ಕನ್ನಡ ಸಾಹಿತ್ಯ ಸಂಗಮ |
ಕನ್ನಡ ಸಾಹಿತ್ಯ ಸಂಗಮ
ವರದಿ - ಶ್ರೀ ಬದರಿ ತ್ಯಾಮಗೊಂಡ್ಲು
ದಿನನಿತ್ಯದ ಬದುಕಿನಲ್ಲಿ ನಮ್ಮ ತಾಯ್ನುಡಿಯನ್ನು ಮಾತನಾಡುತ್ತಿದ್ದರೂ, ಆ ಭಾಷೆಯ ಹಿರಿಮೆಯ ದ್ಯೋತಕವಾದ ಸಾಹಿತ್ಯವನ್ನು ಸವಿಯುವುದೆಂದರೆ ಹಬ್ಬದೂಟವೇ ಸರಿ. ಅದೂ ಕನ್ನಡದ ನೆಲದಿಂದ ಬಹುದೂರವಿರುವ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಂತಹ ಒಂದು ಸಾಹಿತ್ಯೋತ್ಸವ ನೆರೆವೇರಿತೆಂದರೆ, ನೀವು “ಹೌದೇ” ಎನ್ನದೇ ಇರುವುದಿಲ್ಲ. ಅಂತಹ ಒಂದು ಸುಸಂದರ್ಭವು ಸಿಡ್ನಿಯ ಸುಗಮ ಕನ್ನಡ ಕೂಟದ ಹತ್ತನೇ ವರ್ಷಾಚರಣೆಯ ಕಾರ್ಯಕ್ರಮಗಳ ನಡುವೆ ಜರುಗಿತು ಎನ್ನುವುದು ಪ್ರಶಂಸನೀಯವಾದ ಸಂಗತಿಯೇ ಸರಿ.
ನವೆಂಬರ್ ೭ ಮತ್ತು ೮ ನೇ ದಿನಾಂಕವು ಸುಗಮ ಕನ್ನಡ ಕೂಟದ ದಶಮಾನೋತ್ಸವದ ಆಚರಣೆಯ ನೆಪದಲ್ಲಿ ಮೀಸಲಿಟ್ಟಿದ್ದ ಕನ್ನಡದ ಹಬ್ಬದ ದಿನಗಳು. ೭ ನೇ ತಾರೀಖಿನ ಬೆಳಗಿನ ಕಾರ್ಯಕ್ರಮಗಳು ಒಲುಮೆ, ಉತ್ಸಾಹದಿಂದ ನಡೆದು ಊಟದ ತರುವಾಯ ಶುರುವಾದ ಒಂದು ಚಿಕ್ಕ ಚೊಕ್ಕ ಕಾರ್ಯಕ್ರಮವೇ “ಸಾಹಿತ್ಯ ಸಂಗಮ” ವೆಂಬದು.
ಹಲವಾರು ಸಾಹಿತ್ಯಾಸಕ್ತರು ಸಿಡ್ನಿಯಲ್ಲಿದ್ದಾರೆ. ಆದರೆ, ಅವರೆಲ್ಲ ಒಂದು ವೇದಿಕೆಯ ಅಡಿಯಲ್ಲಿ ಬಂದದ್ದು ಇದೇ ಮೊದಲೇನೋ. ಪ್ರತಿಯೊಬ್ಬರ ಸಾಹಿತ್ಯದ ಒಲವು ಬೇರೆ ಬೇರೆಯಾಗಿದ್ದರೂ ಒಬ್ಬೊಬ್ಬರಿಂದಲೂ ಅವರ ಮೆಚ್ಚಿನ ಸಾಹಿತ್ಯದಡಿಗೆ ಕೇಳುಗರಿಗೆ ಬಡಿಸಿದಾಗ, ಚಪ್ಪಾಳೆಯ ಪ್ರಶಂಸೆ ಬಂದಿದ್ದು ಸೇರಿದ್ದ ಸಭಿಕರ ವಿಶಾಲ ಮನೋಭಾವ ತೋರಿಸುತ್ತಿತ್ತು.
ವೀಣಾ ಸುದರ್ಶನ್ ಅವರ ರಂಗಭೂಮಿಯ ಹಿನ್ನಲೆಯ ಉಚ್ಚಾರದ ನಿರೂಪಣೆಯಲ್ಲಿ ಸಾಹಿತ್ಯಾಸಕ್ತರ ಪರಿಚಯ ಮಾಡಿಕೊಡುತ್ತಾ, ವೇದಿಕೆಗೆ ಆಹ್ವಾನಿಸಲಾಯಿತು. ಹೊರದೇಶದಲ್ಲಿ ನೆಲೆಕಂಡಿದ್ದರೂ, ಎದೆಯಲ್ಲಿನ ಅಕ್ಷರ ಪ್ರೀತಿಗೆ ಅಂದು ಮಾತನಾಡಿದ ಎಲ್ಲರೂ ಉದಾಹರಣೆಯಾದರು.
ಮೊದಲಿಗೆ ಮಾತನಾಡಿದ ಡಾ|| ಮಧುಸೂದನ್ ಅವರು ಕನ್ನಡದ ಶಾಸನಗಳಿಗೆ ನಿಖರವಾದ ರೂಪ ಕೊಟ್ಟಂತಹ ಬಿ. ಎಲ್. ರೈಸ್ ಅವರ ಬಗ್ಗೆ ತಾವು ಸಿದ್ಧಪಡಿಸಿಕೊಂಡು ಬಂದಿದ್ದ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಸವಿವರವಾಗಿ ಮಾತನಾಡಿದರು. ಮೂಲತಃ ಕನ್ನಡದವರಲ್ಲದವರೂ ಕೂಡ ಕನ್ನಡದ ಬಗ್ಗೆ ತೋರಿದ ಆಸಕ್ತಿಯನ್ನು ಶ್ರೀಯುತ ಮಧುಸೂದನ್ ಅವರು ರೈಸ್ ಅವರ ಬಗ್ಗೆ ವಿವರಿಸುತ್ತ ವಿವರಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹನುಮಂತಯ್ಯನವರು ಮಾತನಾಡುತ್ತ “ಕವಿತೆಯಲ್ಲಿ ಸತ್ಯವಿರಬೇಕು” ಎಂಬ ಮಾತನ್ನು ಒತ್ತಿ ಹೇಳಿ, ತಾವೇ ಬರೆದ “ಅವ್ವ” ಎಂಬ ಪದ್ಯವೊಂದನ್ನು ಓದಿದರು. ಶ್ರೀ ಸಿಡ್ನಿ ಶ್ರೀನಿವಾಸ್ ಅವರು ಮಾತನಾಡಿ, ಅವರ ಜೀವನದಲ್ಲಿ ನಿಕಟ ಸಂಪರ್ಕಕ್ಕೆ ಬಂದಿದ್ದ ಸಾಹಿತಿಗಳ, ಅವರ ರೀತಿನೀತಿಗಳ ಸುದೀರ್ಘ ಪರಿಚಯ ಮಾಡಿಕೊಡುತ್ತ ಸಭಿಕರನ್ನು ಎಪ್ಪತ್ತರ ದಶಕಕ್ಕೆ ಕರೆದೊಯ್ದರು. ನಾಗಶಯನ ಬೆಳ್ಳಾವೆಯವರು ವೇದಿಕೆಯಲ್ಲಿ ಮಾತನಾಡುತ್ತ ಶ್ರೀಯುತ ಪಂಡಿತ್ ದತ್ತಾತ್ರೇಯ ಸದಾಶಿವ ಗರುಡ್ ಅವರ ಜೀವನ ಕುರಿತಾದ ಪುಸ್ತಕವೊಂದರ ಬಗ್ಗೆ ಬೆಳಕು ಚೆಲ್ಲಿದರು. ಆ ಪುಸ್ತಕದಲ್ಲಿ ಪಂಡಿತರು ಹೇಗೆ ತಮ್ಮ ಸಂಗೀತ ಕ್ಷೇತ್ರದಲ್ಲಿ ಕಷ್ಟ ಪಟ್ಟು ಸಾಧನೆ ಮಾಡಿದ್ದಾರೆ ಎಂಬುದರ ಉಲ್ಲೇಖವನ್ನೂ ನೀಡಿದರು. ಶ್ರೀ ಸುದರ್ಶನ್ ಅವರು ಸಭಿಕರನ್ನು ಉದ್ದೇಶಿಸಿ ಅವರಿಗೆ ಬಹಳವಾಗಿ ನಾಟಿದ ಒಂದು ಸಂಸ್ಕೃತ ಶ್ಲೋಕದಲ್ಲಿನ ಸಾರವನ್ನು ವಿವರಿಸುತ್ತ, ಅಂತೆಯೇ ಅವರನ್ನು ಬಹಳವಾಗಿ ಸೆಳೆದ ಇತರ ಕವಿಗಳ ಪದ್ಯವನ್ನು ಓದಿ, ಗೋಪಾಲ ಕೃಷ್ಣ ಅಡಿಗರಲ್ಲಿ ಅವರು ಮೆಚ್ಚಿಕೊಳ್ಳುವ ಅಂಶವನ್ನು ಹಂಚಿಕೊಂಡರು. ನಾಗಶೈಲ ಕುಮಾರ್ ಅವರು “ಯಾದ್ ವಶೇಮ್” ಎಂಬ ಪುಸ್ತಕವನ್ನು ಪರಿಚಯಿಸುತ್ತಾ, ಹೇಗೆ ಪರಿಸ್ಥಿತಿ ವಿಕೋಪಗಳು ಒಂದು ಕಥೆಯ ವಸ್ತುವಾಗಬಹುದು ಎಂದು ಒತ್ತಿ ಹೇಳಿದರು. ಅವರ ಮಾತಿಗೆ ಸ್ಪಂದಿಸುತ್ತಾ ಸಭಿಕರೊಬ್ಬರಾದ ರಾಜೇಶ್ವರಿಯವರೂ “ಯಾದ್ ವಶೇಮ್” ತಾವೂ ಮೆಚ್ಚುವ ಪುಸ್ತಕವೆಂದು ಶಿಫಾರಸ್ಸು ಮಾಡಿದರು. ನಂತರ ಮಾತನಾಡಿದ ಶ್ರೀ ಹರೀಶ ಗುರಪ್ಪನವರು ತಮ್ಮ ಮೆಚ್ಚಿನ ಬರಹಗಾರರಾದ ಕುಂ. ವೀರಭದ್ರಪ್ಪನವರ “ಗಾಂಧೀ ಕ್ಲಾಸ್” ಅನ್ನು ಪರಿಚಯಿಸುತ್ತ ಅದರ ಕೆಲವು ಭಾಗಗಳನ್ನು ಓದುವ ಮೂಲಕ ತಾವು ಏನನ್ನು ಆ ಬರಹಗಾರರಲ್ಲಿ ಇಷ್ಟಪಡುತ್ತೇನೆ ಎಂದು ಉದಾಹರಿಸಿದರು.
ಹೀಗೆ ವಿವಿದ ಸಾಹಿತ್ಯಾಸಕ್ತರು ತಮ್ಮ ತಮ್ಮ ಅನುಭವಸಾರವನ್ನು ನೆರೆದಿದ್ದ ಜನಕ್ಕೆ ಕೊಟ್ಟಾಗ, ಅಲ್ಲಿದ್ದ ಜನರೆಲ್ಲರ ಒಕ್ಕೊರಳು “ಇಂತಹ ಸಂವಾದಗಳು ಮತ್ತೆ ಹೆಚ್ಚು ಹೆಚ್ಚು ನಡೆಯಬೇಕು” ಎನ್ನುವುದಾಗಿತ್ತು. ಸಿಡ್ನಿ ಕನ್ನಡ ಶಾಲೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರಕ್ಕೆ ಸಲ್ಲುವಂತೆ ಪ್ರಾಧಿಕಾರದ ಅಧ್ಯಕ್ಷರಾದ ಹನುಮಂತಯ್ಯನವರಿಗೆ ಅರ್ಜಿಯನ್ನೂ ಸಲ್ಲಿಸಲಾಯಿತು.
ಸಂಗೀತ, ನೃತ್ಯ, ನಾಟಕ ಮುಂತಾದ ಶ್ರವ್ಯದೃಶ್ಯಮಾಧ್ಯಮವು ಜನರನ್ನು ಸೆಳೆಯುವುದು ಸಹಜ. ಆದರೆ ಈ ಸಮಾರಂಭಕ್ಕೂ ಆಸಕ್ತರು ಪಾಲ್ಗೊಂಡಿದ್ದರು ಎನ್ನುವುದು ವಾಸ್ತವ. ವರದಿಯ ಸತ್ಯಕ್ಕೆ, ಸಭೆಯಲ್ಲಿ ತುಂಬಿ ತುಳುಕಾಡುವಷ್ಟು ಜನರಿದ್ದರು ಎಂದು ಅಸತ್ಯ ಬರೆಯದಿದ್ದರೂ, ಸೇರಿದ್ದ ಜನರಲ್ಲಿ ಉತ್ಕಟವಾದ ಸಾಹಿತ್ಯಾಭಿಮಾನವು ತುಂಬಿ ತುಳುಕಾಡುತ್ತಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.