ಮರ್ಕಸ್ ಔರೇಲಿಯಸ್
ರೋಮನ್ ಚಕ್ರವರ್ತಿಗಳು ಸುಮಾರು ಐನೂರು ವರ್ಷಗಳ ಕಾಲ ಯೂರೋಪಿನ ಬಹುಭಾಗವನ್ನೂ ಅಲ್ಲದೆ ಬ್ರಿಟನ್ ಮತ್ತು ಪಶ್ಚಿಮ ಏಷಿಯಾದ ಕೆಲವು ಪ್ರಾಂತಗಳನ್ನೂ ಆಳಿದರು. ಇವರಲ್ಲಿ ಜೂಲಿಯಸ್ ಸೀಸರನಂತಹ ಧೀರರು ಅನೇಕರಿದ್ದರು; ಅಗಸ್ಟಸ್, ಕ್ಲಾಡಿಯಸ್ ಮುಂತಾದ ಸಮರ್ಥರೂ, ಚಾಣಾಕ್ಷರೂ ಇದ್ದರು; ಕಲಿಗುಳ ಮತ್ತು ನೀರೋ ಬಗೆಯ ಕ್ರೂರಿಗಳೂ, ಅವಿವೇಕಿಗಳೂ ಇದ್ದರು. ಆದರೆ ಈ ಚಕ್ರವರ್ತಿಗಳಲ್ಲೆಲ್ಲ ಅತ್ಯಂತ ಗೌರವಕ್ಕೂ, ಆದರಕ್ಕೂ ಪಾತ್ರರಾದವರಲ್ಲಿ ಮಾರ್ಕಸ್ ಔರೇಲಿಯಸ್ (ಕ್ರಿ.ಶ. ೧೨೧ - ೧೮೦) ಅಗ್ರಗಣ್ಯನು.
ಔರೇಲಿಯಸ್ಸನು ಒಂದು ಕುಲೀನ, ಶ್ರೀಮಂತ ಮನೆತನದಲ್ಲಿ ಜನಿಸಿದವನು. ಈತನಿಗೆ ೧೭ ವರ್ಷ ವಯಸ್ಸಾಗಿದ್ದಾಗ, ಆಗಿನ ಚಕ್ರವರ್ತಿ ಆಂಟೊನಿನಸ್ ಪಯಸ್ ಇವನನ್ನು ತನ್ನ ಉತ್ತರಾಧಿಕಾರಿಯಾಗಲು ತಕ್ಕವನೆಂದು ತಿಳಿದು, ಕಾಲಕ್ರಮದಲ್ಲಿ ತನ್ನ ಮಗಳು ಫಾಸ್ಟೀನಾಳನ್ನು ಕೊಟ್ಟು ಮದುವೆ ಮಾಡಿದನು. ಕ್ರಿ.ಶ. ೧೪೦ ರಲ್ಲಿ ಇವನನ್ನು ಚಕ್ರಾಧಿಪತ್ಯದ ಪರಮಾಧಿಕಾರಿಗಳಲ್ಲಿ ಒಬ್ಬನಾಗಿ ನೇಮಕ ಮಾಡಿದರು. ಮುಂದಿನ ಇಪ್ಪತ್ತು ವರ್ಷ ತನ್ನ ಅಧಿಕಾರವನ್ನು ದಕ್ಷತೆಯಿಂದಲೂ, ಪ್ರಾಮಾಣಿಕತೆಯಿಂದಲೂ ನಿರ್ವಹಿಸಿ ಚಕ್ರವರ್ತಿಗೆ ತುಂಬ ಅಚ್ಚುಮೆಚ್ಚಿನವನಾದನು. ಅದೇ ಸಮಯದಲ್ಲಿ ತತ್ತ್ವಶಾಸ್ತ್ರವನ್ನೂ, ನ್ಯಾಯಶಾಸ್ತ್ರವನ್ನೂ, ಆಳವಾಗಿ ಅಭ್ಯಾಸಮಾಡಿದನು. ಕ್ರಿ.ಶ. ೧೬೦ ರಲ್ಲಿ ಪಯಸ್ ದೊರೆ ಕಾಲವಾಗಲು, ಇವನನ್ನು ಸಾಮ್ರಾಜ್ಯದ ಅಧಿಪತಿಯಾಗಿ ಅಭಿಷೇಕ ಮಾಡಲಾಯಿತು. ಆಗಿನ ಕಾಲದಲ್ಲೇ ಏಕೆ, ಸುಮಾರು ಹದಿನಾರನೆಯ ಶತಮಾನದವರೆಗೂ, ಯೂರೋಪಿನಲ್ಲಿ ಯಾರಾದರೂ ರಾಜನಾದ ಕೂಡಲೇ, ಮಿಕ್ಕೆಲ್ಲ ವಾರಸುದಾರರನ್ನೂ (ಅವರು ಅಣ್ಣತಮ್ಮಂದಿರೇ ಆಗಿದ್ದರೂ ಸಹ) ಗಡೀಪಾರು ಮಾಡಿಯೋ ಅಥವಾ ಸಂಹರಿಸಿಯೋ, ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಸ್ವಭಾವತಃ ಉದಾರಿಯಾದ ಔರೇಲಿಯಸ್ಸನು ಹಾಗೇನೂ ಮಾಡಲಿಲ್ಲ, ಬದಲಿಗೆ ಸಮಸ್ತ ರಾಜ್ಯಭಾರವನ್ನು ತನ್ನ ದತ್ತು ತಮ್ಮನಾದ ಲೂಸಿಯಸ್ ವೆರಸ್ ಎಂಬುವನ ಜತೆಗೆ ಹಂಚಿಕೊಂಡನು. ರೋಮ್ ಸಾಮ್ರಾಜ್ಯಕ್ಕೆ ಒಂದೇ ಸಮಯದಲ್ಲಿ ಎರಡು ಚಕ್ರವರ್ತಿಗಳಿದ್ದುದು ಇದೇ ಮೊದಲ ಬಾರಿ.
ಔರೇಲಿಯಸ್ಸನು ಚಕ್ರವರ್ತಿಯಾಗಿದ್ದಾಗ ರೋಮ್ ಸಾಮ್ರಾಜ್ಯವು ಅನೇಕ ಕಷ್ಟನಷ್ಟಗಳಿಗೆ ಒಳಗಾಯಿತು. ಆದರೆ ಇವು ಯಾವುದಕ್ಕೂ ಇವನು ಕಾರಣಕರ್ತನಲ್ಲ. ವೆರಸ್ ನ ಸೈನಿಕರು ಏಷ್ಯಾದ ಪಾರ್ಥಿಯನ್ನರನ್ನು ಅಡಗಿಸಿ ಹಿಂತೆರಳಿದಾಗ ತಮ್ಮ ಜತೆಯಲ್ಲೇ ಪ್ಲೇಗ್ ಮಾರಿಯನ್ನೂ ತಂದರು. ಇದರ ಪರಿಣಾಮವಾಗಿ ರೋಮಿನಲ್ಲಿ ಸಾವಿರಾರು ಮಂದಿ ಮೃತರಾದರು. ತಾನು ಸ್ವತಃ ಶಾಂತಿಪ್ರಿಯನಾಗಿದ್ದರೂ, ತನ್ನ ಚಕ್ರಾಧಿಪತ್ಯದ ಬ್ರಿಟನ್, ಈಗಿನ ಜರ್ಮನಿ, ಪಶ್ಚಿಮ ಏಷ್ಯಾ ಮುಂತಾದ ಮೂಲೆಮೂಲೆಗಳಲ್ಲಿ ಆಗಾಗ ನಡೆಯುತ್ತಿದ್ದ ದಂಗೆಗಳನ್ನು ಹುಟ್ಟು ಹಾಕಲು, ಪದೇಪದೇ ಯುದ್ಧ ಮಾಡಬೇಕಾಗಿ ಬಂದಿತು. ಇದಲ್ಲದೆ, ಪ್ಲೇಗಿನ ಜತೆಗೆ ರೋಮ್ ನಗರವು ಭೂಕಂಪ, ಪ್ರವಾಹ ಇತ್ಯಾದಿ ಪ್ರಕೃತಿಯ ಪ್ರಕೋಪಕ್ಕೂ ಒಳಗಾಯಿತು. ರಾಜ್ಯದಲ್ಲಿ ಕ್ಷಾಮವೂ ಉಂಟಾಯಿತು. ಪತ್ನಿ ಫಾಸ್ಟೀನಾಳು ಹದಿಮೂರು ಮಕ್ಕಳಿಗೆ ಜನ್ಮವಿತ್ತಳು. ಆದರೆ ಅವರಲ್ಲಿ ಉಳಿದವರು ಐದು ಮಂದಿ ಮಾತ್ರ. ಜೀವಮಾನ ಪರ್ಯಂತ, ಔರೇಲಿಯಸ್ಸನ ಆರೋಗ್ಯವೂ ಅಷ್ಟೇನೂ ಉತ್ತಮ ಮಟ್ಟದ್ದಾಗಿರಲಿಲ್ಲ. ಆದರೆ ಎಂಥ ಕಷ್ಟಗಳನ್ನು ಎದುರಿಸ ಬೇಕಾದರೂ ಮತ್ತು ಕರ್ತವ್ಯ ಪಾಲನೆಗಾಗಿ ಅಪ್ರಿಯವಾದ, ತನಗೆ ಅಸ್ವಾಭಿಕವಾದ ಕೆಲಸಗಳನ್ನು ಮಾಡ ಬೇಕಾದರೂ, ಔರೇಲಿಯಸ್ಸನು ತನ್ನ ಮನಸ್ಸನ್ನು ಕಹಿ ಮಾಡಿಕೊಳ್ಳಲಿಲ್ಲ, ಸಮತೋಲತೆಯನ್ನು ಕಳೆದುಕೊಳಲಿಲ್ಲ. ಸಾಮ್ರಾಜ್ಯದ ಅಖಂಡತೆಗೆ ಭಂಗವಾಗದಂತೆ ಅದನ್ನು ರಕ್ಷಿಸಿದನು. ಆದರೆ ವರ್ಷಗಳು ಕಳೆದಂತೆ, ಆತನು ಹೆಚ್ಚು ಹೆಚ್ಚು ಅಂತರ್ಮುಖಿಯಾಗಿ, stoicism (ಎಂಥ ಕಷ್ಟವನ್ನಾದರೂ ನಿರ್ವ್ಯಗ್ರತೆಯಿಂದ ಸಹಿಸುವ ಧೀರ ಸಂಯಮತೆ) ಎಂಬ ದರ್ಶನಶಾಸ್ತ್ರಕ್ಕೆ ಒಲಿದನೆಂಬುವುದರಲ್ಲಿ ಸಂದೇಹವಿಲ್ಲ.
ಡ್ಯಾನ್ಯೂಬ್ ನದೀತೀರದಲ್ಲಿ ಅವನು ಒಮ್ಮೆ ವಿಹಾರಾರ್ಥವಾಗಿ ವಾಸಿಸುತ್ತಿದ್ದಾಗ meditations (ಚಿಂತನೆಗಳು) ಎಂಬ ಗ್ರಂಥವನ್ನು ಬರೆದನು. ಈ ಚಿಂತನೆಗಳು ಯಾರೋ ಬೇರೆಯವರು ಬರೆದದ್ದನ್ನು ಓದಿಯೋ ಅಥವಾ ಹೇಳಿದ್ದನ್ನು ಕೇಳಿಯೋ ಬರೆದವಲ್ಲ. ಅಂಥವು ಕೆಲವು ಇರಬಹುದು. ಔರೇಲಿಯಸ್ಸನೇ ತಾನು ಯಾರು ಯಾರಿಂದ ಏನೇನು ಕಲಿತೆ ಎಂಬ ಪಟ್ಟಿಯನ್ನು ಮಾಡಿದ್ದಾನೆ! ಆದರೆ ಹೆಚ್ಚಾಗಿ ಸ್ವಂತ ಅನುಭವದಿಂದ ಪಕ್ವವಾದ ಅಂತರಾಳದಿಂದ ಬಂದ ಮಾತಿಗಳಿವು. ಈ ಗ್ರಂಥವನ್ನು ಬರೆದು ಒಂದು ಸಾವಿರದ ಎಂಟುನೂರ ವರ್ಷಗಳ ಮೇಲಾಗಿದ್ದರೂ, ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಇಷ್ಟೆ. ಇವನ ಅನಿಸಿಕೆಗಳು ಸರಳವಾಗಿ ಕಂಡರೂ, ಅವು ಬಾಳ್ವೆಯ ಏರಿಳಿತಗಳನ್ನು ಸಮಾಧಾನ ಚಿತ್ತದಿಂದ ಎದುರಿಸುವ ಸಾಮರ್ಥ್ಯವನ್ನೂ, ಜೀವನವನ್ನು ಸಫಲಗೊಳಿಸಲು ಬೇಕಾದ ಮಾರ್ಗದರ್ಶನವನ್ನೂ ನಮಗೆ ಕೊಡಬಲ್ಲವು. ಅಂಥ ಚಿಂತನೆಗಳಲ್ಲಿ ಕೆಲವನ್ನು ಮಾತ್ರ ಓದುಗರ ಮುಂದಿಡುತ್ತಿದ್ದೇನೆ.
ಪ್ರತಿ ಪ್ರಾತಃಕಾಲವೂ ಇದನ್ನು ಸ್ಮರಿಸು: ಇಂದು ನನಗೆ ಕೃತಘ್ನತೆ, ದುರಹಂಕಾರ, ದ್ರೋಹ, ಸ್ವಾರ್ಥಪರತೆ ಮುಂತಾದುವುಗಳ ಅನುಭವವಾಗಬಹುದು. ಇವೆಲ್ಲವೂ ಆಗುವುದು ಇಂಥವನ್ನು ಮಾಡುವವರಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬ ಪರಿಜ್ಞಾನವಿಲ್ಲದಿರುವುದರಿಂದ. ನನ್ನ ಮಟ್ಟಿಗಾದರೋ ಒಳ್ಳೆಯದು ಯಾವುದು ಮತ್ತು ಅದರ ಹಿರಿಮೆ, ಕೆಟ್ಟದು ಯಾವುದು ಮತ್ತು ಅದರ ಕೀಳ್ಮೆ ಇವುಗಳ ಅರಿವು ಚೆನ್ನಾಗಿದೆ, ಯುಕ್ತಾಯುಕ್ತ ವಿವೇಚನೆಯಿದೆ. ಆದ್ದರಿಂದ ಇವು ಯಾವುವೂ ನನ್ನ ಮೇಲೆ ಯಾವ ಪರಿಣಾಮವನ್ನೂ ಮಾಡಲಾರವು. ಅಲ್ಲದೆ ಕೆಟ್ಟದ್ದನ್ನು ಮಾಡಿದವರಲ್ಲಿಯೂ, ನನ್ನಲ್ಲಿರುವಂತೆಯೇ ಒಂದು ದೈವಾಂಶವಿದೆ. ಹೀಗಿರುವಾಗ ಅವರ ಬಗ್ಗೆ ಕೋಪವನ್ನೂ ಮಾಡಲಾಗದು.
ವಿಧಿಯು ನಿನಗೆ ಕಷ್ಟವೋ ಅಥವಾ ಸುಖವೋ, ಏನೇನನ್ನು ತರುತ್ತದೋ ಅದನ್ನು ನಿರ್ವಿಕಾರವಾಗಿ ಸ್ವೀಕರಿಸು, ಈ ಜೀವನದಲ್ಲಿ ದೇವರು ಯಾರನ್ನು ನಿನ್ನ ಒಡನಾಡಿಗಳನ್ನಾಗಿ ಮಾಡಿರುವನೋ ಅವರನ್ನು ಮನಃಪೂರ್ವಕವಾಗಿ ಪ್ರೀತಿಸು.
ನಿನ್ನ ಜೀವನದ ಪ್ರತಿಯೊಂದು ಕರ್ತವ್ಯವನ್ನೂ, ಅದೇ ಕೊಟ್ಟಕೊನೆಯದೋ ಎಂಬಂತೆ ನೆರವೇರಿಸು.
ಕೋಪದ ಕಾರಣಗಳಿಗಿಂತಲೂ, ಅಂಥ ಕೋಪದ ಪರಿಣಾಮಗಳೇ ಹೆಚ್ಚು ದುಃಖಕರವಾದುವು.
ನಿನ್ನ ನೆರೆಯವನು ಏನು ಹೇಳುತ್ತಾನೆ, ಏನು ಮಾಡುತ್ತಾನೆ ಅಥವಾ ಏನು ಯೋಚಿಸುತ್ತಾನೆ ಎಂದು ಚಿಂತಿಸಬೇಡ. ಹಾಗೆ ಚಿಂತಿಸುವುದು ವೃಥಾ ಕಾಲಹರಣ.
ಕೆಲಸವು ಸರಿಯಲ್ಲದಿದ್ದರೆ (ಅಧರ್ಮವಾಗಿದ್ದರೆ) ಅದನ್ನು ಮಾಡಬೇಡ; ಮಾತು ನಿಜವೆಂದು ನಿನಗೆ ತೋರದಿದ್ದರೆ, ಅಂಥ ಮಾತನ್ನು ಆಡಬೇಡ..
ನಿನ್ನಲ್ಲಿ ಏನಿಲ್ಲ ಎಂದು ಯೋಚಿಸುವ ಬದಲು, ನಿನ್ನಲ್ಲಿ ಆಗಲೇ ಎಷ್ಟಿದೆ ಎಂದು ಯೋಚಿಸು.
ಯಾರಾದರೂ ನಿನಗೆ ಅನ್ಯಾಯ ಮಾಡಿದ್ದರೆ ಅಥವಾ ನಿನ್ನನ್ನು ನೋಯಿಸಿದ್ದರೆ, ಅದಕ್ಕೆ ಸರಿಯಾದ ಮುಯ್ಯಿ ನೀನೂ ಅವರಂತೆ ಮಾಡದಿರುವುದು.
ಯಾವ ಧನವನ್ನು ನೀನು ಒಳ್ಳೆಯ ಕಾರ್ಯಕ್ಕಾಗಿ ದಾನ ಮಾಡಿರುವೆಯೋ, ಅದೇ ನಿನ್ನಲ್ಲಿ ಶಾಶ್ವತವಾಗಿ ನಿಲ್ಲುವ ಐಶ್ವರ್ಯ.
ನಿನ್ನ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ನಿನಗೆ ಹತೋಟಿಯಿರುವುದಿಲ್ಲ, ಇದು ನಿಜ. ಆದರೆ ನಿನ್ನ ಮನಸ್ಸಿನ ನಿಯಂತ್ರಣ ನಿನ್ನ ಕೈಯಲ್ಲಿದೆ. ಇದು ನಿನಗೆ ಅರಿವಾದರೆ ಕಷ್ಟವನ್ನು ಸೈರಿಸುವ ಶಕ್ತಿ ತಾನಾಗಿಯೇ ಬರುವುದು.
ಮೇಲೆ ಉದ್ಧರಿಸಿರುವ ಚಿಂತನೆಗಳಲ್ಲಿ ಕೆಲವಾದರೂ, ಭಾರತದ ದಾರ್ಶನಿಕರಾದ ತಿರುವಳ್ಳುವರ್, ಭರ್ತೃಹರಿ, ಸರ್ವಜ್ಞ ಮುಂತಾದವರ ವಿಚಾರಗಳನ್ನು ನೆನಪಿಗೆ ತರುತ್ತವೆಯಲ್ಲವೆ? ಅದು ಹೇಗಾದರೂ ಇರಲಿ. ಮಾರ್ಕಸ್ ಔರೇಲಿಯಸ್ಸನ ಜೀವನ ಚರಿತ್ರೆಯನ್ನೂ, ಅವನ ಅನಿಸಿಕೆಗಳನ್ನೂ ಗಮನಿಸಿ ನೋಡಿದರೆ, ಭಗವದ್ಗೀತೆಯ "ಸ್ಥಿತಪ್ರಜ್ಞ" ನೂ, ಧಮ್ಮಪದದ "ನಿಜವಾದ ಬ್ರಾಹ್ಮಣ" ನೂ ಇಂಥವರೇ ಇರಬೇಕೇನೋ ಎನ್ನಿಸುತ್ತದೆ.