ನಾಲ್ವರು ಕಳ್ಳರು

ನಾಲ್ಕು ಜನ ವಿದ್ಯಾವಂತ ಹುಡುಗರು ದುಡಿಯಲು ಸರಿಯಾದ ಕೆಲಸ ಸಿಗದೆ ಕೆಟ್ಟ ದಾರಿ ಹಿಡಿಯಲು ನಿರ್ಧರಿಸಿದರು. ಒಬ್ಬ ಶ್ರೀಮಂತನ ಮನೆಗೆ ಲಗ್ಗೆ ಹಾಕಿ ಬೇಕಾದಷ್ಟು ಹಣ ದೋಚಿದರು. ಊರೆಲ್ಲಾ ಕಳ್ಳರನ್ನು ಹುಡುಕುತ್ತಿರಲು ಕಾಡಿನಲ್ಲಿ ಅವಿತು ಕುಳಿತರು.ದಿನಗಳು,ವಾರಗಳು ಕಳೆದ ನಂತರ ಬೇರೊಂದು ಊರಿಗೆ ಬಂದರು. ಎಲ್ಲಾ ಹಣ ಒಮ್ಮೆಲೇ ಖರ್ಚು ಮಾಡುವ ಬದಲು ಎಲ್ಲಾದರೂ ಸಣ್ಣ ಕೆಲಸಕ್ಕೆ ಸೇರಿ ನಂತರ ನಿಧಾನವಾಗಿ ಸಂಸಾರಿಗಳಾಗಿ ಜೀವನ ಆರಂಭಿಸುವ ಯೋಜನೆ ಹಾಕಿದರು. ಅದರಂತೆ ಒಬ್ಬ ಮುದುಕಿಯ ಬಳಿ ಒಂದು ಮನೆ ಬಾಡಿಗೆಗೆ ಪಡೆದರು. ತಮ್ಮಲ್ಲಿದ್ದ ಹಣವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಆಕೆಯ ಮನೆಯಲ್ಲಿ ಇಟ್ಟುಕೊಳ್ಳಲು ಹೇಳಿದರು.ಆ ಮುದುಕಿ ಒಪ್ಪಿದಳು.
ಸ್ವಲ್ಪ ದಿನಗಳ ನಂತರ ಎಲ್ಲರೂ ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡರು, ಅದರಲ್ಲಿ ಮಾದ ಎನ್ನುವವನಿಗೆ ಮಾತ್ರ ಕೆಲಸ್ ಸಿಕ್ಕಲಿಲ್ಲ.ಆತನಿಗೆ ಆ ಪೆಟ್ಟಿಗೆಯ ಮೇಲೆ ಕಣ್ಣು ಬಿತ್ತು. ಮುದುಕಿಗೆ ಅದರಲ್ಲಿ ಬಟ್ಟೆ ಬರೆ,ಹಳೇಯ ಸಾಮು ಇದೆ ಎಂದು ಹೇಳಿದ್ದರು ಆ ನಾಲ್ವರು.ಒಂದು ದಿನ ಮಾದ ಅಜ್ಜಿಗೆ ಆ ಪೆಟ್ಟಿಗೆಯಲ್ಲಿ ಏನೋ ನೋಡಬೇಕಾಗಿದೆ ಎಂದು ಅದನ್ನು ಹೊತ್ತು ಪರಾರಿಯಾದ.ಉಳಿದವರಿಗೆ ವಿಷಯ ತಿಳಿದು ಮಾದ ಎಲ್ಲೂ ಕಾಣದೆ ಅಜ್ಜಿಯ ಮೇಲೆ ಅಪವಾದ ಹೊರಿಸಿದರು.ಅಜ್ಜಿ ಆ ಊರಿನಲ್ಲಿ ಜಾಣ ವಕೀಲನ ಮೊರೆ ಹೊಕ್ಕಳು. ಆ ವಕೀಲ ಚಾಣಕ್ಯನಷ್ಟು ಚಾಣಕ್ಷನೂ ತೆನಾಲಿ ರಾಮನಂತೆ ಜಾಣನೂ ಆಗಿದ್ದನು.ನಡೆದ ವಿಷಯವೆಲ್ಲಾ ಕೂಲಂಕುಶವಾಗಿ ಪರಿಗಣಿಸಿದನು.
ಮೂರು ಜನರನ್ನೂ ಕರೆದು ಅವರ ಹೇಳಿಕೆ ಕೇಳಿದನು.ಅವರು “ನಾವು ನಾಲ್ವರು ಆಕೆಗೆ ಒಂದು ಪೆಟ್ಟಿಗೆ ಕೊಟ್ಟಿದೆವು. ನಾವು ಎಲ್ಲಾರೂ ಬಂದಾಗ ಮಾತ್ರ ಪೆಟ್ಟಿಗೆ ಕೊಡು ಎಂದಿದ್ದೆವು ಆದರೆ ಈಗ ಇವಳು ಪೆಟ್ಟಿಗೆ ಇಲ್ಲ ಎನ್ನುತ್ತಿದ್ದಾಳೆ “ ಎಂದರು.ತಕ್ಷಣ ವಕೀಲ ಎಲ್ಲರೂ ಅಂದರೆ ನಾಲ್ಕುಜನ ಇದ್ದರಲ್ಲವೇ ನಿಮ್ಮ ಗುಂಪಿನಲ್ಲಿ? ಹಾಗಿದ್ದರೆ ಎಲ್ಲರೂ ಬನ್ನಿ ಆಕೆ ಪೆಟ್ಟಿಗೆ ಕೊಡುತ್ತಾಳೆ ಎಂದನು.ತಮ್ಮ ಕುತಂತ್ರ ನಡೆಯದೆ ಮಾದನನ್ನು ಹುಡುಕುತ್ತಾ ಇದ್ದ ಕೆಲಸವನ್ನೂ ಕಳೆದುಕೊಂಡು ಊರೂರು ಅಲೆದರು.