ಡಾ| ರಾಜ್ ಶ್ರದ್ಧಾಂಜಲಿ                      

ವರದಿ Report

         ಡಾ|ರಾಜ್ ಶ್ರದ್ಧಾಂಜಲಿ - ವರದಿ

ಸುಗಮ ಗಾನ ಸಮಾಜದ ಆಶ್ರಯದಲ್ಲಿ 2008 ಏಪ್ರಿಲ್ 3ರಂದು ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ -ಗಾಯಕ ಪದ್ಮಭೂಷಣ,ಫಾಲ್ಕೆ ಪ್ರಶಸ್ತಿ ವಿಜೇತ ಡಾ|ರಾಜ್ ಕುಮಾರ್ ರವರಿಗೆ ಅವರ ಹಾಡು,ನಟನೆ,ಗಾಯನ,ಗುಣಗಳನ್ನು ನೆನೆಯುವ ಕಾರ್ಯಕ್ರಮಗಳನ್ನೊಳಗೊಂಡ ಡಾ|ರಾಜ್ ಶ್ರದ್ಧಾಂಜಲಿ ಎನ್ನುವ ಕ್ಯಾರೆಯೋಕೆ ಸಂಜೆಯೊಂದನ್ನು ಏರ್ಪಡಿಸಿತ್ತು.

         ಚಳಿಗಾಲ ಇನ್ನೂ ತಿಂಗಳಿರುವಾಗಲೇ ಮೇ ತಿಂಗಳಿನಲ್ಲೇ ಎಲ್ಲಿಲ್ಲದ ಚಳಿ ಸಿಡ್ನಿಯ ವಾಟಲ್ ಗ್ರೋವ್ ಶಾಲೆಯ ಆವರಣದಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ಆವರಿಸಿತ್ತು. ಸುಮಧುರ ಗಾಯನ,ರಾಜಣ್ಣನವರ ಮೇಲಿನ ಅಭಿಮಾನ,ಬೆಚ್ಚಗಿನ ಒಳಾಂಗಣ ಪ್ರೇಕ್ಷಕರನ್ನು ಅಲುಗಾಡದಂತೆ ನೋಡಿಕೊಂಡಿತು.

         ರಾಜಣ್ಣನವರೇ ಹಾಡಿದ "ಗುರುವಾರ ಬಂತಮ್ಮ" ಶ್ರೀ ಶ್ರೀನಿವಾಸರಾವ್ ಅವರ ಸೊಗಸಾದ ಕಂಠದಿಂದ ಭಕ್ತಿ ಗೀತೆಯೊಂದಿಗೆ ನಾಂದಿಯಾಗಿ,ಶ್ರೀ ನಾಗರಾಜ್ ಅವರ ಚಿಕ್ಕ ಚೊಕ್ಕ ಸ್ವಾಗತ ಭಾಷಣದ ನಂತರ ಸಿಡ್ನಿಗೆ ಪ್ರವಾಸಿಗರಾಗಿ ಬಂದು ಕನ್ನಡ ಸಮೂದಾಯದ ಸುಮಾರು ಐವತ್ತು ಜನರಿಗೆ ತಮ್ಮ ಯೋಗಾಭ್ಯಾಸ ಕಲೆಯನ್ನು ಧಾರೆ ಎರೆದ ರಾಷ್ಟ್ರಪ್ರಶಸ್ತಿ ಪುರಸ್ಕ್ರುತ ಶ್ರೀ.ಸಿ.ವಿ.ರುದ್ರಾರಾಧ್ಯ ಮತ್ತು ಸ್ಥಳೀಯರಾದ ಶ್ರೀ.ಅಶೋಕ್ ಕುಮಾರ್ ರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.ನಂತರ ಶ್ರೀ.ಸಿ.ವಿ.ರುದ್ರಾರಾಧ್ಯ ಅವರ ಸೇವೆಯನ್ನು ಪ್ರಶಂಸಿಸಿ "ಯೋಗ ಬಂಧು"ಎಂಬ ಬಿರುದನ್ನೂ ನೀಡಲಾಯಿತು. ಇದಾದನಂತರ ನಿರಂತರ ಡಾ|ರಾಜ್ ಚಿತ್ರಗಳಿಂದಾಯ್ದ ಹಾಡುಗಳ ಸರಮಾಲೆ ಶ್ರೀಮತಿ.ಪೂರ್ಣಿಮಾ ಅವರು ಹಾಡಿದ”ಇಂದು ಎನಗೆ ಗೋವಿಂದ’,ಶ್ರೀಮತಿ ಮತ್ತು ಶ್ರೀ ಉಷಾ ನಾಗಭೂಷಣ್ ಅವರು ಹಾಡಿದ’’ಚಿನ್ನದ ಮಲ್ಲಿಗೆ ಹೂವೇ’ಯುಗಳ ಗೀತೆ,ಶ್ರೀನಟರಾಜ್ ಅವರು ಹಾಡಿದ ’ಬೆಳದಿಂಗಳಾಗಿ ಬಾ’,ಶ್ರೀದಿವಾಕರ್ ಅವರು ಹಾಡಿದ ’ಯಾರೇಕೂಗಾಡಲಿ’ ಹಾಡುಗಳು ರಾಜ್ ರವರ ಗಾಯನ ಕಲೆಯ ಪರಿಚಯ ಮಾಡಿಕೊಡುವಂತೆ ವೈವಿಧ್ಯಮಯವಾಗಿ ಸೊಗಸಾಗಿತ್ತು.

         ಚಿರಂಜೀವಿಗಳಾದ ಕಾರ್ತಿಕ್ ರಾಜ್(ಬಾನಿಗೊಂದು ಎಲ್ಲೆ ಎಲ್ಲಿದೆ) ಮತ್ತು ಸಂಜಯ್ (ಜೇನಿನ ಹೊಳೆಯೂ)ಹಾಡಿದ ಹಾಡುಗಳು ಪ್ರೇಕ್ಷಕರಿಂದ ಅತಿ ಹೆಚ್ಚು ಮೆಚ್ಚುಗೆ ಪಡೆಯಿತು.

         ಗಾನ ಸಮಾಜದ ವೇದಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಹಾಡಿದ ಶ್ರೀ.ದೀಪಕ್,ಶ್ರೀ.ಅತೀಕ್ ಅಹಮದ್ ಮತ್ತು ಶ್ರೀ ಶಂಕರ ಮಧ್ಯಸ್ಥ ಅವರಿಗೆ ಅತಿಹೆಚ್ಚಿನ ಚಪ್ಪಾಳೆಯೊಂದಿಗೆ ನೆರೆದಿದ್ದವರು ಅಭಿನಂದಿಸಿದರು.ಅದರಲ್ಲೂ ಶ್ರೀದೀಪಕ್ ಸೊಗಸಾಗಿ ಹಾಡಿದ ’ಆರಾಧಿಸುವೆ ಮದನಾರಿ’ ಹಾಡಿನ ಮಧ್ಯದಲ್ಲೇ ಚಪ್ಪಾಳೆ ಹಾಗೂ ಶಿಳ್ಳೆಗಳ ಸುರಿಮಳೆ ಸುರಿಯಿತು.

         ಶ್ರೀ.ಮಂಜುನಾಥ್ ಮತ್ತು ಶ್ರೀಮತಿ.ಪೂರ್ಣಿಮಾ ಶಿವಕುಮಾರ್ ಹಾಡಿದ”ಸಂಗೀತವೆ ನೀ ನುಡಿಯುವ ಮಾತೆಲ್ಲಾ’,ಶ್ರೀಮತಿ ಮತ್ತು ಶ್ರೀ ಪ್ರೇಮಾ ನಾಗರಾಜ್ ಹಾಡಿದ ’ಈ ಮೌನವ ತಾಳೆನು’ ಶ್ರೀಮತಿ ಶುಭಶ್ರೀ ಮತ್ತು ಶ್ರೀ ರಾಜು ಚೌಡಪ್ಪನವರು ಹಾಡಿದ ’ಸದಾ ಕಣ್ಣಲೇ’ಹಾಗೂ ಶ್ರೀಮತಿ ಮತ್ತು ಶ್ರೀ ರಾಜಲಕ್ಷ್ಮಿ ನಾರಾಯಣ ರವರು ಹಾಡಿದ ’ಒಲವೆ ಜೀವನ ಸಾಕ್ಷಾತ್ಕಾರ’ ಯುಗಳ ಗೀತೆಗಳು ಪ್ರೇಕ್ಷಕರ ಹರ್ಷೋದ್ಗಾರ ಶಿಳ್ಳೆಗಳನ್ನೂ ಸೇರಿ ಕರತಾಳ ಹೊರ ಹೊಮ್ಮಿತು.

         ಶ್ರೀ ಅಂತೋನಿ ರಾಜ್ ಹಾಡಿದ ’ಹೊಸ ಬೆಳಕೂ’ಮತ್ತು ಶ್ರೀ ಶ್ರೀನಿವಾಸ ರಾವ್ ಹಾಡಿದ’ನಾನಿರುವುದೆ ನಿಮಗಾಗಿ’ಅಣ್ಣಾವ್ರ ಧ್ವನಿಯಲ್ಲೇ ಕೇಳಿಬಂದು ಜನರ ಮನಸ್ಸಿಗೆ ಉಲ್ಲಾಸ ನೀಡಿತು.ಶ್ರೀ ಪ್ರದೀಪ್ ಅವರು ಅಣ್ಣಾವ್ರಂತೆ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದೂ ಒಂದು ಅನಿರೀಕ್ಷಿತವಾಗಿದ್ದು,”ನಾನಿರುವುದೆ ನಿಮಗಾಗಿ’ ಹಾಡಿಗೆ ಮತ್ತಷ್ಟು ಮೆರಗು ಕೊಟ್ಟಿತು.

         ಈ ಮಧ್ಯೆ ಶ್ರೀಮತಿ ದೀಪ್ತಿ ಜಿತೇಂದ್ರ ಮತ್ತು ಶ್ರೀ ನಾರಾಯಣ ಅವರು ರಾಜ್ ಬಗ್ಗೆ ನೀಡಿದ ಮಾಹಿತಿ,ಮಹಿಮೆ, ಮನ ಮೆಚ್ಚಿದ ಮುತ್ತುರಾಜನ ಜೀವನ,ಅನುಭವ,ನಡೆದು ಬಂದ ದಾರಿ,ಪ್ರಶಸ್ತಿ ಪುರಸ್ಕಾರ, ಐವತ್ತು ವರ್ಷಕ್ಕೂ ಮಿಗಿಲಾದ ಚಿತ್ರರಂಗದ ಒಡನಾಟ ಎಲ್ಲಾ ವಿಷಯಗಳ ಸಂಗ್ರಹ ಮತ್ತು ವರದಿ ಬಹುಜನರ ಮೆಚ್ಚುಗೆ ಪಡೆಯಿತು.

         ಇನ್ನು ಸಿಡ್ನಿಯಲ್ಲಿ ಮಾಧುರ್ಯಕ್ಕೆಂದೇ ಹೆಸರು ಮಾಡಿರುವ ಗಾಯಕರಾದ ಶ್ರೀ ಚೇತನ್ ’ಏನೆಂದು ನಾಹೇಳಲೀ’,ಶ್ರೀ ಶ್ರೀನಿವಾಸ ರವರು ’ಹಾಲು ಜೇನು ಒಂದಾದ ಹಾಗೆ’,ಶ್ರೀ ರಾಜು ಚೌಡಪ್ಪ’ನಾದಮಯಾ’ ಹಾಡುಗಳನ್ನು ಸುಮಧುರವಾಗಿ ಹಾಡಿ ಕಾರ್ಯಕ್ರಮದ ಗುಣಮಟ್ಟವನ್ನು ಮತ್ತಷ್ಟು ಮೇಲೇರಿಸಿದರು.

         ಅಂತ್ಯದಲ್ಲಿ ಎಂದಿನಂತೆ ಶ್ರೀ ನಾರಾಯಣ ರವರ ವಂದನಾರ್ಪಣೆಯ ಜೊತೆಗೆ ಶ್ರೀಸುದರ್ಶನ್ರವರು ಕಲಾವಿದರಿಗೆ ನೆನೆಪಿನ ಕಾಣಿಕೆ ಇತ್ತರು,ರುಚಿಯಾದ ಬಿಸಿಯಾದ ಊಟ,ಬಾದಾಮಿ ಹಾಲು ಚಳಿಗೆ ಹೇಳಿ ಮಾಡಿಸಿದ ಹಾಗಿತ್ತು.

         ಸುಗಮ ಗಾನ ಸಮಾಜವು ಈ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ, ಸಭೆ ತುಂಬಿದ್ದ ಪ್ರೇಕ್ಷಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದೆ
contactus@sugamakannada.com