಿನ ಘಮ ಘಮ ಎಲ್ಲರನ್ನು ಊಟಕ್ಕೆ ಕರೆಯಿತು.
ಈ ಕಾರ್ಯಕ್ರಮವನ್ನು ಉಚಿತವಾಗಿಯೇ ನಡೆಸಿಕೊಂಡು ಹೋಗಬೇಕೆನ್ನುವ ಆಯೋಜಕರ ನಿರ್ಧಾರಕ್ಕೆ ಒತ್ತಾಸೆಯಾಗಿ ಬಂದವರೆಲ್ಲ ತಮ್ಮ ಕೈಲಾದಷ್ಟು ಧನಸಹಾಯವನ್ನು ಮಾಡಿರುವುದು ಕೂಡ ಇಲ್ಲಿ ಗಮನಾರ್ಹ. ಕನ್ನಡಿಗರ ಇಂಥಾ ಸಂಭ್ರಮಗಳಿಗೆ ವೇದಿಕೆಯನ್ನು ಒದಗಿಸುತ್ತಿರುವ ಸುಗಮ ಕನ್ನಡ ಕೂಟದ ಉತ್ಸಾಹ ಹೀಗೆ ಮುಂದುವರೆಯಲಿ.