ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಿಟ್ಟೆ

picture

ಹದಿನಾಲ್ಕರ ನಿನ್ನ ಮಗ ಇಂದು
ತೊದಲು ನುಡಿಯಲಿ ಅಮ್ಮ ಎಂದ
ಚೆಲ್ಲಾಡುತ ಮೊದಲ ತುತ್ತು ಅನ್ನವ
ಚಮಚ ಹಿಡಿದು ತಿಂದ

ಅಬ್ಬ ಅದೆಷ್ಟು ಹಿಗ್ಗು ನಿನ್ನ ಮೊಗದಲ್ಲಿ
ಗೌರಿಶಂಕರವನ್ನೇರಿದ ಸಾಧನೆ ನಿನ್ನ ಕಣ್ಣಲ್ಲಿ
ನಕ್ಕಾರು ಕಂಡವರು ಇದೇನು ನಿನ್ನ ಜಂಬ
ಚೂಟಿ ಮಕ್ಕಳಿಲ್ಲವೇ ಊರ ತುಂಬ

ಎಲ್ಲರಂತಲ್ಲ ನಿನ್ನ ಮಗ ,ಅವರೇನು ಬಲ್ಲರು
ಉಬ್ಬಿದ ಅವನ ತಲೆಗೆ ನಿಯತಿನ ಹಣೆಪಟ್ಟಿ
ಶೂನ್ಯ ನೋಟ ಭಾವವಿಲ್ಲದ ಮಾಟಕ್ಕೆ
ಬುದ್ದಿ ಮಾಂದ್ಯದ ಬಿರುದು

ಅದೆಷ್ಟು ಕನಸುಗಳು ನೀ ಹೆಣೆದದ್ದು
ಮೊದಲ ಹೆಜ್ಜೆ, ತೊದಲ್ನುಡಿಗಳ ಸಂಭ್ರಮಕ್ಕೆ ಕಾದಿದ್ದು
ಕನಸುಗಳ ಸುತ್ತಿಟ್ಟು ಕರಾಳ ವಿಧಿ
ಅಳಿಸಿತ್ತು ನಿನ್ನ ಮೊಗದ ಸಿರಿನಗುವ

ಒಮ್ಮೆಲೇ ಮಣಿದು ಮುಪ್ಪಾಯ್ತು, ನಿನ್ನ ಮೈಮನ
ಮಣಿಯಲೊಪ್ಪಲಿಲ್ಲ ನಿನ್ನ ತಾಯ್ತನ
ಕಾಪಿಟ್ಟ ಕಂದನ ಜೀವನದ ಧಗೆಯಿಂದ
ಬಗೆಬಗೆಯ ನೋಟದಾ ಕೊಂಕಿನಲಿ

ಹಿಡಿಯಾಗಿಸಿದೆ ಜೀವನ ಅವನೊಳಿತಿಗಾಗಿ
ಉಳಿದೆ ನೀ ಅವನ ಕುಂಟು ಬದುಕಿನಾ ಊರುಗೋಲಾಗಿ
ದೂರ ದೂರ ಸರಿಯಿತು ಲೋಕ ದಿನಗಳೆಂದಂತೆ
ದಿಟ್ಟೆ ನೀ,ನೆಟ್ಟು ನಿಂತೆ ಅವನ ನೆರಳಿನಂತೆ

ವಿಧಿಯ ಸವಾಲ ಮೆಟ್ಟಿ ನಿಂತಿತು ತಾಯ್ತನ
ಅಮ್ಮ, ನಿನ್ನ ಅಂತಃಶಕ್ತಿಗಿದೋ ನಮನ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀಮತಿ. ಅನು ಶಿವರಾಂ

ಕನ್ನಡ ಸಾಹಿತ್ಯದಲ್ಲಿ ಅತ್ಯಾಸಕ್ತಿ ಹೊಂದಿರುವ ಶ್ರೀಮತಿ ಅನು ಸ್ತ್ರೀಹಕ್ಕಿನ ಬಗ್ಗೆ ಹೆಚ್ಚು ಕಾಳಜಿ ಉಳ್ಳವರು. ನಾಟಕಾಭಿನಯ, ನಿರ್ದೇಶನ, ಕಾರ್ಯಕ್ರಮ ನಿರೂಪಣೆ, ಮುಂದಾಳತ್ವ ಮುಂತಾದ ವಿಷಯಗಳಲ್ಲಿ ಎತ್ತಿದಕೈ ಇವರದ್ದು.


ಶ್ರೀಮತಿ. ಅನು ಶಿವರಾಂ ಅವರಿಂದ ಮತ್ತಷ್ಟು ಲೇಖನಗಳು


pictureಸೆರಗು
pictureದಿಟ್ಟೆ
pictureಶ್ರುತಿ
pictureಲಾಲಿ ಹಾಡು

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023