ಸಿಡ್ನಿ ದಸರಾ/ರಾಜ್ಯೋತ್ಸವ ಹಾಡು ಹಸೆ ಹಬ್ಬ |
ಸಿಡ್ನಿಯಲ್ಲಿ ದಸರಾ ಹಬ್ಬ
ಸಾವಿರಾರು ಮೈಲಿ ದಾಟಿ ಬಂದ ಕನ್ನಡಿಗರಿಗಾಗಿ, ಸಿಡ್ನಿಯ ಸುಗಮ ಕನ್ನಡ ಕೂಟ ಮತ್ತು ಕನ್ನಡ ಶಾಲೆಯ ಪರವಾಗಿ ದಸರಾ ಹಬ್ಬದ ಆಚರಣೆಯು ನವೆಂಬರ್ ಮೊದಲನೇ ವಾರಾಂತ್ಯದಲ್ಲಿ ಟೂನ್ಗಾಬಿ ಈಸ್ಟ್ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ಇನ್ನೊಂದು ವಿಶೇಷ ಸಂಗತಿ ಎಂದರೆ ಸುಗಮ ಕನ್ನಡ ಕೂಟದ ಹತ್ತನೇ ವಾರ್ಷಿಕೋತ್ಸವ ಕೂಡ ಹೌದು. ಈ ಸಂದರ್ಭದಲ್ಲಿ ಕರ್ನಾಟಕದಿಂದ ಬಂದ ಅಥಿತಿಗಳು - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು-ಎಲ್.ಹನುಮಂತಯ್ಯ ಮತ್ತು ಕಾರ್ಯದರ್ಶಿ- ಮುರಳೀಧರ್ ಕಡೆಮನೆ ಯವರಿಂದ ಕಾರ್ಯಕ್ರಮ ಇನ್ನಷ್ಟು ಕಳೆಗಟ್ಟಿತ್ತು.
ರಂಗು ರಂಗಾದ ಬಣ್ಣ ಬಣ್ಣದ ರಂಗೋಲಿಗಳು ನಮ್ಮನ್ನು ಬರಮಾಡಿಕೊoಡವು. ವಿಶೇಷವಾಗಿ ನನ್ನ ಗಮನ ಸೆಳೆದಿದ್ದು ಕರ್ನಾಟಕದ ನಕ್ಷೆ, ಕೆಂಪು ಮತ್ತು ಹಳದಿ ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಮಕ್ಕಳು ಮತ್ತು ದೊಡ್ಡವರು ಬಿಡಿಸಿದ್ದ ರಂಗೋಲಿಗಳು ಹಬ್ಬದ ವಾತಾವರಣವನ್ನು ಉಂಟು ಮಾಡಿತ್ತು.
ಮೊದಲಿಗೆ ಶ್ರೀಮತಿ ಶುಭ ರವಿಯವರು “ಹಚ್ಚೇವು ಕನ್ನಡ ದೀಪ” ಹಾಡನ್ನು ಸುಶ್ರಾವ್ಯವಾಗಿ ಹಾಡಿ, ಹೊರನಾಡ ಕನ್ನಡದ ಕಂದಮ್ಮಗಳ ಪ್ರೇಮಕ್ಕೆ ಮತ್ತು ಅಭಿಮಾನಕ್ಕೆ ನೀರೆರದ ಅನುಭವ ನೀಡಿದರು. ಶ್ರೀಯುತರಾದ ಡಾ ಎಲ್ ಹನುಮಂತಯ್ಯನವರು ದೀಪ ಬೆಳಗಿ ಸಭೆಯನ್ನು ಉದ್ದೇಶಿಸಿ ಒಂದೆರಡು ಮಾತನಾಡಿದರು. ಶ್ರೀಮತಿ ಪೂರ್ಣಿಮಾ ಭಟ್ ಕಾರ್ಯಕ್ರಮದ ನಿರ್ವಹಣೆ ವಹಿಸಿದರು. ಅವರ ಸ್ಪಷ್ಟ ಅಚ್ಚ ಕನ್ನಡದ ಮಾತುಗಳು ಸಭಿಕರನ್ನು ಸಂತೋಷ ಪಡಿಸಿತು.
ಕುಮಾರಿ ಸಿಂಧು, ಕುಮಾರಿ ಅಂಕಿತ ಮತ್ತು ನಿರೀಕ್ಷ ಭಟ್ ಶಾಸ್ತ್ರೀಯ ಸಂಗೀತ ಹಾಡಿದರೆ, ಕುಮಾರಿ ಆಸ್ಥಾ ಮತ್ತು ಶ್ರೀಮತಿ ಅಪರ್ಣ ನಾಗಶಯನ ಹಿಂದೂಸ್ತಾನಿ ಶೈಲಿ ಸಂಗೀತವನ್ನು ಉಣಬಡಿಸಿದರು. ಸುಗಮ ಕನ್ನಡ ಕೂಟವು ನಮ್ಮ ಸಮುದಾಯದ ಕೆಲವರನ್ನು ಆರಿಸಿ, ಅವರುಗಳು ಸಮುದಾಯಕ್ಕೆ ಮಾಡುತ್ತಿರುವ ಕೆಲಸವನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿತು. ಅವರುಗಳು ಶ್ರೀಮತಿ ವೀಣಾ ಸುದರ್ಶನ್, ಅಪರ್ಣ ನಾಗಶಯನ ಮತ್ತು ಶ್ರೀಯುತ ಅಶೋಕ್. ವೇದಿಕೆಗೆ ಸನ್ಮಾನಿತ ಅಥಿತಿಗಳ ಜೊತೆಗೆ ಅವರ ಬೆನ್ನುಲುಬಾಗಿ, ಬೆಂಬಲ ಕೊಡುತ್ತಿರುವ ಅವರವರ ಧರ್ಮ ಪತ್ನಿ ಮತ್ತು ಪತಿಯರನ್ನು ಕೂಡ ಕರೆದು, ಹೃತ್ಪೂರ್ವಕವಾಗಿ ಅಭಿನಂದಿಸಿತು.
ಕನ್ನಡ ಶಾಲೆಯ ಮಕ್ಕಳಿಗೆ ಅವರ ಕಲಿಯುವ ಸಾಮರ್ಥ್ಯವನ್ನು ಗುರುತಿಸಿ, ಪ್ರಶಸ್ತಿಪತ್ರವನ್ನೂ ವಿತರಿಸಿದರು. ಶಾಲೆಗಾಗಿ ತಮ್ಮ ಸಮಯ ಕೊಡುತ್ತಿರುವ ಎಲ್ಲಾ ಗುರುಗಳನ್ನು ವೇದಿಕೆಗೆ ಬರಮಾಡಿ ಗೌರವವನ್ನು ಸಲ್ಲಿಸಲಾಯಿತು. ತದನಂತರ ಪುಟ್ಟ ಬಾಲಿಕೆಯರಾದ ಕುಮಾರಿ ವಿಭಾ, ಅನಿಷ, ಸೃಷ್ಟಿ ಮತ್ತು ದಿಯಾ ಸುಂದರವಾದ ಕಾಡಿನ ಹಾಡಿಗೆ (ಅಡವಿ ದೇವಿಯ ಕಾಡು ಜನಗಳ, ಈ ಹಾಡು …) ಹೆಜ್ಜೆ ಹಾಕಿದರು. ಎಲೆ ಮತ್ತು ಹೂವುಗಳ ಅವರ ಅಲಂಕಾರ ಮನ ಸೆಳೆಯುವಂತಿತ್ತು.
ದಸರಾದ ಮತ್ತೊಂದು ವಿಶೇಷವೆಂದರೆ ಬೊಂಬೆ. ಅದಿಲ್ಲದಿದ್ದರೆ ಹಬ್ಬ ಏನೂ ಇಲ್ಲ. ಶಾಲೆಯ ಮತ್ತೊಂದು ಕೊಟಡಿಯಲ್ಲಿ ಸಾಂಪ್ರದಾಯಿಕ ಬೊಂಬೆಗಳನ್ನು ಜೋಡಿಸಿದ್ದರು. ಮೈಸೂರ್ ಜಂಬೂ ಸವಾರಿ ನೆನಪಿಸುವ ದೊಡ್ಡ ಆನೆ ಜನರನ್ನು ಬಹಳವಾಗಿ ಆಕರ್ಷಿಸಿತು. ಬೂದು ಬಣ್ಣದ ಆನೆ ನಿಜವಾದ ಮರಿ ಆನೆ ಗಾತ್ರವನ್ನೇ ಹೋಲುತಿತ್ತು. ಮಕ್ಕಳು ಮತ್ತು ದೊಡ್ಡವರೂ ಬೊಂಬೆಗಳನ್ನು ನೋಡುತ್ತಾ ತಮ್ಮ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ದಸರಾ ಕಾರ್ಯಕ್ರಮ ಮುಗಿಯುವ ವೇಳೆಗೆ ಹೊರಗೆ ಎಲ್ಲರಿಗೂ ಭೋಜನದ ವ್ಯವಸ್ತೆಯಾಗಿತ್ತು. ಊಟದ ಸಮಯದಲ್ಲಿ ಜನಗಳು ನಗು, ಮಾತು ಕಥೆಯಲ್ಲಿ ತಲ್ಲೀನರಾದರು. ಸಿಡ್ನಿಗೆ ಹೊಸದಾಗಿ ಬಂದವರೊಬ್ಬರು, ದಸರಾ ಇಷ್ಟು ಜೋರಾಗಿ ಇಲ್ಲಿಯೂ ಮಾಡುತ್ತೀರಾ ಎಂದು ಕೇಳಿದ್ದು ನನಗೆ ಹೆಮ್ಮೆಯ ವಿಷಯವಾಗಿತ್ತು.
ವರದಿ
-ಸ್ಮಿತಾ ಮೇಲ್ಕೋಟೆ